ಪರಮವೀರ ಚಕ್ರ ಪುರಸ್ಕೃತ ಯೋಗಿಂದರ್ ಸಿಂಗ್ ಮಂಗಳೂರಿಗೆ
ಮಂಗಳೂರು, ಆಗಸ್ಟ್, 03 : ಪರಮವೀರ ಚಕ್ರ ಪುರಸ್ಕೃತ ಗ್ರೆನೇಡಿಯರ್ ಸುಭೇಧಾರ್ ಯೋಗಿಂದರ್ ಸಿಂಗ್ ಯಾದವ್ ಅವರು ಮಂಗಳೂರಿಗೆ ಆಗಮಿಸಲಿದ್ದು, 'ವರ್ಡ್ಸ್ ಆಫ್ ಎ ರಿಯಲ್ ಹೀರೋ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಯುವ ಬ್ರಿಗೇಡ್ ನೇತೃತ್ವದಲ್ಲಿ ಮಂಗಳೂರಿನ ಉರ್ವ ಕೆನರಾ ಹೈಸ್ಕೂಲ್ ಕ್ಯಾಂಪಸ್ನ ಮಿಜಾರು ಗೋವಿಂದ ಪೈ ಮೆಮೋರಿಯಲ್ ಹಾಲ್ನಲ್ಲಿ ಆಗಸ್ಟ್ 9 ರ ಭಾನುವಾರದಂದು ಬೆಳಗ್ಗೆ 11 ಗಂಟೆಗೆ ಸಮಾರಂಭ ಜರುಗಲಿದೆ. ಇದರಲ್ಲಿ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮತ್ತು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.[ಮಂಗಳೂರು : ರೈಲು ಅಪಘಾತ ತಪ್ಪಿಸಿದ ರೈತ]
1999ರಲ್ಲಿ ಸಿಂಗ್ ಅವರು, 'ಘಾತಕ್' ಎಂದು ಕರೆಯಲ್ಪಡುವ ಸೇನಾ ತುಕುಡಿಯ ಮುಂಚೂಣಿಯಲ್ಲಿದ್ದರು. ಕಾರ್ಗಿಲ್ ಭೂಮಿಯ ಟೈಗರ್ಹಿಲ್ ರಣರಂಗದಲ್ಲಿ ಶತ್ರುಗಳ ಮೂರು ಬಂಕರ್ ಗಳನ್ನು ಪುಡಿಗಟ್ಟುವ ಜವಾಬ್ದಾರಿಯನ್ನು ಈ ತಂಡಕ್ಕೆ ನೀಡಲಾಗಿತ್ತು. ಆಯತಾಕಾರದ ಕಣಿವೆಯಂತಹ ದುರ್ಗಮ ಹಿಮಚ್ಛಾದಿತ ಪ್ರದೇಶದಲ್ಲಿ ಹೆಜ್ಜೆ ಇಟ್ಟು ಶತ್ರುವಿನ ಬಂಕರ್ ಗಳತ್ತ ಮುನ್ನುಗ್ಗಿದ ಅವರ ಶೌರ್ಯ ಎಲ್ಲೆಡೆ ಪ್ರಶಂಸೆಗೊಳಗಾಗಿತ್ತು.
ವೀರಾವೇಶದಿಂದ ನುಗ್ಗುವಾಗ ಕೊನೆಯ ಕ್ಷಣದಲ್ಲಿ ಮೂರು ಬುಲೆಟ್ಗಳು ಯೋಗಿಂದರ್ ಸಿಂಗ್ ಅವರ ಭುಜ ಹಾಗೂ ತೊಡೆ ಸಂದನ್ನು ಹೊಕ್ಕಿದ್ದವು. ಅಂತಹ ಸಂದರ್ಭದಲ್ಲಿಯೂ ಯೋಗಿಂದರ್ ಸಿಂಗ್ 60 ಅಡಿ ಮೇಲಕ್ಕೆ ತೆವಳಿಕೊಂಡು ಸಾಗಿ ಶತ್ರುವಿನ ಮೊದಲ ಬಂಕರ್ ಸ್ಫೋಟಿಸಿದ್ದರು. ಅನಂತರ ಇಬ್ಬರು ಸಹ ಯೋಧರೊಂದಿಗೆ ಇನ್ನೊಂದು ಬಂಕರ್ ನಾಶಗೊಳಿಸಿದ್ದರು. ಹೀಗಾಗಿ ಟೈಗರ್ ಹಿಲ್ನ್ನು ತಮ್ಮ ಕೈವಶ ಮಾಡಿಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು.
ಸೈನ್ಯಕ್ಕೆ
ಸೇರಲು
ಬಯಸುವವರಿಗೆ
ವಿಶೇಷ
ಕಾರ್ಯಗಾರ:
ಭಾರತೀಯ ಸೈನ್ಯಕ್ಕೆ ಸೇರಲು ಬಯಸುವ ಯುವಕರಿಗೆ ಮಾರ್ಗದರ್ಶನ ನೀಡಲು ಯುವ ಬ್ರಿಗೇಡ್ ವತಿಯಿಂದ ಹೊಸ ಯೋಜನೆ ಸಿದ್ದಗೊಂಡಿದೆ. ಸೇನೆಗೆ ಸೇರಬಯಸುವ ಆಸಕ್ತ, ಸಶಕ್ತ ಯುವಕರಿಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನದ ಕಾರ್ಯಾಗಾರ ನಡೆಸಲು ಯೋಚಿಸಲಾಗಿದೆ.
ಇದರಂತೆ ಆಗಸ್ಟ್ 9 ರಂದು ಕೆನರಾ ಹೈಸ್ಕೂಲ್ ಕ್ಯಾಂಪಸ್ ನಲ್ಲಿ ಮಧ್ಯಾಹ್ನ 2.30ರಿಂದ ವಿಶೇಷ ಕಾರ್ಯಾಗಾರ ನಡೆಯಲಿದೆ. ಸೈನಿಕರಾಗಲು ಬೇಕಾದ ಮುಖ್ಯ ಅರ್ಹತೆಗಳ ಹಾಗೂ ಇತರ ವಿಷಯಗಳ ಬಗ್ಗೆ ಯುವ ಬ್ರಿಗೇಡ್ ನ ಮಹಾರಕ್ಷಕದ ರಾಜ್ಯ ಸಂಚಾಲಕ ಸುಮುಖ ಬೇಟಗೆರಿ ಅವರ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.