ಮತಾಂತರದ ವಿರುದ್ಧ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ
ಸುಳ್ಯ, ಸೆಪ್ಟೆಂಬರ್ 20: ಹಿಂದೂ ಜೀವನ ಶೈಲಿ, ಸಂಸ್ಕೃತಿಗೆ ತೊಂದರೆ ಮಾಡಿದರೆ ಸಹಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನೇತಾರ ಡಾ.ಕಲ್ಲಡ್ಕ ಪ್ರಭಾಕರ ಭಟ್ ಎಚ್ಚರಿಸಿದರು.
ಸುಳ್ಯ ತಾಲೂಕಿನಲ್ಲಿ ಬೆಳಕಿಗೆ ಬಂದ ಮತಾಂತರ ಪ್ರಕರಣ ವಿರುದ್ದ ಧ್ವನಿ ಎತ್ತಿರುವ ತಾಲೂಕಿನ ಹಿಂದೂ ಸಮಾಜ, ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಸೋಮವಾರ ಸುಳ್ಯ ಚೆನ್ನಕೇಶವ ದೇವಾಲಯದ ಎದುರು ನಡೆದ ಮತಾಂತರ, ಲವ್ ಜಿಹಾದ್, ಭಯೋತ್ಪಾದನೆಯ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.[ಸುಳ್ಯದಲ್ಲೀಗ ದೀಕ್ಷಿತ್ ಗೌಡ ಇಸ್ಲಾಂ ಧರ್ಮಕ್ಕೆ ಮತಾಂತರದ್ದೇ ಸುದ್ದಿ]
ಹಿಂದೂ ಸಮಾಜದ ರಕ್ಷಣೆಗಾಗಿ ಯಾವುದೇ ಕೇಸು ಅಥವಾ ಜೈಲು ಶಿಕ್ಷೆಗೆ ಹೆದರುವುದಿಲ್ಲ. ಮತಾಂತರ, ಲವ್ ಜಿಹಾದ್, ಭಯೋತ್ಪಾದನೆ ವಿರುದ್ದ ಹಿಂದೂ ಸಮಾಜದ ಸಮರ ನಿರಂತರವಾಗಿರುತ್ತದೆ ಎಂದರು.
ಹಿಂದೂ ಸಮಾಜ ಒಂದು ಸಾವಿರ ವರ್ಷಗಳ ಆಕ್ರಮಣವನ್ನು ಮೆಟ್ಟಿ ನಿಂತಿದೆ. ಕದ್ದುಮುಚ್ಚಿ ಆಕ್ರಮಣ ಮಾಡುವುದನ್ನು ಬಿಟ್ಟು, ತಾಕತ್ತಿದ್ದರೆ ನೇರ ಹೋರಾಟಕ್ಕೆ ಬನ್ನಿ. ಹಿಂದೂ ಜೀವನ ಶೈಲಿ, ಸಂಸ್ಕೃತಿಗೆ ತೊಂದರೆ ಮಾಡಿದರೆ ಹಿಂದೂಗಳು ಸಹಿಸುವುದಿಲ್ಲ ಎಂದು ಈ ಪ್ರತಿಭಟನೆ ತೋರಿಸಿದೆ.[ಮದರ್ ತೆರೇಸಾ ಭಾರತಕ್ಕೆ ಯಾಕೆ ಬಂದಿದ್ರು? ಆಸ್ಕ್ ಆರೆಸ್ಸೆಸ್]
ಈ ದೇಶವನ್ನು ಪಾಕಿಸ್ತಾನ ಮಾಡಲು ಹೊರಟವರಿಗೆ ಉತ್ತರಿಸಲು ಸಶಕ್ತ ಹಿಂದೂ ಸಮಾಜ ಸಿದ್ಧವಿದೆ. ಶಾಂತಿಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಮೋಸ ಮಾಡಲಾಗಿದೆ ಎಂದು ಟೀಕಿಸಿದರು.
ಈ ದೇಶದ ಹಿಂದೂಗಳು ಇಲ್ಲಿ ಮುಸ್ಲಿಂ ಮತ್ತು ಕೈಸ್ತ ಸಮುದಾಯದವರಿಗೆ ತಮ್ಮ ಆರಾಧನಾ ಕೇಂದ್ರಗಳನ್ನು ನಿರ್ಮಿಸಲು ಅವಕಾಶ ಕೊಟ್ಟಿದ್ದಾರೆ. ನಮ್ಮ ನೆಲದಲ್ಲಿ ಅವಕಾಶ ಪಡೆದು ಕೆಲವು ದೇಶದ್ರೋಹಿಗಳ ಕೆಲಸ ಮಾಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂಗಳ ಔದಾರ್ಯ ದೌರ್ಬಲ್ಯವಲ್ಲ ಎಂದು ಎಚ್ಚರಿಸಿದರು. ಹಿಂದೂ ಸಮಾಜ ಆಕ್ರಮಣಗಳ ವಿರುದ್ದ ಸೆಟೆದು ನಿಲ್ಲಬೇಕು ಎಂದು ಮನವಿ ಮಾಡಿದರು.