ಕಣ್ಣೂರು-ಮಂಗಳೂರು ಲೈನ್ ನಿರ್ಮಾಣಕ್ಕಾಗಿ ಡಬಲ್ ಹಣ ಮಂಜೂರು
ನೇತ್ರಾವತಿ (ಕಣ್ಣೂರು-ಮಂಗಳೂರು ಲೈನ್) ರೈಲ್ವೆ ಲೈನ್ ದ್ವಿಗುಣಗೊಳಿಸುವ ಸಲುವಾಗಿ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣದ ಪ್ಲಾಟ್ ಫಾರಂ ನಿರ್ಮಾಣಕ್ಕಾಗಿ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ದುಪ್ಪಟ್ಟು ಹಣ ಮಂಜೂರಾಗಿದೆ.
ಮಂಗಳೂರು, ಫೆಬ್ರವರಿ 12: ಮಂಗಳೂರಿನ ಸೆಂಟ್ರಲ್ ಮತ್ತು ಜಂಕ್ಷನ್ ನಡುವೆ ರೈಲ್ವೆ ಹಳಿ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ. ನೇತ್ರಾವತಿ (ಕಣ್ಣೂರು-ಮಂಗಳೂರು ಲೈನ್) ರೈಲ್ವೆ ಲೈನ್ ದ್ವಿಗುಣಗೊಳಿಸುವ ಸಲುವಾಗಿ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣದ ಪ್ಲಾಟ್ ಫಾರಂ ನಿರ್ಮಾಣಕ್ಕಾಗಿ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ದುಪ್ಪಟ್ಟು ಹಣ ಮಂಜೂರಾಗಿದೆ. ಕಾಮಗಾರಿಯನ್ನು ಈ ತಿಂಗಳಾಂತ್ಯಕ್ಕೆ ಕೈಗೊಂಡು 18 ತಿಂಗಳ ಒಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಮಂಗಳೂರಿನ ಸೆಂಟ್ರಲ್ ಮತ್ತು ಜಂಕ್ಷನ್ ನಡುವೆ ಹೆಚ್ಚುವರಿ ಹಳಿಯನ್ನು ನಿರ್ಮಿಸುವುದರಿಂದ ಬೆಂಗಳೂರು ಮತ್ತು ಮುಂಬೈ ಕಡೆಗೆ ತೆರಳುವ ರೈಲುಗಳ ಸಂಚಾರಕ್ಕೆ ಅನುಕೂಲವಾಗುತ್ತದೆ .
ಈ ಬಗ್ಗೆ ಮಾಹಿತಿ ನೀಡಿದ ಪುತ್ತೂರು ರೈಲ್ವೆ ಯಾತ್ರಿಕರ ಸಂಘದ ಸಂಚಾಲಕ ದಿನೇಶ್ ಭಟ್, "ಪ್ರಸ್ತುತವಾಗಿ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬರುವ ರೈಲುಗಳಿಗೆ ರೈಲ್ವೆ ಲೈನ್ ಕೊರತೆ ಇದೆ. ಮಂಗಳೂರು ಜಂಕ್ಷನ್ ನಿಂದ ನಿಲ್ದಾಣ ತಲುಪಲು ಸುಮಾರು 30 ನಿಮಿಷಗಳ ಕಾಲ ಕಾಯಬೇಕಾಗುತ್ತಿದೆ," ಎಂದು ಹೇಳುತ್ತಾರೆ. [ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೊಸ ಪ್ಲಾಟ್ ಫಾರ್ಮ್]
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗೀಯ ರೈಲ್ವೆ ಮ್ಯಾನೇಜರ್ ನರೇಶ್ ಲಾಲ್ವಾನಿ ಮಾತನಾಡಿ, 'ಮಂಗಳೂರಿನ ಸೆಂಟ್ರಲ್ - ಜಂಕ್ಷನ್ ಲೈನ್ ಡಬಲ್ ಮಾಡುವುದರಿಂದ ಹಲವು ರೈಲುಗಳಿಗೆ ಸಂಚರಿಸಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ,' ಎಂದಿದ್ದಾರೆ. ಈ ರೈಲ್ವೆ ಲೈನ್ ದ್ವಿಗುಣಗೊಳಿಸುವ ಬಗ್ಗೆ ಪುತ್ತೂರು ರೈಲ್ವೆ ಯಾತ್ರಿಕರ ಸಂಘ ರೈಲ್ವೆ ಅಧಿಕಾರಿಗಳಿಗೆ ಈ ಹಿಂದೆ ಲಿಖಿತ ರೂಪದಲ್ಲಿ ತಿಳಿಸಿತ್ತು. ಇದೀಗ ಅವರ ಬೇಡಿಕೆಗೆ ಮಾನ್ಯತೆ ದೊರಕಿದ್ದು ಲೈನ್ ಡಬ್ಲಿಂಗ್ ಆಗಲಿದೆ. [ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]