ಎಸೆಸೆಲ್ಸಿಯಲ್ಲಿ ತುಳು ಪರೀಕ್ಷೆ ಬರೆದ ದಾಖಲೆಯ 313 ವಿದ್ಯಾರ್ಥಿಗಳು
2010-11 ನೇ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿಯಿಂದ ತೃತೀಯ ಭಾಷೆಯಾಗಿ ತುಳು ಕಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದಾದ ನಂತರ ತುಳು ಪರೀಕ್ಷೆ ಬರೆಯುತ್ತಿರುವ 3ನೇ ಬ್ಯಾಚ್ ಇದಾಗಿದೆ.
ಮಂಗಳೂರು, ಎಪ್ರಿಲ್ 10: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಸದ್ಯ ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಸೋಮವಾರ ಎಸೆಸೆಲ್ಸಿ ತೃತೀಯ ಐಚ್ಛಿಕ ಭಾಷಾ ವಿಭಾಗದ ಪರೀಕ್ಷೆ ನಡೆಯಿತು. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 13 ಶಾಲೆಗಳಲ್ಲಿ 313 ವಿದ್ಯಾರ್ಥಿಗಳು ತುಳು ಪರೀಕ್ಷೆ ಬರೆದರು.
2010-11 ನೇ ಶೈಕ್ಷಣಿಕ ವರ್ಷದಲ್ಲಿ ಆರನೇ ತರಗತಿಯಿಂದ ತೃತೀಯ ಭಾಷೆಯಾಗಿ ತುಳು ಕಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದಾದ ನಂತರ ತುಳು ಪರೀಕ್ಷೆ ಬರೆಯುತ್ತಿರುವ ಮೂರನೇ ಬ್ಯಾಚ್ ಇದಾಗಿದೆ. ಮೊದಲ ಹಾಗೂ ಎರಡನೇ ಬ್ಯಾಚ್ ನಲ್ಲಿ ಪರೀಕ್ಷೆ ಬರೆದ್ದಕ್ಕಿಂತ ಈ ಸಲ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.[ಹಾಸ್ಯಮಯ ವೆಬಿಸೋಡ್: ಎಕ್ಸಾಂ ನಿಮಿತ್ತಂ ಬಹುಕೃತ ವೇಷಂ]
2015 ರಲ್ಲಿ ನಡೆದ ಎಸೆಸೆಲ್ಸಿ ತುಳು ಪರೀಕ್ಷೆಯಲ್ಲಿ ಕೇವಲ ಮಂಗಳೂರಿನ ಲೇಡಿಹಿಲ್ ಪೊಂಪೈ ಪ್ರೌಢಶಾಲೆಯ 18 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉನ್ನತ ಅಂಕ ಗಳಿಸಿ ಉತ್ತೀರ್ಣರಾಗಿದ್ದರು. ದ್ವಿತೀಯ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಶಾಲೆಗಳ ಒಟ್ಟು 25 ವಿದ್ಯಾರ್ಥಿಗಳು ಎಸೆಸೆಲ್ಸಿ ಯಲ್ಲಿ ತುಳು ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಆದರೆ ಈ ಸಲ ದಾಖಲೆಯ ಅಂದರೆ 313 ವಿದ್ಯಾರ್ಥಿಗಳು ತುಳು ಪರೀಕ್ಷೆ ಬರೆದಿದ್ದಾರೆ. ಇದರ ಹಿಂದೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶಿಕ್ಷಕರ ಪರಿಶ್ರಮವಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ. ಚಂದ್ರಹಾಸ್ ರೈ ' ಈ ವರ್ಷ ತುಳು ಪಠ್ಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಆಶಾದಾಯಕ ಬೆಳೆವಣಿಗೆ' ಎಂದಿದ್ದಾರೆ. ಇನ್ನು ಮೊದಲ ಬಾರಿಗೆ ತುಳು ಪರೀಕ್ಷೆ ಬರೆದ ರಾಮಕುಂಜ ಶಾಲಾ ವಿದ್ಯಾರ್ಥಿ ಶ್ರೇಯಸ್ 'ನಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆದದ್ದು ಅದ್ಭುತ ಅನುಭವ. ಶೇಕಡಾ ನೂರರಷ್ಟು ಅಂಕ ಗಳಿಸುವ ವಿಶ್ವಾಸ ಇದೆ' ಎಂದಿದ್ದಾರೆ. [ಸದ್ದು. ನಮ್ಮ ಹುಡುಗರು, ಹುಡುಗಿಯರು ಪರೀಕ್ಷೆ ಬರೀತಾಯಿದಾರೆ]
ಮಂಗಳೂರು ವಿವಿ ಮಟ್ಟದಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ತುಳು ಕಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಇನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಒಟ್ಟು 40 ಶಾಲೆಗಳಲ್ಲಿ ತುಳು ಕೋರ್ಸ್ ಆರಂಭಿಸುವ ಗುರಿಯನ್ನು ತುಳು ಅಕಾಡೆಮಿ ಹಾಕಿಕೊಂಡಿದೆ.
ಈಗಾಗಲೇ 15 ಹೆಚ್ಚುವರಿ ಶಾಲೆಗಳು ತುಳು ಭಾಷೆ ಕಲಿಸಲು ಮುಂದೆ ಬಂದು ಬೇಡಿಕೆ ಇಟ್ಟಿವೆ. ಮಂಗಳೂರಿಗರ ಮಾತೃಭಾಷೆಯನ್ನ ಎಲ್ಲರೂ ಕಲಿಯಬೇಕೆಂಬ ಗುರಿ ಇಲ್ಲಿನ ಭಾಷಾ ಪ್ರೇಮಿಗಳದ್ದು.