'ಗ್ಯಾಂಗ್ ರೇಪ್, ಜೈಲುವಾಸ ನನ್ನ ಹೋರಾಟಕ್ಕೆ ಪ್ರೇರಣೆ'
ಮಂಗಳೂರು, ಫೆಬ್ರವರಿ,05: ಬಾಲ್ಯದಲ್ಲಿ ನಾನು ಗ್ಯಾಂಗ್ ರೇಪ್ಗೆ ಒಳಗಾಗಿದ್ದೆ, ಸೌಂದರ್ಯ ಸ್ಪರ್ಧೆ ವಿರೋಧಿಸಿ ಎರಡು ತಿಂಗಳು ಅನುಭವಿಸಿದ ಜೈಲುವಾಸ ನನ್ನ ಹೋರಾಟದ ಬದುಕಿಗೆ ಪ್ರೇರಣೆಯಾಯಿತು ಎಂದು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಸುನೀತಾ ಕೃಷ್ಣನ್ ತಮ್ಮ ಹೋರಾಟದ ಹಾದಿಯನ್ನು ಬಿಚ್ಚಿಟ್ಟರು.
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಸಮಾಜ ಕಾರ್ಯ ಕಾಲೇಜಿನ ಹಳೆ ವಿದ್ಯಾರ್ಥಿನಿ ಡಾ. ಸುನೀತಾ ಕೃಷ್ಣನ್ ಅವರನ್ನು ರೋಶನಿ ನಿಲಯದಲ್ಲಿ ಸನ್ಮಾನಿಸಿದ್ದು, ಬಳಿಕ ಮಾತನಾಡಿದ ಅವರು, ನನ್ನ ಪ್ರಜ್ವಲಾ ಸಂಸ್ಥೆ ಮೂಲಕ ಕಳೆದ 20 ವರ್ಷದಲ್ಲಿ 15,600 ಮಹಿಳೆಯರನ್ನು ರಕ್ಷಿಸಲಾಗಿದೆ. ವೇಶ್ಯಾವಾಟಿಕೆಗೆ ತಳ್ಳಲ್ಪಡಬೇಕಿದ್ದ 8 ಸಾವಿರ ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದರು.[ರಜನಿಕಾಂತ್, ರವಿಶಂಕರ್ ಗುರೂಜಿಗೆ ಪದ್ಮ ವಿಭೂಷಣ ಪ್ರಶಸ್ತಿ]
ನನ್ನ ಸಾಮಾಜಿಕ ಕಾರ್ಯಗಳಿಗೆ ಅನೇಕ ಅಡ್ಡಿ ಆತಂಕಗಳು ಎದುರಾಗಿವೆ. ಕೊಲೆ ಬೆದರಿಕೆ, ಹಲ್ಲೆ ಸಹ ನಡೆದಿದೆ ಎಂದು ತಮ್ಮ ಕಹಿ ಅನುಭವಗಳನ್ನು ಡಾ. ಸುನೀತಾ ಕೃಷ್ಣನ್ ಹಂಚಿಕೊಂಡರು.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿಗಳ ಮೇಲ್ಮನವಿಗೆ ಅವಕಾಶ ನೀಡಬಾರದು. ಅತ್ಯಾಚಾರ ಪ್ರಕರಣದ ಆರೋಪಿಗಳ ಮುಖಪರಿಚಯ ಸಾರ್ವಜನಿಕರಿಗೆ ತೋರಿಸುವ ಮೂಲಕ ಪ್ರಕರಣದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ರೋಶನಿ ನಿಲಯ ಸಂಸ್ಥೆ ನಿರ್ದೇಶಕಿ ಫಿಲೋಮಿನಾ ಡಿಸೋಜಾ, ಕಾಲೇಜಿನ ಡೀನ್ ರಮೀಳಾ ಶೇಖರ್, ಪ್ರಾಂಶುಪಾಲ ಡಾ. ಸೋಫಿಯಾ ಫರ್ನಾಂಡೀಸ್ ಇದ್ದರು.