ಮಂಗಳೂರು ನಗರಕ್ಕೆ ಇಂದಾದರೂ ನೀರು ಬರುತ್ತಾ?
ಮಂಗಳೂರು, ಆಗಸ್ಟ್ 5 : ಮಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳ ಜನರು ಮೂರನೇ ದಿನವಾದ ಬುಧವಾರವೂ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರಕ್ಕೆ ನೀರು ಪೂರೈಕೆ ಮಾಡುವ ಪೈಪ್ ಎರಡು ಕಡೆ ಒಡೆದು ಹೋಗಿರುವುದರಿಂದ ಕಳೆದ ಮೂರು ದಿನಗಳಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ತುಂಬೆ ವೆಂಟೆಡ್ ಡ್ಯಾಮ್ನಿಂದ ಮಂಗಳೂರು ನಗರಕ್ಕೆ ನೀರು ಪೂರೈಸುವ 18 ಎಂಜಿಡಿ ನೀರಿನ ಪೈಪ್ ಕಣ್ಣೂರು ಬಳಿ ಎರಡು ಕಡೆಗಳಲ್ಲಿ ಒಡೆದ ಪರಿಣಾಮ ನೀರು ಪೂರೈಕೆ ಸ್ಥಗಿತಗೊಂಡಿದೆ. ಕೊಳವೆ ದುರಸ್ತಿ ಮಾಡುವ ಒಂದು ಹಂತದ ಪ್ರಯತ್ನ ಯಶಸ್ವಿಯಾಗಿದೆ. [ಕೋಲಾರದಲ್ಲಿ ಹಸಿರು ಕ್ರಾಂತಿಗೆ ಕೈ ಜೋಡಿಸಿದ ಯುವಕರು]
ಬುಧವಾರ ಪೈಪ್ಅನ್ನು ದುರಸ್ತಿ ಮಾಡಿ ನೀರು ಪೂರೈಸಲು ಪ್ರಯತ್ನಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಕೆಟ್ಟು ಹೋದ ಕೊಳವೆಯು ಮಣ್ಣಿನ ಆಳದಲ್ಲಿರುವುದರಿಂದ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ.
ಕಟ್ಟಡ ತ್ಯಾಜ್ಯದಿಂದ ಒಡೆದ ಪೈಪ್ : ಕಟ್ಟಡ ತ್ಯಾಜ್ಯ, ಮಣ್ಣನ್ನು ಖಾಸಗಿ ವ್ಯಕ್ತಿಗಳು ಪೈಪ್ ಮೇಲೆ ಹಾಕಿದ ಪರಿಣಾಮ ಒತ್ತಡದಿಂದಾಗಿ ಪೈಪ್ ಒಡೆದು ಹೋಗಿದೆ. ಶನಿವಾರ ಪೈಪ್ ಒಡೆದು ಹೋಗಿದ್ದರೂ ಮೇಲ್ಭಾಗದಲ್ಲಿ ಸುಮಾರು 10 ಅಡಿಗಳಷ್ಟು ಮಣ್ಣು ಹಾಕಿರುವ ಕಾರಣ ಒಡೆದು ಹೋದ ನಿರ್ದಿಷ್ಟ ಭಾಗವನ್ನು ಹುಡುಕುವುದು ಕಷ್ಟವಾಗಿತ್ತು. [ಮಂಗಳೂರು : 1 ಕೋಟಿ ವೆಚ್ಚದಲ್ಲಿ ಗುಜ್ಜರಕೆರೆ ಅಭಿವೃದ್ಧಿ]
ಒಡೆದ ಭಾಗವನ್ನು ಪತ್ತೆ ಹಚ್ಚಿ ದುರಸ್ತಿಗೊಳಿಸುವಾಗ ಮತ್ತೊಂದು ಕಡೆ ಒಡೆದುಹೋಗಿರುವುದು ತಿಳಿದುಬಂದಿದೆ. ಒಡೆದು ಹೋದ ಜಾಗದಲ್ಲಿ ಮಣ್ಣು ತೆಗೆದು, ಸಂಗ್ರಹವಾಗಿದ್ದ ನೀರನ್ನು 4 ಪಂಪ್ ಸೆಟ್ ಬಳಸಿ ಖಾಲಿ ಮಾಡಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.
ಕ್ರಿಮಿನಲ್ ಪ್ರಕರಣ : ಖಾಸಗಿ ವ್ಯಕ್ತಿಗಳ ಬೇಜವಾಬ್ದಾರಿಯಿಂದಾಗಿ ಇಂತಹ ಸಮಸ್ಯೆ ಉಂಟಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪಾಲಿಕೆ ಅಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದ್ದಾರೆ.
ನೀರಿಗಾಗಿ ಪರದಾಟ : ಮೂರು ದಿನಗಳಿಂದ ನೀರಿಲ್ಲದೆ ನಗರದ ಜನರು ಪರದಾಡುತ್ತಿದ್ದಾರೆ. ಮಹಾನಗರ ಪಾಲಿಕೆ ಕೆಲವು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಿದರೂ ಅದು ಎಲ್ಲರಿಗೂ ತಲುಪಲಿಲ್ಲ. ಕೆಲವರು ಮಳೆ ನೀರು ಸಂಗ್ರಹಿಸಿಕೊಳ್ಳುವ ಪ್ರಯತ್ನ ನಡೆಸಿದರು.