ನಾಲಗೆ ಹರಿಬಿಟ್ಟ ಸ್ವಾಮೀಜಿ ಮೇಲೆ ಪೊಲೀಸ್ ಕೇಸ್
ಮಂಗಳೂರು, ಡಿ. 12 : ರಾಜಕೀಯ ನಾಯಕರು ಬೇಕಾಬಿಟ್ಟಿಯಾಗಿ ನಾಲಗೆ ಹರಿಬಿಟ್ಟು ಆಮೇಲೆ ಕ್ಷಮೆ ಕೇಳುವುದು ಈಗೀಗ ಸಾಮಾನ್ಯವಾಗಿಬಿಟ್ಟಿದೆ. ಕೆಲವೊಮ್ಮೆ ಪ್ರಕರಣಗಳು ದಾಖಲಾಗಿ ವಿಚಾರಣೆ ಎದುರಿಸಿದ್ದನ್ನು ನೋಡಿದ್ದೇವೆ.
ರಾಜಕಾರಣಿಗಳ ಚಾಳಿ ಈಗ ಸ್ವಾಮೀಜಿಗಳನ್ನು ಮೆಟ್ಟಿಕೊಂಡಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ಅಸಂವಿಧಾನಿಕ ಪದ (ಲೋಫರ್) ಬಳಸಿ ಕರೆದಿದ್ದ ಪ್ರಣವಾನಂದ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದೆ. ಉಳ್ಳಾಲ ಠಾಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೂರು ದಾಖಲಿಸಿದ್ದಾರೆ.['ಮುತ್ತು ಪ್ರಿಯರಿಗೆ' ಪ್ರಣವಾನಂದ ಶ್ರೀ ಎಚ್ಚರಿಕೆ]
ಕೋಮು ಗಲಭೆಯಿಂದ ತತ್ತರಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಉಳಾಯಿಬೆಟ್ಟುಗೆ ಡಿಸೆಂಬರ್ 7 ರಂದು ಭೇಟಿ ನೀಡಿದ್ದ ಹಿಂದೂ ಮಹಾಸಭಾ ಸಂಸ್ಥಾಪಕ ಪ್ರಣವಾನಂದ ಸ್ವಾಮೀಜಿ ಯು.ಟಿ.ಖಾದರ್ ಅವರನ್ನು 'ಲೋಫರ್' ಎಂದು ಕರೆದಿದ್ದರು. ಅಲ್ಲದೇ 'ಮುಸ್ಲಿಮರೆಲ್ಲ ಉಗ್ರರು' ಎಂದು ಮಾಧ್ಯಮಗಳ ಮುಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ದೂರು ನೀಡಿದ್ದು, ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸ್ವಾಮಿ ಪ್ರಣವಾನಂದ ವಿರುದ್ಧ ಭಾರತೀಯ ದಂಡಸಂಹಿತೆ ಕಲಂ 153ಎ(ಕೋಮು ಗಲಭೆಗೆ ಪ್ರಚೋದನೆ ನೀಡುವುದು), ಕಲಂ 298(ಅಸಂವಿಧಾನಿಕ ಪದ ಬಳಕೆ) ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಶಾಂತಿ ಕದಡುವ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ.