ಅನೈತಿಕ ಚಟುವಟಿಕೆ ಕೇಂದ್ರವಾದ ಕದ್ರಿ ಉದ್ಯಾನವನ
ಮಂಗಳೂರು, ಜು, 09 : ಅದು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಸುಂದರ ಉದ್ಯಾನವನ. ಗಿಡಮರಗಳಿಂದ ಹಸಿರು ತುಂಬಿ ಕಂಗೊಳಿಸಬೇಕಾದ, ಅರಳಿದ ಹೂಗಳ ಸುವಾಸನೆ ಬೀರಬೇಕಾದ ಸುಮಾರು 10 ಎಕರೆ ವ್ಯಾಪ್ತಿಯ ಈ ಉದ್ಯಾನವನ ಈಗ ಪಡ್ಡೆಗಳ ತಾಣವಾಗಿ ಮಾರ್ಪಟ್ಟಿದೆ. ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ಗೂಡಾಗಿ ಸಾರ್ವಜನಿಕರಿಗೆ ಅಸಹ್ಯ ಹುಟ್ಟಿಸುವಂತಿದೆ. ಏನಿದು ಸ್ಟೋರಿ ಓದಿ ನೋಡಿ.....
ಇಲ್ಲಿ ಕಾಣುತ್ತಿರುವುದು ಮಂಗಳೂರಿನ ಕದ್ರಿ ಉದ್ಯಾನವನದ ದೃಶ್ಯಗಳು. ಜನ ಇಲ್ಲಿ ವಾಕಿಂಗೂ ಮಾಡ್ತಾರೆ, ಮೈ ಬಿಸಿನೂ ಮಾಡಿಕೊಳ್ತಾರೆ. ಅರ್ಥ ಆಗಿಲ್ವಾ...ಮಂಗಳೂರು ಮಹಾಗನರದ ಏಕೈಕ ಮತ್ತು ಅತ್ಯಂತ ದೊಡ್ಡ ಪಾರ್ಕ್ ಎಂಬ ಹೆಗ್ಗಳಿಕೆ ಹೊಂದಿರುವ ಕದ್ರಿ ಉದ್ಯಾನವನದಲ್ಲೀಗ ಪೋಲಿಗಳು ಬಿಡಾರ ಹೂಡಿದ್ದಾರೆ[ಜಯನಗರ ರಣಧೀರ ಕಂಠೀರವ ಪಾರ್ಕ್ ವಿಶೇಷತೆಗಳು]
ಯಾಕೆ ಹೀಗೆ ಅಂತ ಅನ್ಕೊಂತಿದ್ದೀರಾ?ಈ ಪಾರ್ಕ್ ನಿರ್ವಹಣಾಕಾರರ, ಭದ್ರತಾ ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ. ಪಾರ್ಕ್ ಸುತ್ತಾ ಒಂದು ಗೋಡೆಯೂ ಇಲ್ಲ. ಇನ್ನು ವಿದ್ಯುತ್ ದೀಪಗಳು ಉರಿಯುವುದನ್ನೇ ಮರೆತು ಬಿಟ್ಟಿವೆ. ಹೂವಿನ ಗಿಡಗಳು ಪೊದೆಗಳಾಕಾರದಲ್ಲಿ ಬೆಳೆದಿದ್ದು, ರಾತ್ರಿ ಪಡ್ಡೆ ಹುಡುಗರು ಅಕ್ರಮ, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ, ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಸ್ಥಳೀಯರಾದ ಹರೀಶ್ ಆರೋಪಿಸುತ್ತಾರೆ.
ಇನ್ನು ಬೀದಿ ನಾಯಿಗಳು ಕೂಡ ಬಿಡಾರ ಹೂಡಿದ್ದು, ಮಕ್ಕಳು ಆಟವಾಡುವಾಗ, ವಯಸ್ಕರು ವಾಕಿಂಗ್ ಮಾಡುವಾಗ ಬಹಳಷ್ಟು ತೊಂದರೆ ಕೊಡುತ್ತಿವೆ. ಕೆಲವೊಮ್ಮೆ ಮೈಮೇಲೆ ಎರಗಿ ಜನರಿಗೆ ಅಪಾಯ ಉಂಟಾದ ನಿದರ್ಶನಗಳೂ ಸಾಕಷ್ಟಿವೆ. ಮಕ್ಕಳ ಬಾಲಮಂಗಳ ಎಕ್ಸ್ ಪ್ರೆಸ್ ರೈಲು ಹಾಳಾಗಿ ನಿಂತು ವರ್ಷಗಳೇ ಕಳೆದಿವೆ. ಮಕ್ಕಳಾಡುವ ಉಪಕರಣಗಳು ಕೂಡ ತುಕ್ಕು ಹಿಡಿದಿದ್ದು, ಸಂರಕ್ಷಣೆಗಾಗಿ ಪ್ಲಾಸ್ಟಿಕ್ ನಿಂದ ಮುಚ್ಚಲಾಗಿದೆ. ಆದರೆ ನಿರ್ವಹಣಾಕಾರರು ಇಲ್ಲದೇ ಸೊರಗುತ್ತಿರುವ ಉದ್ಯಾನವನ ತನ್ನ ಸುಂದರತೆ ಕಳೆದುಕೊಳ್ಳುತ್ತಿರುವುದು ಮಾತ್ರ ಬೇಸರ ತರಿಸುತ್ತದೆ[ಚಂದ್ರಾಲೇಔಟ್ ಪಾರ್ಕ್ ವಿವಾದ, ನಿಷೇಧಾಜ್ಞೆ ಜಾರಿ]
ಪಾರ್ಕ್ ದುರಸ್ಥಿಗಾಗಿ ಮಂಗಳೂರು ಶಾಸಕ ಜೆ.ಆರ್.ಲೋಬೊ ಸ್ಥಳೀಯಾಭಿವೃದ್ಧಿ ನಿಧಿಯಿಂದ ಕಳೆದ ೨ ವರ್ಷದಲ್ಲಿ ೪ ಕೋಟಿ ರೂ ವೆಚ್ಚ ಮಾಡಲಾಗಿದೆ. ಸುತ್ತಲೂ ಗೋಡೆ ನಿರ್ಮಿಸುತ್ತಿದ್ದರೂ ಅದು ಇನ್ನೂ ಪೂರ್ಣವಾಗಿಲ್ಲ. ಪಾರ್ಕ್ ಗೇಟ್ ಬಳಿಯೇ ಆವರಣ ಗೋಡೆ ಬಿದ್ದಿದ್ದರೂ, ಅಧಿಕಾರಸ್ಥರು ಕಣ್ಣಿದ್ದೂ ಕುರುಡರಾಗಿದ್ದಾರೆ. ಪಾರ್ಕ್ ಮಧ್ಯದಲ್ಲಿ ನೀರಿನ ಕಾರಂಜಿಯಿದ್ದು, ನಿರ್ವಹಣೆಯಿಲ್ಲದೆ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಕಸ ವಿಲೇವಾರಿ ಸರಿಯಾಗಿ ನಡೆಯದ ಕಾರಣ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ಕೊಟ್ಟಂತಾಗಿದೆ. ಒಟ್ಟಿನಲ್ಲಿ ನಗರದ ಜನರಿಗೆ ವಿಹಾರ ತಾಣವಾಗಬೇಕಾದ ಉದ್ಯಾನವನ ಪಡ್ಡೆಗಳಿಗೆ ಮತ್ತು ಬೀದಿ ನಾಯಿಗಳು ಬಿಡಾರ ಹೂಡುವಂತಾಗಿರುವುದು ವಿಪರ್ಯಾಸ.