ಹಫ್ತಾ ದಂಧೆ: ಮಂಗಳೂರು ಮಂಗಳಮುಖಿಯರ ನಡುವೆ ಮಾರಾಮಾರಿ
ಮಂಗಳೂರು, ಫೆಬ್ರವರಿ 7: ಮಂಗಳಮುಖಿಯರನ್ನು ಒಗ್ಗೂಡಿಸಿ ಒಂದೇ ಸೂರಿನಡಿ ಅವರ ಸಮಸ್ಯೆಗಳಿಗೆ ಪರಿಹಾರ ಕಾಣುವ ಸಲುವಾಗಿ ಆರಂಭವಾದ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ನಲ್ಲಿ ಇದೀಗ ಮಂಗಳಮುಖಿಯರ ನಡುವೆ ಹಣ ವಸೂಲಾತಿ ವಿಚಾರದಲ್ಲಿ ಉಂಟಾದ ಜಗಳಗಳು ಮಾರಾಮಾರಿಗೆ ತಿರುಗಿದೆ.
ರಾಜ್ಯದಲ್ಲೇ ಪ್ರಥಮಬಾರಿಗೆ ಈ ಸಂಘದ ಮಂಗಳಮುಖಿಯರಿಗಾಗಿ ಆಧಾರ್ ಕಾರ್ಡ್ ಮಾಡಿಕೊಡಲಾಗಿತ್ತು. ಇದಲ್ಲದೆ ಮಂಗಳಮುಖಿಯರಿಗೆ ಹಫ್ತಾ ತೆಗೆದುಕೊಳ್ಳಬಾರದು ಎಂದು ಅನೇಕ ಬಾರಿ ಸಂಘದ ಮುಖ್ಯಸ್ಥರು ಹೇಳಿದ್ದಾರೆ. ಆದರೆ, ಆ ಮಾತಿಗೆ ಕಿಮ್ಮತ್ತು ನೀಡದ ಮಂಗಳಮುಖಿಯರು ತಮ್ಮ ದಂಧೆಯನ್ನು ಮುಂದುವರಿಸಿದ್ದು ಮಾರಾಮಾರಿಗೆ ಕಾರಣವಾಗಿದೆ.
ವಸೂಲಿಗಳ ವಿಚಾರದಲ್ಲಿ ಈ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ನಲ್ಲಿ ರಾಣಿ ಎನ್ನುವ ಮಂಗಳಮುಖಿ ಬಹಳ ಪ್ರಾಮುಖ್ಯತೆ ಪಡೆದಿದ್ದಾರೆ. ಈ ನಿಮಿತ್ತ ಅವರದೇ ಸಂಘದ ಇನ್ನೋರ್ವ ಮಂಗಳಮುಖಿ ಪ್ರಿಯಾ ಎಂಬುವರಿಗೆ ಮಾಸಿಕ 6000 ರು. ಹಫ್ತಾ ನೀಡಬೇಕು ಎಂದು ಬೆದರಿಸಿದ್ದಾರೆ.
ಇದಕ್ಕೆ ಪ್ರಿಯಾ ನಿರಾಕರಿಸಿದಾಗ ರಾಣಿಯವರು ತಮ್ಮ ಉಳಿದ ಸಂಘದ ಸದಸ್ಯರೊಂದಿಗೆ ಹೇಳಿ ಪ್ರಿಯಾ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಗಾಯಗೊಂಡ ಪ್ರಿಯಾ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆಯೂ ರಾಣಿಯವರಿಗೆ ಸಂಘದ ಮುಖ್ಯಸ್ಥರು ಹಫ್ತಾ ತೆಗೆದುಕೊಳ್ಳಬಾರದೆಂದು ಎಚ್ಚರಿಸಿದ್ದರು ಅದ್ಯಾವುದಕ್ಕೂ ಕ್ಯಾರೆ ಎನ್ನದೆ ರಾಣಿ ಹಫ್ತಾ ಕೇಳುವ ನೆಪದಲ್ಲಿ ನಿರಾಕರಿಸಿದ ಪ್ರಿಯಾ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಿಯಾ ಅವರು ಪಣಂಬೂರು ಠಾಣೆಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಅವರು ರಾಣಿಯವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಸ್ತುತ ರಾಣಿಯವರು ಬೆಂಗಳೂರಿನಲ್ಲಿದ್ದು ಬಂದ ನಂತರ ಪೊಲೀಸರು ತನಿಖೆ ನಡೆಸುವುದಾಗಿ ಪ್ರಿಯಾ ಅವರಿಗೆ ಭರವಸೆ ನೀಡಿದ್ದಾರೆ.
ಮಂಗಳಮುಖಿಯರಿಗೂ ಸಾಮಾನ್ಯ ಜನರಂತೆ ಬದುಕುವ ಹಕ್ಕಿದೆ , ಹೊಟ್ಟೆಪಾಡಿಗಾಗಿ ಭಿಕ್ಷಾಟನೆ ಮಾಡುತ್ತಾರೆ. ಈ ಎಲ್ಲಾ ವಾದಗಳೂ ಸರಿ. ಆದರೆ, ಅವರಲ್ಲೇ ಹಣ ವಸೂಲಿ, ಸುಲಿಗೆಯಂಥ ಕಾನೂನು ವಿರೋಧಿ ದಂಧೆಗಳು ಹುಟ್ಟಿಕೊಂಡರೆ, ಅವರಿಗಾಗಿ ರೂಪಿಸಲಾಗಿರುವ ಕಾರ್ಯಕ್ರಮಗಳು ಅರ್ಥ ಕಳೆದುಕೊಳ್ಳಲಿವೆ. ಹಾಗಾದಲ್ಲಿ, ಅದರ ಘೋರ ಪರಿಣಾಮವನ್ನು ಆ ಸಮುದಾಯವೇ ಅನುಭವಿಸಬೇಕಾಗುತ್ತದೆ.