ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ-ಜನಾರ್ದನ ಪೂಜಾರಿ
ಸಿದ್ದರಾಮಯ್ಯ ಕಾಂಗ್ರೆಸ್ ಗೆ ಶನಿ ಇದ್ದಂತೆ. ಅವರು ಪಕ್ಷ ತೊರೆಯದೇ ಇದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಅಂತ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಹೇಳಿದ್ದಾರೆ.
ಮಂಗಳೂರು, ಜನವರಿ 30: ಎಸ್ ಎಂ ಕೃಷ್ಣಾ ರಾಜೀನಾಮೆ ಕಾಂಗ್ರೆಸ್ ನಾಯಕರಲ್ಲಿ ಅಪಸ್ವರಕ್ಕೆ ಖಾರಣವಾಗಿದೆ. ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಕಾಂಗ್ರೆಸ್ ಪಕ್ಷ ಗಂಡಾಂತರಕ್ಕೆ ಸಿಲುಕಲಿದೆ ಎಂದು ಹೇಳಿದ್ದಾರೆ.
"ಎಸ್. ಎಂ ಕೃಷ್ಣ ರಾಜೀನಾಮೆಯಿಂದ ಕಾಂಗ್ರೆಸ್ಸಿಗೆ ಬಲು ದೊಡ್ಡ ನಷ್ಟವಾಗಿದೆ. ಪಕ್ಷದಲ್ಲಿ ಅವರನ್ನು ಕಡೆಗಣನೆ ಮಾಡಿದ್ದು ಸರಿಯಲ್ಲ. ಕೃಷ್ಣ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ," ಎಂದಿದ್ದಾರೆ. ಆದರೆ ಕೃಷ್ಣ ರಾಜಿನಾಮೆ ನೀಡಿದ್ದು ಸರಿಯಲ್ಲ ಎಂದು ಪೂಜಾರಿ ವಿಶ್ಲೇಷಿಸಿದ್ದಾರೆ.
"ನೀವು ತಪ್ಪು ಮಾಡಿದಿರಿ. ನೀವು ಪಕ್ಷ ತೊರೆದಿದ್ದು ಸರಿ ಅಲ್ಲ. ನಾವಿಬ್ಬರು ಜೊತೆಯಾಗಿ ಹೋರಾಟ ಮಾಡಬಹುದಿತ್ತು," ಎಂದು ಕೃಷ್ಣರನ್ನು ಉದ್ದೇಶಿಸಿ ಪೂಜಾರಿ ಹೇಳಿದ್ದಾರೆ. "ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುರಂಹಕಾರ ಮಿತಿ ಮೀರಿದೆ. ಸಿಧ್ಧರಾಮಯ್ಯ ಕಾಂಗ್ರೆಸ್ ಗೆ ಶನಿ ಇದ್ದಂತೆ. ಅವರು ಪಕ್ಷ ತೊರೆಯದೇ ಇದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ," ಎಂದು ಸಿದ್ಧರಾಮಯ್ಯ ವಿರುದ್ಧ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
"ಜಾಫರ್ ಶರೀಫ್, ಪ್ರಕಾಶ್ ಹುಕ್ಕೇರಿ ಪಕ್ಷ ಬಿಡಬಾರದ. ಯಾರೂ ಹಿರಿಯ ನಾಯಕರು ಪಕ್ಷ ತೊರೆಯಬಾರದು. ಎಲ್ಲರೂ ಜೊತೆಯಾಗಿ ಹೋರಾಟ ಮಾಡೋಣ. ಮುಖ್ಯಮಂತ್ರಿಯ ಸೊಕ್ಕನ್ನು ಮುರಿಯೋಣ," ಎಂದು ಈ ಸಂದರ್ಭದಲ್ಲಿ ಜನಾರ್ಧನ ಪೂಜಾರಿ ಕರೆ ನೀಡಿದರು.
"ಎಸ್ ಎಂ ಕೃಷ್ಣ ಅವರೆ ನೀವು ಆತುರದಲ್ಲಿದ್ದೀರಿ. ನೀವು ಸೋನಿಯಾ ಗಾಂಧಿ ಮಾತನ್ನೂ ಕೇಳಲಿಲ್ಲ. ನೀವು ಸೋನಿಯಾ ಮಾತನ್ನು ಅರ್ಥವೂ ಮಾಡಿಕೊಳ್ಳಲಿಲ್ಲ. ನೀವು ಬೇರಾವುದೇ ಪಕ್ಷ ಸೇರಬೇಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ವಿರೋಧ ಪಕ್ಷಗಳು ನಿಮ್ಮನ್ನು ಸಂಪೂರ್ಣ ಮುಗಿಸಿ ಬಿಡುತ್ತಾರೆ. ವಿರೋಧ ಪಕ್ಷಕ್ಕೆ ನೀವು ದೊಡ್ಡ ಆಸ್ತಿಯಾಗುತ್ತೀರಿ. ಆದ್ರೆ ನಿಮಗೆ ಭವಿಷ್ಯದಲ್ಲಿ ಅದೇ ಮುಳ್ಳಾಗಲಿದೆ," ಎಂದು ಪೂಜಾರಿ ಕಿವಿ ಮಾತನ್ನೂ ಹೇಳಿದರು.