ಮಂಗಳೂರು: ಪೊಲೀಸರನ್ನು ಕಂಡು ಫಲ್ಗುಣಿ ನದಿಗೆ ಹಾರಿ ಪ್ರಾಣ ತೆತ್ತ
ಶರೀಫ್ ಎಂಬಾತ ಅಕ್ರಮ ಮರುಳುಗಾರಿಕೆ ನಡೆಸುತ್ತಿದ್ದ ವೇಳೆ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳುವ ಭರದಲ್ಲಿ ಫಲ್ಗುಣಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಮಂಗಳೂರಿನ ಮಾರ್ದಂಗಡಿ ಎಂಬಲ್ಲಿ ಬುಧವಾರ ನಡೆದಿದೆ.
ಮಂಗಳೂರು, ಅಕ್ಟೋಬರ್. 26 : ಅಕ್ರಮ ಮರಳುಗಾರಿಕೆ ದಂಧೆ ಮೇಲೆ ಪೊಲೀಸರು ನಡೆಸಿದ ದಾಳಿ ವೇಳೆ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳಲು ಫಲ್ಗುಣಿ ನದಿಗೆ ಹಾರಿ ಸಾವನ್ನೊಪ್ಪಿರುವ ಘಟನೆ ಬುಧವಾರ ಮಂಗಳೂರು ತಾಲೂಕಿನ ಮುಲ್ಲರ ಪಟ್ಟಣದ ಮಾರ್ದಂಗಡಿ ಎಂಬಲ್ಲಿ ನಡೆದಿದೆ.
ನದಿಗೆ ಹಾರಿದ ವ್ಯಕ್ತಿಯನ್ನು ಶರೀಫ್ (30) ಎಂದು ಗುರುತಿಸಲಾಗಿದ್ದು. ಮಾರ್ದಂಗಡಿ ಎಂಬಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ವೇಳೆ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳುವ ಭರದಲ್ಲಿ ಫಲ್ಗುಣಿ ನದಿಗೆ ಹಾರಿದ್ದಾನೆ.
ಈಗಾಗಲೇ ಜಿಲ್ಲೆಯಾದ್ಯಂತ ಅಕ್ರಮಮರಳುಗಾರಿಕೆ ಹೆಚ್ಚಾಗುತ್ತಿದ್ದು ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ನಿಗಾ ಇಟ್ಟಿದ್ದಾರೆ. ಮಾರ್ದಂಗಡಿ ಬಳಿ ಅಕ್ರಮ ಮರುಳುಗಾರಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಆ ಸಂದರ್ಭದಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ವೇಳೆ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳುವ ಭರದಲ್ಲಿ ಶರೀಫ್ ನದಿಗೆ ಹಾರಿದ್ದಾನೆ. ನದಿಗೆ ಹಾರಿದ ಶರೀಫ್ ನನ್ನು ರಕ್ಷಿಸಲು ಸ್ಥಳಕ್ಕೆ ಅಗ್ನಿಶಾಮಕ ದಳದವರನ್ನು ಕರೆಸಿ ತೀವ್ರ ಹುಡುಕಾಟ ನಡೆಸಿದಾಗ ಶರೀಫ್ ನ ಮೃತದೇಹ ಪತ್ತೆಯಾಗಿದೆ.
ಇದರಿಂದ ರೊಚ್ಚಿಗೆದ್ದ ಸ್ಥಳಿಯರು ಪೊಲೀಸ್ ವಾಹನವನ್ನು ಜಖಂಗೊಳಿಸಿದ್ದಾರೆ. ಇದರಿಂದ ಮಾರ್ದಂಗಡಿ ಬಳಿ ಬಿಗುವಿನ ವಾತಾವರಣ ಉದ್ಭವವಾಗಿದೆ. ಸ್ಥಳಕ್ಕೆ ದ.ಕ ಜಿಲ್ಲಾ ಎಸ್ಪಿ ಭೂಷಣ್ ಭೇಟಿ ನೀಡಿದ್ದು. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.