ಚಿತ್ರಗಳು : ಎತ್ತಿನಹೊಳೆಗೆ ವಿರೋಧ, ಬೆಳ್ತಂಗಡಿ ಬಂದ್
ಮಂಗಳೂರು, ಅಕ್ಟೋಬರ್ 07 : ರಸ್ತೆಗಿಳಿದ ಕಂಬಳದ ಕೋಣಗಳು, ರಸ್ತೆಯಲ್ಲಿ ಕೋಳಿ ಅಂಕ ಆಡಿದ ಜನರು, ಬಸ್ಸಿಗಾಗಿ ಕಾದು ಕಾದು ಸುಸ್ತಾದ ಪ್ರಯಾಣಿಕರು, ಮಂಜುನಾಥ ಸ್ವಾಮಿ ದರ್ಶನ ಮಾಡಲು ಪರದಾಡಿದ ಭಕ್ತರು. ಎತ್ತಿನ ಹೊಳೆ ಯೋಜನೆ ವಿರೋಧಿಸಿ ಬುಧವಾರ ಕರೆ ನೀಡಿದ್ದ ಬೆಳ್ತಂಗಡಿ ಬಂದ್ ವೇಳೆ ಕಂಡು ಬಂದ ದೃಶ್ಯಗಳಿವು.
'ಎತ್ತಿನ ಹೊಳೆ ಯೋಜನೆ ನಿಲ್ಲಿಸಿ ನೇತ್ರಾವತಿ ಉಳಿಸಿ' ಎಂಬ ಕೂಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋರಾಗಿದೆ. ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನಹೊಳೆ ಯೋಜನೆ ವಿರೋಧಿಸಿದ ಬುಧವಾರ ಕರೆ ನೀಡಿದ್ದ ಬೆಳ್ತಂಗಡಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. [ಚಿತ್ರಗಳು : ನೇತ್ರಾವತಿ ಉಳಿಸಲು ಬೃಹತ್ ಪ್ರತಿಭಟನೆ]
ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಧರ್ಮಸ್ಥಳದ ಮಂಜುನಾಥ ಸ್ವಾಮಿ ದರ್ಶನಕ್ಕೆ ಆಗಮಿಸಿದ ಭಕ್ತರು ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡಿದರು. [ಎತ್ತಿನಹೊಳೆ ಯೋಜನೆ ನೀರಿನ ಲಭ್ಯತೆ ಬಗ್ಗೆ ಆತಂಕ ಬೇಡ]
ಬೆಳ್ತಂಗಡಿ ತಾಲೂಕಿನ ವಿವಿಧ ಭಾಗದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು ಬಂದ್ ಸಂಪೂರ್ಣ ಯಶಸ್ವಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾದವು. ನೇತ್ರಾವತಿ ಉಳಿಸಿ, ಎತ್ತಿನ ಹೊಳೆ ಯೋಜನೆಯನ್ನು ನಿಲ್ಲಿಸಿ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದವು.
ಎತ್ತಿನಹೊಳೆ ಯೋಜನೆ ವಿರೋಧಿಸಿ ಬೆಳ್ತಂಗಡಿ ಬಂದ್
'ಎತ್ತಿನ ಹೊಳೆ ಯೋಜನೆ ನಿಲ್ಲಿಸಿ ನೇತ್ರಾವತಿ ಉಳಿಸಿ' ಎಂಬ ಕೂಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋರಾಗಿದೆ. ಎತ್ತಿನಹೊಳೆ ಯೋಜನೆ ವಿರೋಧಿಸಿದ ಬುಧವಾರ ಕರೆ ನೀಡಿದ್ದ ಬೆಳ್ತಂಗಡಿ ತಾಲೂಕು ಬಂದ್ ಸಂಪೂರ್ಣ ಯಶಸ್ವಿಯಾಯಿತು.
ವಿವಿಧ ಸಂಘಟನೆಗಳಿಂದ ಬಂದ್ ಕರೆ
ವಿವಿಧ ಸಂಘಟನೆಗಳು ಒಟ್ಟಾಗಿ ಬೆಳ್ತಂಗಡಿ ಬಂದ್ಗೆ ಕರೆ ನೀಡಿದ್ದವು. ತಾಲೂಕಿನಲ್ಲಿ ಸಾರಿಗೆ ಸಂಚಾರ ಬೆಳಗ್ಗೆ 8 ಗಂಟೆಯಿಂದಲೇ ಸ್ಥಗಿತಗೊಂಡಿತ್ತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ರಸ್ತೆಯಲ್ಲೇ ಕೋಳಿ ಅಂಕ
ತುಳುನಾಡಿನ ಗ್ರಾಮೀಣ ಕ್ರೀಡೆಗಳಲ್ಲಿ ಕೋಳಿ ಅಂಕ ಕೂಡ ಒಂದು. ಬುಧವಾರ ರಸ್ತೆಯಲ್ಲಿ ಬಂದ್ ಮಾಡಿದ ಜನರು ಅಲ್ಲಿಯೇ ಕೋಳಿ ಅಂಕ ಆಡಿ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿದರು.
ಬಸ್ ಸಂಚಾರವಿಲ್ಲದೆ ಪರದಾಡಿದ ಜನರು
ಬೆಳ್ತಂಗಡಿ ತಾಲೂಕು ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದರಿಂದ ಹೊರ ಊರುಗಳಿಂದ ಬಂದ ಜನರು ಬಸ್ ಸಂಪರ್ಕವಿಲ್ಲದೆ ಪರದಾಡಿದರು.
ರಸ್ತೆಗಿಳಿದ ಕಂಬಳದ ಕೋಣಗಳು
ಕಂಬಳದ ಕೋಣಗಳನ್ನು ಸಿಂಗರಿಸಿ ರಸ್ತೆಗೆ ಕರೆತಂದ ಜನರು ರಸ್ತೆಯನ್ನು ಬಂದ್ ಮಾಡುವ ಮೂಲಕ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸಿ ಎಂದು ಪ್ರತಿಭಟನೆ ನಡೆಸಿದರು.
ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಬೆಳ್ತಂಗಡಿ ತಾಲೂಕು ಬಂದ್ ಹಿನ್ನೆಲೆಯಲ್ಲಿ ಹಲವಾರು ಸ್ಥಳಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಟಯರ್ ಸುಟ್ಟು ವಾಹನ ತಡೆದರು
ಬಂದ್ ಹಿನ್ನಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬೆಳಗ್ಗೆಯೇ ಪ್ರಮುಖ ರಸ್ತೆಗಳಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ವಾಹನಗಳು ಸಂಚಾರ ನಡೆಸದಂತೆ ಪ್ರತಿಭಟನಾಕಾರರು ತಡೆದರು.
ಎತ್ತಿನಹೊಳೆ ಯೋಜನೆ ನಿಲ್ಲಿಸಿ
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು ಎತ್ತಿನಹೊಳೆ ಯೋಜನೆ ನಿಲ್ಲಿಸಿ ನೇತ್ರಾವತಿ ನದಿಯನ್ನು ಉಳಿಸಿ ಎಂದು ಘೋಷಣೆಗಳನ್ನು ಕೂಗಿದರು.
ಧರ್ಮಸ್ಥಳ ಖಾಲಿ-ಖಾಲಿ
ಬೆಳ್ತಂಗಡಿ ಬಂದ್ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಧರ್ಮಸ್ಥಳ ಖಾಲಿಯಾಗಿತ್ತು. ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭಕ್ತರು ಆಗಮಿಸಲು ಸರಿಯಾದ ಸಾರಿಗೆ ಸಂಪರ್ಕ ವ್ಯವಸ್ಥೆ ಇರಲಿಲ್ಲ.
ಅಂಗಡಿ-ಮುಂಗಟ್ಟುಗಳು ಬಂದ್
ಬೆಳ್ತಂಗಡಿ ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿತ್ತು.
ಏನಿದು ಎತ್ತಿನ ಹೊಳೆ ಯೋಜನೆ?
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ 7 ಜಿಲ್ಲೆಗಳ 28 ತಾಲ್ಲೂಕುಗಳ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸರ್ಕಾರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮದ ಮೂಲಕ ಅನುಷ್ಟಾನಗೊಳಿಸುತ್ತಿದೆ.
24 ಟಿಎಂಸಿ ನೀರು
ಈ ಯೋಜನೆಯಿಂದ 24.01 ಟಿಎಂಸಿ ನೀರು ದೊರೆಯಲಿದೆ. ನೀರಿನ ಲಭ್ಯತೆಯ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ವಿವಿಧ ಮೂಲಗಳಿಂದ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿಸಿ ಸರ್ಕಾರ ನೀರಿನ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಂಡಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.