5 ಲಕ್ಷ ಮೌಲ್ಯದ ಆಭರಣ ಹಿಂತಿರುಗಿಸಿದ ಪ್ರಾಮಾಣಿಕ ಆಟೋ ಚಾಲಕ
ಮಂಗಳೂರು, ಆಗಸ್ಟ್ 26: ಪ್ರಾಮಾಣಿಕತೆ, ನೀತಿವಂತಿಕೆಯಿಂದ ಬದುಕುವವರ ಸಂಖ್ಯೆ ಬಹಳ ಕಡಿಮೆ ಆಗ್ತಿದೆ ಎಂಬುದು ಇತ್ತೀಚೆಗೆ ಪದೇಪದೇ ಕೇಳಿಬರುತ್ತಿರುವ ಕಂಪ್ಲೇಂಟು. ಅದರಲ್ಲೂ ಬೇರೆಯವರ ಆಸ್ತಿ, ಹಣ ಸಿಕ್ಕಿದರೆ ಒಳಗೆ ಹಾಕಿಕೊಳ್ಳೋಣ ಅಂತ ಯೋಚಿಸುವವರ ಸಂಖ್ಯೆಯೇ ಹೆಚ್ಚು.
ಅಂತಹದರಲ್ಲಿ ಮಂಗಳೂರಿನ ಆಟೋ ಚಾಲಕ ಪ್ರತಾಪ್ ಶೆಟ್ಟಿ ಅವರು ತಮ್ಮ ಆಟೋದಲ್ಲಿ ಸಿಕ್ಕ 5 ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣಗಳನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಹಣಕ್ಕಾಗಿ ಹಾಡ ಹಗಲೇ ಕೊಲೆ, ಸುಲಿಗೆ ಮಾಡುವ ದಿನಮಾನದಲ್ಲಿ ಈ ಆಟೋಚಾಲಕ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ.[ನನಗೆ ಮಂಗಳೂರು ಇಷ್ಟ. ಮಂಗಳೂರು ಹೆವೆನ್ : ರಮ್ಯಾ]
'ಪರರ ಸೊತ್ತು ಪಾಷಾಣಕ್ಕೆ ಸಮ' ಎಂಬ ಗಾದೆ ಮಾತಿನಂತೆ ತಮಗೆ ಸಿಕ್ಕಿದ ಚಿನ್ನಾಭರಣವನ್ನು ನಿಷ್ಠಾವಂತರಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ದಂಪತಿ ಆಟೋ ಹಿಡಿದು ಕುಲಾಯಿಯಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ತೆರಳುವಾಗ ತಮ್ಮ 5 ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣಗಳನ್ನು ಮರೆತು ಹೋಗಿದ್ದರು. ದಂಪತಿ ದೀಪ್ತಿ ಮತ್ತು ಪ್ರಶಾಂತ್ ಮೂಲತಃ ಬೆಂಗಳೂರಿನವರು. ಮದುವೆ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಬಂದಿದ್ದರು.[ಮಾಜಿ ಸಂಸದೆ ರಮ್ಯಾ ಕಾರಿಗೆ ಹಿಂದೂ ಸಂಘಟನೆಗಳಿಂದ ಮುತ್ತಿಗೆ]
ಪ್ರತಾಪ್ ಶೆಟ್ಟಿ ಅವರು ಚಿನ್ನಾಭರಣವಿದ್ದ ಬ್ಯಾಗನ್ನು ಯಥಾಸ್ಥಿಯಲ್ಲಿ ಮಂಗಳೂರಿನ ಉತ್ತರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ ಕಮಿಷನರ್ ಎಂ. ಚಂದ್ರಶೇಖರ್ ಅವರು 5000 ರು. ನಗದು ಬಹುಮಾನ ಮತ್ತು ಪ್ರಶಂಸಾ ಪಾತ್ರವನ್ನು ನೀಡಿ, ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.