ಸಚಿವ ರಮಾನಾಥ್ ರೈ ಭದ್ರತೆ ಹೆಚ್ಚಿಸಿದ ಸರಕಾರ
ಮಂಗಳೂರು, ಜೂನ್ 26: ಕಳೆದ ಕೆಲವು ದಿನಗಳಿಂದ ಕೋಮು ಸಂಘರ್ಷ ಹಾಗೂ ಕೊಲೆ ಪ್ರಕರಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮೇಲೆ ಕೆಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಕೆಂಡಕಾರಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಅವರ ಭದ್ರತೆ ಹೆಚ್ಚಿಸಿದೆ.
ಆರೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಹಾಗೂ ಪೊಲೀಸ್ ಇಲಾಖೆ ಈ ಹಿಂದೆ ಸಚಿವರ ಬೆಂಗಾವಲಿಗೆ ಇದ್ದ ಒಂದು ವಾಹನದ ಬದಲಿಗೆ ಎರಡವು ವಾಹನವನ್ನು ನಿಯೋಜನೆ ಮಾಡಿದೆ. ಜತೆಗೆ ಭದ್ರತಾ ಸಿಬ್ಬಂದಿಗಳನ್ನೂ ಹೆಚ್ಚಿಸಿದೆ. ಈ ಮಧ್ಯೆ ಬಂಟ್ವಾಳದ ಕಳ್ಳಿಗೆಯಲ್ಲಿರುವ ರೈ ಅವರ ಮನೆಗೂ ಭದ್ರತೆ ಹೆಚ್ಚಿಸಲಾಗಿದೆ. ಈ ಮೂಲಕ ಸಚಿವರಿಗೆ ವಿಶೇಷ ಕೆಟಗರಿಯ ಭದ್ರತೆ ನೀಡಲಾಗಿದೆ.
ಪ್ರಭಾಕರ ಭಟ್ ವಿರುದ್ಧ ಕೇಸ್ ಜಡಿದು ಬಂಧಿಸಿ, ರೈ ವಿಡಿಯೋ ವೈರಲ್
ಜಿಲ್ಲಾ ಎಸ್ಪಿಯನ್ನು ಬಂಟ್ವಾಳ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡ ಸಚಿವ ರೈ ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡು, "ಯಾರೇ ದೂರು ಕೊಟ್ಟರೂ ಕ್ರಮಕೈಗೊಳ್ಳಬೇಕು. ಮಾತ್ರವಲ್ಲ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಯಾರೇ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು," ಎಂದು ತಾಕೀತು ಮಾಡಿದ್ದರು.
"ಬಂಧಿಸಿದ ಬಳಿಕ ಆತನ ಪವರ್ ಏನೆಂಬುದು ಗೊತ್ತಾಗುತ್ತದೆ. ಇದೇನು ಮಂಡ್ಯ ಅಲ್ಲ ಇದು ಇಂಡಿಯಾ," ಎಂದು ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಎಸ್ಪಿಗೆ ತಾಕೀತು ಮಾಡಿದ್ದ ವಿಡಿಯೋ ಮಾಧ್ಯಮಗಳಲ್ಲಿ ಸುದ್ದಿ ಮಾಡಿತ್ತು. ಈ ವೇಳೆ ರೈಗಳಿಗೆ ಮುಂಬೈಯ ಭೂಗತ ಲೋಕದಿಂದ ಬೆದರಿಕೆ ಕರೆಗಳೂ ಬಂದಿದ್ದವು.
ರಮಾನಾಥ ರೈ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಇನ್ನೊಂದೆಡೆ ಹಲವು ಸಂಘಟನೆಗಳು ಅವರ ಮೇಲೆ ಆರೋಪಗಳನ್ನೂ ಹೊರಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಅವರ ಭದ್ರತೆ ಹೆಚ್ಚಿಸಲಾಗಿದೆ.