8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್
ವಾಹನಗಳೇ ಇಲ್ಲದ ಕಾಲದಲ್ಲಿ ಒಂದು ಎತ್ತಿನ ಗಾಡಿಯೋ, ಜಟಕಾ ಬಂಡಿಯೋ ಹತ್ತಿ ಊರಿದೂರಿಗೆ ದಿನಗಟ್ಟಲೆ ಪ್ರಯಾಣ ಬೆಳೆಸುತ್ತಿದ್ದರು ನಮ್ಮ ಹಿಂದಿನ ತಲೆಮಾರಿನವರು. ಇವೆರಡು ವಾಹನ ಬಿಟ್ಟರೆ ನಂತರ ಅವರ ಪಾಲಿಗೆ ದಕ್ಕುತ್ತಿದ್ದು ಪರಿಸರ ಸ್ನೇಹಿ ಸೈಕಲ್. ಸೈಕಲ್ ನಲ್ಲಿ ಎರಡು ಜನ ತಪ್ಪಿದರೆ ಮಕ್ಕಳು ಸೇರಿದಂತೆ ನಾಲ್ಕು ಜನ ಹೋಗ್ಬಹುದು. ಆದರೆ ಇಲ್ಲೊಂದು ವಿಭಿನ್ನ ಸೈಕಲ್ ನಲ್ಲಿ ಎಂಟು ಜನ ಹೋಗ್ಬಹುದಂತೆ!
ಮಂಗಳೂರಿನಲ್ಲಿರುವ ವಿಭಿನ್ನ ಸೈಕಲೊಂದರಲ್ಲಿ ಬರೋಬ್ಬರಿ ಎಂಟು ಮಂದಿ ಸಂಚರಿಸಿದರೂ ಓರ್ವನೇ ಆರಾಮವಾಗಿ ಪೆಡಲ್ ತುಳಿಯುತ್ತಾನೆ. ಹೌದು ಇಂತಹದೊಂದು ವಿಭಿನ್ನ ಸಂಶೋಧನೆಯನ್ನು ಮಾಡಿ ಯಶಸ್ವಿಯಾದವರೇ ಇಂದಿನ ನಮ್ಮ ಒನ್ ಇಂಡಿಯಾ ಹೀರೋ. ಮಂಗಳೂರಿನ ಬಿಜೈ ಮ್ಯೂಸಿಯಂ ರಸ್ತೆಯ ನಿವಾಸಿ ಜಾನ್ ಡಿಸೋಜಾ.
ಪರಿಸರ ಮಿತ್ರ ಸೈಕಲ್ ನಲ್ಲಿ ಇಬ್ಬರು ಹೋಗೋದನ್ನು ನೋಡಿದ್ದೇವೆ. ಇದೇನಿದೂ ಎಂಟು ಜನ ಹೇಗೆ ಹೋಗ್ತಾರೆ ಎಂಬ ಪ್ರಶ್ನೆ ನಿಮಗೂ ಬಂದಿರಬಹುದು. ಹಾಗಾದರೆ ಬನ್ನಿ ಜನರನ್ನು ಅಚ್ಚರಿಗೆ ತಳ್ಳಿದ ಜಾನ್ ಡಿಸೋಜಾ ಅವರ ಸಂಶೋಧನೆ ಏನು? ಹೇಗೆ ಕಂಡು ಹಿಡಿದರು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.[ಟಾಟಾ ಝಿಕಾದೊಂದಿಗೆ ಠಾಕು ಠೀಕಿನ ಪಯಣ ಮಾಡಿ]
ಜಾನ್ ಡಿಸೋಜಾ ಯಾರು?
ಜಾನ್ ಡಿಸೋಜಾ ವೃತ್ತಿಯಲ್ಲಿ ಅಕೌಂಟೆಂಟ್. ಇವರು ಗಲ್ಫ್ ದೇಶದ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದ್ದು, ಪ್ರಸ್ತುತ ಸಂಶೋಧಕರಾಗಿದ್ದಾರೆ. ತನ್ನ ವೃತ್ತಿ ಕ್ಷೇತ್ರ ಮಾತ್ರವಲ್ಲದೆ ಇತರೆ ಕ್ಷೇತ್ರದಲ್ಲೂ ಏನಾದರೂ ಸಾಧನೆ ಮಾಡಬೇಕೆಂಬ ಚಿಂತನೆಯಲ್ಲಿದ್ದ ಇವರಿಗೆ ಸುಮಾರು 25 ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಕಾಡುವ ಇಂಧನ ಸಮಸ್ಯೆಗೆ ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂದು ಸಂಶೋಧನೆಗೆ ತೊಡಗಿದರು. ಜಾನ್ ಡಿಸೋಜಾ ಅವರ ಸಂಶೋಧನೆಯ ಫಲವೇ ನಾವು ಇಂದು ನೋಡುತ್ತಿರುವ ಈ ವಿಭಿನ್ನ ಸೈಕಲ್. ಈ ವಿಭಿನ್ನ ಸೈಕಲ್ ನಲ್ಲಿ ಬರೋಬ್ಬರಿ 8 ಮಂದಿ ಆರಾಮವಾಗಿ ಸಂಚರಿಸಬಹುದು. ಕೊನೆಗೂ 25 ವರ್ಷಗಳ ಅನ್ವೇಷಣೆ, ಪರಿಶ್ರಮ ಸಾಕಾರಗೊಂಡಿದೆ.
ಈ ಸೈಕಲ್ ಕಂಡು ಹಿಡಿಯಲು ಕಾರಣ ಏನು?
ಎಲ್ಲಾ ವಾಹನಗಳು ತನ್ನ ಮೇಲೆ ಅದೆಷ್ಟೋ ಭಾರವನ್ನು ಹೊತ್ತುಕೊಂಡು ಹೋಗುತ್ತದೆ. ಕೆಲವೊಮ್ಮೆ ವಾಹನದ ಸಾಮರ್ಥ್ಯಕ್ಕಿಂತಲೂ ಹೆಚ್ಚು ಭಾರವನ್ನು ಹೊತ್ತುಕೊಂಡು ಹೋಗುತ್ತದೆ. ಈ ಭಾರವನ್ನೇ ಉಪಯೋಗಿಸಿಕೊಂಡು ಯಾಕೆ ವಾಹನ ಚಲಾವಣೆ ಮಾಡಬಾರದು ಎಂದು ತಿಳಿದ ಜಾನ್ ಡಿಸೋಜಾ ಅವರು ಮೊದಲು ಸಾಕಷ್ಟು ಮಾದರಿಗಳನ್ನು ತಯಾರಿಸಿ ಸಂಶೋಧನೆಯನ್ನು ಮಾಡಿದ್ದರು. ಆದರೆ ಇದೀಗ ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಸೈಕಲ್ ಹೇಗೆ ಕಾರ್ಯನಿರ್ವಹಿಸುತ್ತದೆ?
ವಾಹನವನ್ನು ಎರಡು ಭಾಗಗಳನ್ನಾಗಿ ಮಾಡಿ ನಡುವಿನಲ್ಲಿ ಏರಿಳಿತಕ್ಕೆ ಬೇಕಾದ ಜಾಯಿಂಟನ್ನು ಮಾಡಿದ್ದಾರೆ. ಹಿಂದಿರುವ ಭಾರವೇ ಮುಂದೆ ದೂಡಲ್ಪಡುವಾಗ ವಾಹನ ಮುಂದೆ ಚಲಾಯಿಸುತ್ತದೆ. ಆಗ ಚಾಲಕ ವಾಹನದ ಕಂಟ್ರೋಲ್ ಮಾಡುವುದರ ಜೊತೆಗೆ ಅಗತ್ಯ ಬಿದ್ದಲ್ಲಿ ಶೇ. 20 ರಷ್ಟು ಸಾಮರ್ಥ್ಯ ಹಾಕಬೇಕಾಗುತ್ತದೆ. ಇನ್ನುಳಿದ 80 ರಷ್ಟು ಸಾಮರ್ಥ್ಯ ವಾಹನದಲ್ಲಿರುವ ಭಾರದಿಂದಲೇ ಚಲಿಸುತ್ತದೆ. ಎತ್ತರಕ್ಕೆ ಹತ್ತುವಾಗ ಹಾಗೂ ಇಳಿಜಾರಿನಲ್ಲಿ ಇಳಿಯುವಾಗ ಜೊತೆಗೆ ಸಮತಟ್ಟಾದ ರಸ್ತೆಯಲ್ಲೂ ಇದೇ ಮಾದರಿಯಲ್ಲಿ ವಾಹನ ದೂಡಲ್ಪಡುತ್ತದೆ ಎಂಬುದು ಜಾನ್ ಡಿಸೋಜ ಅವರ ಅಭಿಪ್ರಾಯ. ಇವರ ಈ ಪ್ರಯತ್ನಕ್ಕೆ ವಿವೇಕಾನಂದ ಶೆಣೈ ಸಾಥ್ ಕೊಟ್ಟಿದ್ದಾರೆ.
ಜಾನ್ ಡಿಸೋಜಗೆ ಸಹಕರಿಸಿದವರು ಯಾರು?
ಜಾನ್ ಡಿಸೋಜ ಅವರ ಈ ಯಶಸ್ಸಿನ ಹಿಂದೆ ಫ್ರಾನ್ಸಿಸ್ ಲೋಬೋ ಸಹಾಯವಿದೆ ಎನ್ನುವ ಇವರು ಎಲ್ಲಾ ವಾಹನಗಳಿಗೂ ಇದೇ ಮಾದರಿಯನ್ನು ಅಳವಡಿಸಬಹುದು. ಇಂಧನದ ಕೊರೆತೆಯನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.