ಶ್ರೀ ಕೃಷ್ಣನ ಬಾಲ ಲೀಲೆಗಳಿಗೆ ಬಣ್ಣ ತುಂಬಿದ ಚಿಣ್ಣರು
ಮಂಗಳೂರು, ಅ.17 : ಬಣ್ಣ ಬಣ್ಣದ ಚಿತ್ತಾರ, ಶ್ರೀ ಕೃಷ್ಣನ ಬಾಲ ಲೀಲೆಗಳು, ಪ್ರಾಣಿ, ಪಕ್ಷಿ, ಪರಿಸರ, ಜಾನಪದ ಕಲೆ, ಗೊಂಬೆಯ ಚಿತ್ರ ಕಲೆ, ಹೀಗೆ ನಾನಾ ರೀತಿಯ ಕಲಾ ಚಿತ್ರಗಳ ಸ್ಪರ್ಧೆ ಹೀಗೆ ನಾನಾ ಚಟುವಟಿಕೆಗಳಲ್ಲಿ ಮಕ್ಕಳು ತೊಡಿಗಿಸಿಕೊಂಡಿದ್ದ ದೃಶ್ಯಗಳು ಮಂಗಳೂರಿನಲ್ಲಿ ಕಂಡುಬಂದವು.
ಶ್ರೀ ಕೃಷ್ಣನ ಬಾಲ ಲೀಲೆಗಳು ಅನಾವರಣಗೊಂಡವು. ಚಿಣ್ಣರ ಕುಂಚದಲ್ಲಿ ಬಣ್ಣಗಳ ಚಿತ್ತಾರಗಳ ಮೂಲಕ ಶ್ರೀ ಕೃಷ್ಣನೇ ಧರೆಗಿಳಿದು ಬಂದಂತೆ ಬಾಸವಾಗುತ್ತಿತ್ತು. ಇಂತಹ ಸುಂದರವಾದ ದೃಶ್ಯಾವಳಿಗಳು ಕಂಡು ಬಂದದ್ದು ನಗರದ ರಮಣ ಪೈ ಸಭಾಂಗಣದಲ್ಲಿ.
71 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಾಗು ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಮಂಗಳೂರಿನ ಇಸ್ಕಾನ್ ವತಿಯಿಂದ ರಮಣ ಪೈ ಸಭಾಂಗಣದಲ್ಲಿ ಶ್ರೀ ಕೃಷ್ಣನ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಪುಟ್ಟ-ಪುಟ್ಟ ಮಕ್ಕಳಿಂದ ಹಿಡಿದು ವಿವಿಧ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 2,500 ಕ್ಕೂ ಹೆಚ್ಚು ಪುಟಾಣಿಗಳು ಭಾಗವಹಿಸಿದ್ದರು. ಶ್ರೀ ಕೃಷ್ಣನ ಬಾಲ ಲೀಲೆಗಳಿಗೆ ಬಣ್ಣ ತುಂಬಿದ ಚಿಣ್ಣರು, ಕ್ಯಾನ್ವಾಸ್ ಮೇಲೆ ಶ್ರೀ ಕೃಷ್ಣನ ಚಿತ್ತಾರ ಮೂಡಿಸಿ ನಲಿದಾಡಿದರು. ಚಿಣ್ಣರ ಚಿಲಿಪಿಲಿಯ ನಡುವೆ ಪೋಷಕರು ಬಣ್ಣಗಳ ಓಕುಳಿಯ ನಡುವೆ ಮಿಂದೆದ್ದರು.
'ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ಸ್ಪರ್ಧೆಗಳಲ್ಲಿ ಸೋಲು- ಗೆಲುವು ಸಾಮಾನ್ಯ. ಸ್ಪರ್ಧಾ ಮನೋಭಾವದಿಂದ ಸ್ವೀಕರಿಸುವುದನ್ನು ಮಕ್ಕಳು ಕಲಿಯಬೇಕು. ಚಿತ್ರಕಲೆ ಎಂಬುದು ಒಂದು ಒಳ್ಳೆಯ ಮಾಧ್ಯಮವಾಗಿದ್ದು, ಮಕ್ಕಳು ತಮ್ಮಲಿರುವ ಟ್ಯಾಲೆಂಟ್ ತೋರ್ಪಡಿಸಬಹುದಾಗಿದೆ' ಎಂದು ಪೋಷಕಿ, ರೂಪಾ ಬಾಂದೇಕರ್ ತಿಳಿಸಿದರು.