'ಅಂಬೇಡ್ಕರರನ್ನು ತೋರಿಕೆಗೆ ಒಪ್ಪಿಕೊಳ್ಳುವಂತೆ ನಟಿಸುವ ಮೋದಿ'
ಡಾ. ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಯಶವಂತ್ ಅಂಬೇಡ್ಕರ್ ಅವರು ಭಾನುವಾರ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಘ ಪರಿವಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರು, ಫೆಬ್ರವರಿ 26 : 'ಬಾಬಾ ಸಾಹೇಬ್ ಅಂಬೇಡ್ಕರರನ್ನು ತೋರಿಕೆಗೆ ಒಪ್ಪಿಕೊಳ್ಳುವಂತೆ ನಟಿಸುವ ಮೋದಿ ಮತ್ತು ಸಂಘಪರಿವಾರ ಅಂಬೇಡ್ಕರರ ನೀತಿಗೆ ವಿರೋಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ' ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮಾಜಿ ಸಂಸದ ಹಾಗೂ ಬಹುಜನ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಯಶವಂತ್ ಅಂಬೇಡ್ಕರ್ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು
ಭಾನುವಾರ ಕರಾವಳಿ ಪ್ರವಾಸ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ (ಡಾ.ಬಾಬಾ ಸಾಹೇಬ್ ಅಂಬೇಡ್ಕರರ ಮೊಮ್ಮಗ) ಯಶವಂತ್ ಅಂಬೇಡ್ಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 'ದೇಶದಲ್ಲಿ 2019ರ ವೇಳೆಗೆ ಸಂವಿಧಾನವನ್ನೇ ಬದಲು ಮಾಡುವ ಸಿದ್ಧತೆ ನಡೆಸುತ್ತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಮೋದಿ ಆಡಳಿತದ ನಡೆಯಲ್ಲಿ ಯಾರೂ ಅವರನ್ನು ಪ್ರಶ್ನಿಸಬಾರದು. ಅವರು ಹೊರಡಿಸಿದ ಆದೇಶವನ್ನು ಯಾರೂ ಮೀರಬಾರದು ಎನ್ನುವ ಮನೋಭಾವ ಹೊಂದಿದ್ದಾರೆ.
ದೇಶದ ಜನರು ಏನು ತಿನ್ನಬೇಕು ಏನು ತಿನ್ನಬಾರದೆಂದು ನಿರ್ಬಂಧಿಸುತ್ತಿದ್ದಾರೆ. ಸಂಘಪರಿವಾರ ಅಜೆಂಡಾಕ್ಕೆ ವಿರುದ್ಧವಾಗಿರುವ ಸಂವಿಧಾನವನ್ನು ಬದಲಾಯಿಸುವುದು ಅವರ ಮುಂದಿನ ಗುರಿಯಾಗಿದೆ.
ಅದನ್ನು ತಡೆಯಲು ಸಾಧ್ಯವಾಗುವ ಎಲ್ಲಾ ರಾಜಕೀಯ ಪಕ್ಷಗಳನ್ನು ಮೂಲೆಗುಂಪು ಮಾಡುವ ತಂತ್ರಗಾರಿಕೆಯನ್ನು ರೂಪಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.
'ಸಂವಿಧಾನದಲ್ಲಿ ತಿಳಿಸಿರುವಂತೆ ದೇಶದ ಜಾತ್ಯತೀತ ನಿಲುವು, ಧಾರ್ಮಿಕ ಸ್ವಾತಂತ್ರದ ಹಕ್ಕನ್ನು ಸಂಘಪರಿವಾರ ವಿರೋಧಿಸುತ್ತಾ ಬಂದಿದೆ. ಅವರ ಪ್ರಕಾರ ದೇಶದಲ್ಲಿ ಹಿಂದುತ್ವವನ್ನು ಜಾರಿಗೊಳಿಸಬೇಕು.
ವೈದಿಕಶಾಹಿಯ ಪ್ರಕಾರ ಆಡಳಿತ ನಡೆಸಬೇಕು. ದೇಶದ ಜನರಿಗೆ ಪೂರ್ಣವಾದ ಪ್ರಜಾಪ್ರಭುತ್ವದ ಹಕ್ಕುಗಳು ಇರಬಾರದು ಎಂದು ಅವರು ಪ್ರತಿಪಾದಿಸುತ್ತಾ ಬಂದವರು.
1946-50ರಲ್ಲಿ ಸಂವಿಧಾನ ರಚನೆಯ ಕಾಲದಲ್ಲಿಯೇ ಆರ್ ಎಸ್ ಎಸ್, ಹಿಂದೂ ಮಹಾಸಭಾ ಸಂವಿಧಾನದಲ್ಲಿ ಮನುಸ್ಮತಿಯ ವಿಷಯಗಳು, ವೇದಗಳ ವಿಚಾರಗಳು ಸೇರ್ಪಡೆಯಾಗಿಲ್ಲ ಎಂದು ವಿರೋಧವನ್ನು ವ್ಯಕ್ತಪಡಿಸಿದೆ.
ದೇಶದಲ್ಲಿ ಹಿಂದುಗಳು ಸಾಕಷ್ಟು ಬದಲಾಗಿದ್ದರೂ ಆರೆಸ್ಸೆಸ್ ಹೆಗ್ಗಡೆವಾರ್, ಗೊಲ್ವಾಲ್ಕರ್ ಸಿದ್ದಾಂತಕ್ಕೆ ಅಂಟಿಕೊಂಡು ಬದಲಾಗದ ಸ್ಥಿತಿಯಲ್ಲಿದೆ ಎಂದು ಹೇಳಿದ ಅವರು, ' ಸಂವಿಧಾನದ ಉಳಿವಿಗೆ ದಲಿತ, ಜಾತ್ಯತೀತ ಶಕ್ತಿಗಳು ಸಂಘಟಿತರಾಗ ಬೇಕಾಗಿದೆ' ಎಂದು ಕರೆ ನೀಡಿದರು.