'ಹರಕು ಬಾಯಿ ಹೊಲಸು ನಾಲಿಗೆಯ ಪ್ರತಾಪ್ ಸಿಂಹರಿಗೆ ಬುದ್ಧಿವಾದ ಹೇಳಿ'
ಮೈಸೂರು, ಮಾರ್ಚ್ 26 : ಗೀತಾ ಮಹದೇವಪ್ರಸಾದ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಪ್ರಭಾ ಬೆಳವಂಗಲ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಗೌರವದಿಂದ ಕಾಣಬೇಕು. ಒಂದು ವೇಳೆ ಆಕೆ ತಪ್ಪು ಮಾಡಿದ್ದರೂ ಆಕೆಯನ್ನು ಅಗೌರವದಿಂದ ಕಾಣುವ ಅಧಿಕಾರ ಪುರುಷನಿಗಿಲ್ಲ. ಸ್ತ್ರೀಯನ್ನು ಅಗೌರವದಿಂದ ಕಾಣುವ ವ್ಯಕ್ತಿಯನ್ನು ಭಗವಂತನೂ ಕ್ಷಮಿಸಲಾರ ಎಂದು ಭಗವದ್ಗೀತೆಯಲ್ಲಿ ಹೇಳಿದೆ.
ಮಾತಿಗೂ ಮುನ್ನ ಭಾರತ ಮಾತಾ ಕೀ ಜೈ ಎನ್ನುವ ಬಿಜೆಪಿ ಹಿರಿಯ ನಾಯಕರು ಇಂತಹ ಹರಕು ಬಾಯಿ, ಹೊಲಸು ನಾಲಿಗೆಯ ಪ್ರತಾಪ್ ಸಿಂಹರಿಗೆ ಬುದ್ಧಿವಾದ ಹೇಳಬೇಕಿದೆ ಎಂದರು.
ಗುಂಡ್ಲುಪೇಟೆಯ ಉಪಚುನಾವಣಾ ಪ್ರಚಾರದಲ್ಲಿದ್ದ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಅವರು ಗಂಡ ಸತ್ತು, ಹಾಲು ತುಪ್ಪ ಬಿಡುವ ಮೊದಲೇ ಗೂಟದ ಕಾರನ್ನು ನೆನಪಿಸಿಕೊಳ್ಳುತ್ತಿದ್ದರು. ಎಂದು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ.
ಅಲ್ಲದೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಪ್ರಭಾ ಬೆಳವಂಗಲ ಅವರು ಫೇಸ್ ಬುಕ್ ನಲ್ಲಿ ವಿವಾದಿತ ಪೋಸ್ಟರ್ ಪೋಸ್ಟ್ ಮಾಡಿದ ಕುರಿತು ಸ್ವಅನುಭವ ಪಡೆದುಕೊಳ್ಳಿ ಎಂಬ ಪ್ರತಾಪ್ ಸಿಂಹ ಹೇಳಿಕೆಗಳು ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದರು.
ತಮ್ಮ ಮಾತಿನ ಮೇಲೆ ಹಿಡಿತವಿಲ್ಲದೇ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿರುವ ಪ್ರತಾಪ್ ಸಿಂಹ ಸಂಸದ ಸ್ಥಾನಕ್ಕೆ ಒಂದು ಕಳಂಕ. ಇವರ ಕೀಳು ಅಭಿರುಚಿಯ ಹೇಳಿಕೆಗಳನ್ನು ನೋಡಿದರೆ ಇವರೊಬ್ಬ ಸ್ಯಾಡಿಸ್ಟ್ ಸಂಸದ ಎಂದು ತಿಳಿದುಬರುತ್ತದೆ.
ಶಾಸಕರಾಗಲಿ, ಮಂತ್ರಿಗಳಾಗಲಿ ಅಕಾಲಿಕ ಮರಣ ಹೊಂದಿದಾಗ ಇವರ ಪತ್ನಿಯರು ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಮಾನ್ಯ. ಅದು ಎಲ್ಲ ಪಕ್ಷದಲ್ಲೂ ನಡೆದುಬಂದಿದೆ.
ಗಂಡನನ್ನು ಕಳೆದುಕೊಂಡ ಮಹಿಳೆಗೆ ಸಮಾಜದ ಸಾಂತ್ವನ ಬೇಕು. ತಲೆ ಎತ್ತಿ ನಡೆಯಲು ಶಕ್ತಿ ತುಂಬಬೇಕು. ಆದರೆ, ಮಹಿಳೆಯರು ಗಂಡ ಸತ್ತಮೇಲೆ ರಾಜಕೀಯಕ್ಕೆ ಬರಬಾರದು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಪ್ರತಾಪ್ ಸಿಂಹ ಮನಸ್ಥಿತಿ ಮನುವಾದದ ಸಂಕೇತ ಎಂದು ಟೀಕಿಸಿದರು.
ಬಿಜೆಪಿಯಲ್ಲಿರುವ ಮಹಿಳಾ ನಾಯಕಿಯರೂ ಕೂಡ ಇಂತಹ ವ್ಯಕ್ತಿಗಳ ಹೇಳಿಕೆಯನ್ನು ಖಂಡಿಸಬೇಕು. ಮಹಿಳಾ ಸಮುದಾಯ ಈ ಸ್ತ್ರೀವಿರೋಧಿ ಸಂಸದರ ವಿರುದ್ಧ ಪ್ರತಿಭಟನೆಗೆ ಇಳಿಯಬೇಕು ಎಂದು ಒತ್ತಾಯಿಸಿದರು.