ಟಿಪ್ಪು ಜಯಂತಿ: 10 ಲಕ್ಷ ಬಾಂಡ್ ಬರೆಸುವರೆ ಎಸ್ಪಿ?
ಮಂಗಳೂರು ನವೆಂಬರ್ 7 : ಜಿಲ್ಲಾ ಪಂಚಾಯಿತಿ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಗುತ್ತಿದ್ದು, ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಕೋಮು ಸೌಹಾರ್ದತೆ ಕಾಪಾಡಲು ಆರೋಪಿಗಳು ಹಾಗೂ ರೌಡಿ ಶೀಟರ್ ಗಳಿಂದ ವೈಯಕ್ತಿಕವಾಗಿ ಕಡ್ಡಾಯವಾಗಿ 10 ಲಕ್ಷ ರೂ.ಗಳ ಬಾಂಡ್ ಬರೆಸಿಕೊಳ್ಳಲು ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ್ , ಟಿಪ್ಪು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಬೇಕು ಎಂದಿದ್ದಾರೆ.['ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದ ಟಿಪ್ಪುವಿನ ಜಯಂತಿ ಬೇಡ']
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೋರಸೆ ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿಗೆ ಸಂಬಂಧಿಸಿದಂತೆ ದ.ಕ. ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗುವುದು. ಕಳೆದ ಬಾರಿ ನಡೆದ ಟಿಪ್ಪು ಜಯಂತಿ ಕಾರಣದಿಂದ 9 ಕೇಸು ದಾಖಲಾಗಿ ನಿಷೇಧಾಜ್ಞೆ ಕೂಡಾ ಜಾರಿಯಾಗಿತ್ತು.
ಹೀಗಾಗಿ ಕಳೆದ ಬಾರಿ ಗಲಭೆಯಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಆರೋಪಿಗಳ ವಿರುದ್ಧ ಹಾಗೂ ರೌಡಿ ಶೀಟರ್ ಹೊಂದಿರುವ, ಶಂಕಿತರ ವ್ಯಕ್ತಿಗಳಿಂದ ಈ ಬಾರಿ 10 ಲಕ್ಷದ ಬಾಂಡ್ ನ್ನು ಪಡೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ. ಅಂತಹ ವ್ಯಕ್ತಿಗಳ ಪಟ್ಟಿಯನ್ನು ಈಗಾಗಲೇ ಆಯಾ ತಾಲೂಕುಗಳ ದಂಡಾಧಿಕಾರಿಗಳಿಗೆ ನೀಡಲಾಗಿದೆ. ದಂಡಾಧಿಕಾರಿಗಳು ನೋಟಿಸ್ ಜಾರಿಗೊಳಿಸುತ್ತಾರೆ.[ಕೊಡಗು: ಪೊಲೀಸ್ ಭದ್ರತೆಯಲ್ಲಿ ಟಿಪ್ಪು ಜಯಂತಿ]
ಆ ನೋಟಿಸ್ ನೊಂದಿಗೆ ತಹಸೀಲ್ದಾರ್ ಕಚೇರಿಗೆ ಬಂದು 10 ಲಕ್ಷದ ಬಾಂಡ್ ಗೆ ಸಹಿ ಹಾಕಬೇಕು. ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ತಾನೇ ಹೊಣೆ ಎನ್ನುವ ಮುಚ್ಚಳಿಕೆಯನ್ನು ಕೂಡ ಅಂತಹ ವ್ಯಕ್ತಿಗಳು ಬರೆದುಕೊಡಬೇಕು.ಆರೋಪಿಗಳಿಗೆ ಬಾಂಡ್ ಬರೆಸುವ ಪ್ರಕ್ರಿಯೆ ಈಗಾಗಲೇ ಜಾರಿಗೆ ಬಂದಿದೆ ಎಂದು ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತ ಎಂ . ಚಂದ್ರಶೇಖರ್ ಮಾತನಾಡಿ , ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ಸರಕಾರಿ ಕಾರ್ಯಕ್ರಮಕ್ಕೆ ಸಂಬಂಧಿಸಿ ನ.9 ಮತ್ತು 10ರಂದು ಸಂಘಟನೆಗಳಿಗೆ ಬ್ಯಾನರ್ ಹಾಕಲು ಅವಕಾಶ ಕಲ್ಪಿಸಲಾಗುವುದು ಎಂದ ಎಸ್ಪಿ, ಕೋಮುಗಲಭೆಗೆ ಪ್ರೇರಣೆ ನೀಡುವ ಹಾಗೂ ಗಲಭೆಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ 50 ಕಡೆಗಳಲ್ಲಿ ಪೊಲೀಸ್ ಚೆಕ್ಪೋಸ್ಟ್ಗಳನ್ನು ತೆರೆದು ತಪಾಸಣೆ ನಡೆಸಲಾಗುವುದು ಎಂದರು. ಮುಂಜಾಗ್ರತಾ ಕ್ರಮಗಳನ್ನು ನಡೆಸಲಾಗುವುದು ಎಂದರು.