ಮಂಗಳೂರು: ಸಾಗರ ಭೋರ್ಗರೆತ; ಸ್ಥಳೀಯರ ರಕ್ಷಣೆಗೆ ಜಿಲ್ಲಾಡಳಿತ ಕ್ರಮ
ಪರ ಊರಿನಿಂದ ಬಂದು ಬೀಚ್ಗಳಲ್ಲಿ ಜೀವ ಕಳೆದುಕೊಳ್ಳುವುದನ್ನು ತಡೆಯಲು ಕರಾವಳಿ ಸಮುದ್ರ ತೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಮುದ್ರದ ನೀರಿಗೆ ಯಾರೂ ಇಳಿಯದಂತೆ ಕಾಶನ್ ಟೇಪ್ ಹಾಕಿದ್ದು, ಅದನ್ನು ದಾಟುವಂತಿಲ್ಲ.
ಮಂಗಳೂರು, ಜುಲೈ 11: ಮಳೆಗಾಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಭೋರ್ಗರೆಯುತ್ತಿದೆ. ಕೆಲವು ದಿನಗಳ ಹಿಂದೆ ಉಳ್ಳಾಲದಲ್ಲಿ ಇಬ್ಬರು ಮತ್ತು ಸಸಿಹಿತ್ಲು ಬಳಿ ಮೂವರು ಸೇರಿದಂತೆ ಐದು ಮಂದಿ ಸಮುದ್ರ ಪಾಲಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಮಂಗಳೂರು ಮಳೆಗೆ ಮುನ್ನುಡಿಯಂತೆ ಕರ್ನಾಟಕ ಕರಾವಳಿಯಯ ಕಡಲು ಉಗ್ರಾವತಾರ ಹಾಳುತ್ತಿದ್ದು ಅದರ ಭೋರ್ಗರೆಯುವ ಅಪಾಯಕಾರಿ ಅಲೆಗಳ ಜತೆ ಸೆಲ್ಫಿ ತೆಗೆಯುವ ಕ್ರೇಜ್ ಪ್ರವಾಸಿಗರನ್ನು ಸಾವಿನತ್ತ ಸೆಳೆಯುತ್ತಿದೆ.
ಕಡಲ ತೀರದ ಬಂಡೆಗಳ ಮೇಲೇರಿ ರಕ್ಕಸ ಅಲೆಗಳ ಭೋರ್ಗರೆಯುವ ಹಿನ್ನಲೆಯಲ್ಲಿ ಪ್ರವಾಸಿಗರು ಸೆಲ್ಫಿಯೇ ತೆಗೆದುಕೊಳ್ಳುತ್ತಿರುವುದು ಅಪಾಯಕಾರಿ. ಹೀಗಾಗಿ ದೂರದಲ್ಲೇ ಅಲೆಗಳ ಸೌಂದರ್ಯವನ್ನು ಸವಿಯಿರಿ.
ಕರಾವಳಿಯ ಯಾವುದೇ ಬೀಚ್ ಗಳಲ್ಲಿ ಸಮುದ್ರ ಕೊರೆತ ತಡೆಗೆ ಹಾಕಿರುವ ದೊಡ್ಡ ಗಾತ್ರದ ಕಲ್ಲು ಬಂಡೆಗಳಿವೆ. ಅದರ ಮೇಲೆ ಅಲೆಗಳು ಹಾಗೂ ಮಳೆ ನೀರು ಹಾರಿದೆ ಪಾಚಿ ಬೆಳೆಯುತ್ತವೆ. ಹೀಗಾಗಿ ಜಾರಿ ಬೀಳುವ ಸಂದರ್ಭವೇ ಹೆಚ್ಚು ಇಗಾಗಿ ಪರ ಊರಿನಿಂದ ಬಂದು ಬೀಚ್ಗಳಲ್ಲಿ ಜೀವ ಕಳೆದುಕೊಳ್ಳುವುದನ್ನು ತಡೆಯಲು ಕರಾವಳಿ ಸಮುದ್ರ ತೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಮುದ್ರದ ನೀರಿಗೆ ಯಾರೂ ಇಳಿಯದಂತೆ ಕಾಶನ್ ಟೇಪ್ ಹಾಕಿದ್ದು, ಅದನ್ನು ಯಾರು ಕೂಡ ದಾಟುವಂತಿಲ್ಲ!
ದ.ಕ ಜಿಲ್ಲೆಯ ಎಲ್ಲ ಆರು ಬೀಚ್ಗಳಲ್ಲೂ ಜಿಲ್ಲಾಡಳಿತದಿಂದ ತಲಾ ಒಬ್ಬರು ಹೋಮ್ ಗಾರ್ಡ್ ಹಾಗೂ 'ಟೂರಿಸ್ಟ್ ಮಿತ್ರ'ರನ್ನು ನೇಮಕ ಮಾಡಲಾಗಿದೆ. ಹೋಮ್ ಗಾರ್ಡ್ಗಳು ಪ್ರವಾಸಿಗಳನ್ನು ನೀರಿಗೆ ಇಳಿಯದಂತೆ ನಿಯಂತ್ರಿಸಿದರೆ, ಟೂರಿಸ್ಟ್ ಮಿತ್ರರು ಮಾಹಿತಿ ನೀಡಿ ಸಹಕರಿಸುತ್ತಾರೆ. ಇವರು ಬೆಳಗ್ಗೆ 9ರಿಂದ ಸಂಜೆ ಐದು ಗಂಟೆ ತನಕ ಕಾರ್ಯಾಚರಿಸುತ್ತಾರೆ.
ಸಸಿಸಿತ್ಲು ಬೀಚ್ನಲ್ಲಿ ಪಂಚಾಯಿತಿ ನೇಮಿಸಿದ, ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರದಲ್ಲಿ ಖಾಸಗಿ ನಿರ್ವಾಹಕರ ಮತ್ತು ಉಳ್ಳಾಲದಲ್ಲಿ ಸ್ಥಳೀಯ ಜೀವ ರಕ್ಷಕರು ಕಾರ್ಯಾಚರಿಸುತ್ತಿದ್ದಾರೆ. ಪ್ರವಾಸಿಗರನ್ನು ಎಚ್ಚರಿಸುವ ಜತೆಗೆ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಾರೆ. ದಿನದ 24 ಗಂಟೆಯೂ ಜೀವ ರಕ್ಷಕರು ಬೀಚ್ನಲ್ಲಿ ಇರುತ್ತಾರೆ.
ಕರಾವಳಿಯಲ್ಲಿ ಸಮುದ್ರ ತುಂಬಾ ಬಿರುಸಾಗಿದ್ದು, ಈ ವರ್ಷ ಐದು ಮಂದಿ ಸಮುದ್ರ ಪಾಲಾಗಿದ್ದಾರೆ. ಇಂಥ ಅವಘಡ ತಪ್ಪಿಸಲು ಎಲ್ಲ ಬೀಚ್ಗಳಲ್ಲಿ ಆ.15ರ ತನಕ ನಿಷೇಧಾಜ್ಞೆ ವಿಧಿಸಲಾಗಿದೆ. ಪ್ರವಾಸಿಗರ ಮೇಲೆ ನಿಗಾ ಇಡಲು ಹೋಮ್ ಗಾರ್ಡ್, ಟೂರಿಸ್ಟ್ ಮಿತ್ರರ ನೇಮಕ ಹಾಗೂ ಹತ್ತಿರ ತೆರಳದಂತೆ ಕಾಶನ್ ಟೇಪ್ ಅಳವಡಿಸಿದ್ದೇವೆ. ಸಮುದ್ರ ಸಹಜ ಸ್ಥಿತಿಗೆ ಬಂದರೆ, ನಿಷೇಧಾಜ್ಞೆ ಹಿಂತೆಗೆದುಕೊಳ್ಳಲಾಗುವುದು.
ಬೀಚ್ಗಳಿಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗಳು ಬರುತ್ತಿದ್ದಾರೆ. ಹಿಂದೆಲ್ಲಾ ಸಾಕಷ್ಟು ಮಂದಿ ಸಮುದ್ರ ಪಾಲಾಗಿದ್ದಾರೆ. 15 ವರ್ಷದ ಹಿಂದೆ ಪಣಂಬೂರು ಬೀಚ್ನಲ್ಲಿ ಎನ್ಎಂಪಿಟಿಯಿಂದ ಎಚ್ಚರಿಕೆ ಫಲಕ ಹಾಕಲಾಗುತ್ತಿತ್ತು. ಮುಂದೆ ಖಾಸಗಿ ಸಂಸ್ಥೆಗೆ ನಿರ್ವಹಣೆಗೆ ನೀಡಿದ ಬಳಿಕ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲ್ಲಿ ಸಮುದ್ರಕ್ಕೆ ಇಳಿಯಲು ಬಿಡದೇ ಇದ್ದಾಗ ಕೆಲವರು ತಣ್ಣೀರುಬಾವಿಗೆ ತೆರಳುತ್ತಿದ್ದರು. ಆರು ವರ್ಷದ ಹಿಂದೆ ನಿರ್ವಾಹಕರು ಇಲ್ಲದೆ, ಆರು ಮಂದಿ ಸಮುದ್ರ ಪಾಲಾಗಿದ್ದರು. ಈಗ ಅಲ್ಲಿಯೂ ಖಾಸಗಿ ನಿರ್ವಾಹಕರ ನೇಮಕ ನಡೆದಿದೆ.
ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್ ಮತ್ತು ಸಸಹಿಹಿತ್ಲು ಬೀಚ್ಗಳಲ್ಲೂ 'ಅಪಾಯ ವಲಯ, ದಾಟಬೇಡಿ' ಎಂಬ ಕೆಂಪು ಬಣ್ಣದ ಫಲಕದೊಂದಿಗೆ 'ಕಾಶನ್ ಟೇಪ್' ಹಾಕಲಾಗಿದೆ. ಹಾಗಾಗಿ ಯಾರೂ ಅದನ್ನು ದಾಟಿ ಮುಂದೆ ಹೋಗುವಂತಿಲ್ಲ.