ಪುತ್ತೂರಿನಲ್ಲಿ ಸಿಕ್ಕಿದ್ದು ದಾಖಲೆ ಇಲ್ಲದ 19 ಲಕ್ಷ, ಮೂವರು ಆರೋಪಿಗಳು
ಪುತ್ತೂರು, ಡಿಸೆಂಬರ್ 8: ಕಾರೊಂದರಲ್ಲಿ ಹಣ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬುಧವಾರ ಪತ್ತೆ ಹಚ್ಚಿದ ಪೊಲೀಸರು 18.80 ಲಕ್ಷ ರುಪಾಯಿ ಹಣದೊಂದಿಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ಮೂಲಕ ದಾಖಲೆ ರಹಿತವಾಗಿ ಹಣ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಲ್ಲಡ್ಕದಿಂದ ಪುತ್ತೂರಿಗೆ ಆಗಮಿಸಿದ ಕಾರನ್ನು ಮುಕ್ರಂಪಾಡಿಯಲ್ಲಿ ಪೊಲೀಸರು ತಡೆದರು.
2 ಸಾವಿರ ಮುಖಬೆಲೆಯ 16.80 ಲಕ್ಷ, 100 ಮುಖಬೆಲೆಯ ರೂ. 1,90,700 ಹಾಗೂ 50 ಮುಖಬೆಲೆಯ 9,300 ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ. ಮಾಣಿ- ಮೈಸೂರು ರಾಜ್ಯ ಹೆದ್ದಾರಿಯಲ್ಲಿನ ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಎಂಬಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ವಶಕ್ಕೆ ಪಡೆದರು.[ಹೈದರಾಬಾದ್ : ಐಟಿ ದಾಳಿ, 17 ಲಕ್ಷ ಅಕ್ರಮ ಹಣ ವಶ]
ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಜಾಫರ್ ಶರೀಫ್, ಗೋಳ್ತಮಜಲು ಗ್ರಾಮದ ಮಾಣಿಮಜಲು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ನಝೀರ್ ಮತ್ತು ಗೋಳ್ತಮಜಲು ಗ್ರಾಮದ ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ಇಕ್ಬಾಲ್ ಬಂಧಿತರು.[ಬೆಂಗಳೂರಿನ ಕೆನರಾ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮೇಲೆ ದಾಳಿ]
ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಸಂಪ್ಯ ಠಾಣಾ ಎಸ್ಐ ಅಬ್ದುಲ್ ಖಾದರ್, ಸಿಬ್ಬಂದಿ ಚಂದ್ರ ಎಚ್. ಸಿ, ವಿನಯ ಕುಮಾರ್, ರವೂಫ್, ನಗರ ಠಾಣೆ ಸಿಬ್ಬಂದಿ ಸ್ಕರಿಯಾ ಎಚ್.ಸಿ, ಪ್ರಶಾಂತ್ ರೈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.