'ದಕ್ಷಿಣ ಕನ್ನಡದಲ್ಲಿ ಸಂಘರ್ಷ, ಕೇಂದ್ರ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವೆ'
ಮಂಗಳೂರು, ಜುಲೈ 11 : ದಕ್ಷಿಣ ಕನ್ನಡ ಜಿಲ್ಲೆಯ ಅಶಾಂತಿಯಿಂದ ದೇಶಕ್ಕೆ ತಪ್ಪು ಸಂದೇಶ ಹೋಗುತ್ತಿದೆ, ಆಡಳಿತದ ದುರಹಂಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಬಲಿ ಹಾಗುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ದಕ್ಷಿಣ ಕನ್ನಡ ಜಿಲ್ಲೆಯ ಸಂಘರ್ಷದ ಬಗ್ಗೆ ಕೇಂದ್ರ ಕ್ಯಾಬಿನೆಟ್ ಮುಂದೆ ಇಡುತ್ತೇನೆ. ಇವತ್ತು ಜಿಲ್ಲಾಧಿಕಾರಿಗಳೊಡನೆ ಸಭೆ ಮಾಡಿದ್ದು, ಸಭೆಯ ವರದಿಯನ್ನು ಕೇಂದ್ರ ಗೃಹಸಚಿವಾಲಯದ ಗಮನಕ್ಕೆ ತರುತ್ತೇನೆ" ಎಂದರು.
'ನೂರು ಶರತ್ಗಳು ಹುಟ್ಟಿ ಬಂದು ದುಷ್ಕರ್ಮಿಗಳಿಗೆ ಪಾಠ ಕಲಿಸಲಿದ್ದಾರೆ'
ಬಂಟ್ವಾಳ, ಉಳ್ಳಾಲ ಎರಡು ಪ್ರದೇಶ ಬಿಟ್ಟರೆ ಬೇರೆ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಆದ್ರೆ ಇಡೀ ಜಿಲ್ಲೆಗೆ ಇದನ್ನು ವ್ಯಾಪಿಸುವ ಹುನ್ನಾರ ನಡೆಯುತ್ತಿದೆ. ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ನಿಷೇಧಾಜ್ಞೆ ಇದೆ. ರಮಾನಾಥ ರೈ, ಯುಟಿ ಖಾದರ್ ರಿಂದ ಜಿಲ್ಲೆಗೆ ಅಪಮಾನ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಾಗುತ್ತಿರುವ ಘಟನೆಗಳಿಗೆ ರಮಾನಾಥ ರೈ, ಯುಟಿ ಖಾದರ್ ನೇರ ಹೊಣೆಯಾಗಿದ್ದು, ಕರ್ನಾಟಕದಲ್ಲಿ ರಾಮನಾಥ ರೈ ಅತ್ಯಂತ ಖಿನ್ನತೆಗೆ ಒಳಗಾದ ಸಚಿವ ಎಂದು ಅಪಹಾಸ್ಯ ಮಾಡಿದರು.
ಇನ್ನು ಶರತ್ ಸಾವಿನಲ್ಲಿ ರಾಜಕೀಯ ಮಾಡಲಾಗಿದೆ, ಶರತ್ ಕೊಲೆ ಆರೋಪಿಗಳನ್ನು ಬಂಧಿಸುವ ಕೆಲಸ ಆಗಿಲ್ಲ. ಕಲ್ಲಡ್ಕ ಬಂಟ್ವಾಳ ಬಿಟ್ಟು ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ವಿನಾಕಾರಣ ನಿಷೇಧಾಜ್ಞೆ ಹಾಕಲಾಗಿದೆ ಈ ಕುರಿತು ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿದ್ದೇನೆ .
ಮತ್ತು ನಿಷೇಧಾಜ್ಞೆಯನ್ನು ಕಲ್ಲಡ್ಕ ಬಂಟ್ವಾಳ ಬಿಟ್ಟು ಬೇರೆ ಕಡೆ ವಿನಾಕಾರಣವಿರುವ ನಿಷೇಧಾಜ್ಞೆಯನ್ನು ತಕ್ಷಣ ತೆಗೆಯಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.