ಶೃಂಗೇರಿ ವಿದ್ಯಾರ್ಥಿ ಆತ್ಮಹತ್ಯೆ: ಎಸ್ಪಿ-ಐಜಿ ನೇತೃತ್ವದಲ್ಲಿ ತನಿಖೆ
ಮಂಗಳೂರು, ಜನವರಿ 12 : ಶೃಂಗೇರಿಯಲ್ಲಿ ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣದ ತನಿಖೆ ಎಸ್ಪಿ, ಐಜಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಎಬಿವಿಪಿ ಮತ್ತು ಎನ್ಎಸ್ಯುಐ ಕಾರ್ಯಕರ್ತರ ನಡುವೆ ಗಲಾಟೆ ವಿಚಾರವಾಗಿ ತನ್ನ ಮೇಲೆ ಪ್ರಕರಣ ದಾಖಲಾಗಿದ್ದಕ್ಕೆ ಮನನೊಂದು ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ.[ಶೃಂಗೇರಿ ವಿದ್ಯಾರ್ಥಿ ಆತ್ಮಹತ್ಯೆ: ಮಂಗ್ಳೂರಲ್ಲಿ ಎಬಿವಿಪಿ ಬೃಹತ್ ಪ್ರತಿಭಟನೆ]
ಈ ಬಗ್ಗೆ ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ ಅವರು, ಶೃಂಗೇರಿಯಲ್ಲಿ ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣವನ್ನು ಎಸ್ಪಿ ಮತ್ತು ಐಜಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ. ಬಳಿಕ ಪೊಲೀಸರೇ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.
ಆತ್ಮಹತ್ಯೆಗೆ ಕಾರಣವೇನು?: ಜನವರಿ 7ರಂದು ಶೃಂಗೇರಿಯಲ್ಲಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಅಂಕಣಕಾರ ಚಕ್ರವರ್ತಿ ಸೂಲಿಬೆಲೆಯನ್ನು ಆಹ್ವಾನಿಸಲಾಗಿತ್ತು.
ಆದರೆ, ಸೂಲೆಬೆಲೆ ಬರುವುದನ್ನು ವಿರೋಧಿಸಿ ಎನ್ಎಸ್ಯುಐ ಕಾರ್ಯಕರ್ತರು ಜ.7ರಂದು ಪತ್ರಿಕಾಗೋಷ್ಠಿ ಕರೆದಿದ್ದರು. ಈ ವಿಚಾರವಾಗಿ ಎಬಿವಿಪಿ ಮತ್ತು ಎನ್ಎಸ್ಯುಐ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.
ಗಲಾಟೆಗೆ ಸಂಬಂಧಿಸಿ ಅಭಿಷೇಕ್ ಸೇರಿದಂತೆ ನಾಲ್ವರು ಎಬಿವಿಪಿ ಕಾರ್ಯಕರ್ತರ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಚಾರದಲ್ಲಿ ನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದೇ ವೇಳೆ ಪೊಲೀಸರ ವೇತನ ಹೆಚ್ಚಳ ವಿಚಾರದ ಬಗ್ಗೆ ಮಾತನಾಡಿದ ಅವರು, '2 ತಿಂಗಳ ಬಳಿಕ ವೇತನ ಆಯೋಗದಿಂದ ವರದಿ ಸಲ್ಲಿಕೆಯಾಗಲಿದೆ. ವರದಿ ಬಂದ ತಕ್ಷಣವೇ ವೇತನ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಸ್ವಾಮಿ ವಿವೇಕಾನಂದರ ಜನ್ಮದಿನ. ಈ ವೇಳೆ ವಿವೇಕಾನಂದವರನ್ನು ನೆನಪಿಸಿಕೊಂಡ ಗೃಹ ಸಚಿವರು, ' ವಿವೇಕಾನಂದರ ಆದರ್ಶ ಯುವಕರು ಪಾಲಿಸಬೇಕು. ದೇಶವನ್ನು ಸದೃಢಗೊಳಿಸಲು ಯುವಕರು ಪಣತೊಡಬೇಕು. ಆಗ ವಿವೇಕಾನಂದರ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದರು.
ಗುರುವಾರ ಬೆಳಿಗ್ಗೆ 8.55 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವರು ಬೆಳಗ್ಗೆ 9.30 ಕ್ಕೆ ಮಂಗಳಾದೇವಿಯ ರಾಮಕೃಷ್ಣ ಆಶ್ರಮದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸಹ ಪಾಲ್ಗೊಂಡಿದ್ದರು.
ಅಲ್ಲದೇ ಮಂಗಳೂರು ನಗರ ಪೋಲಿಸ್ ಆಯುಕ್ತರ ಕಚೇರಿಯಲ್ಲಿ 25 ಪೋಲಿಸ್ ಗಸ್ತು ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದರು.