ಕುಡ್ಲದ ನವೀನ್ ಪಡೀಲ್ ಗೆ ಆಸ್ಟ್ರೇಲಿಯದಲ್ಲೂ ಅಭಿಮಾನಿಗಳು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ನಿಂದಾದಿ ಇಂದು ಅವರ ಹೆಸರು ಬಹುಪಾಲು ಕನ್ನಡಿಗರಿಗೆ ಪರಿಚಿತ. ಇತ್ತೀಚೆಗೆ ಆಸ್ಟ್ರೇಲಿಯಕ್ಕೆ ತೆರಳಿದ್ದ ಅವರು ಅಲ್ಲಿ ತಮಗೆ ಸಿಕ್ಕ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಮಂಗಳೂರು, ಮೇ 18: ಕೋಳಿ ಗೂಡಿನಂಥ ಮನೆಯಲ್ಲಿ ವಾಸ. ಬಡತನದಿಂದ ಎಲ್ಲೋ ಬೆಳೆಯುತ್ತಿರುವ ಪರಿಚಯವೇ ಇಲ್ಲದ ಅಣ್ಣ, ಅಪರೂಪಕ್ಕೆ ಬರುವ ಅಪ್ಪ. ಮನೆ ಕೆಲಸ ಮಾಡಿ ಸಾಕುವ ತಾಯಿ ಇಂಥ ಸಂಕಷ್ಟ ಪರಿಸ್ಥಿತಿಯಿಂದ ಬಂದರೂ, ಇಂದು ತುಳು ನಾಡಿನ ಸ್ಟಾರ್ ಕಲಾವಿದನಾಗಿ ಬೆಳದ ನವೀನ್ ಡಿ. ಪಡೀಲ್ ಬದುಕೇ ರೋಚಕ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ನಿಂದಾದಿ ಇಂದು ಅವರ ಹೆಸರು ಬಹುಪಾಲು ಕನ್ನಡಿಗರಿಗೆ ಪರಿಚಿತ. ಇತ್ತೀಚೆಗೆ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದ ಮಂಗಳೂರಿನ ಕುಡ್ಲದ ನವೀನ ಡಿ ಪಡೀಲ್ ಅವರಿಗೆ ವಿದೇಶದಲ್ಲಿ ಸಿಕ್ಕ ಅಭೂತಪೂರ್ವ ಅಭಿಮಾನ, ಪ್ರೀತಿ ಒಮ್ಮೆ ಅವರಿಗೇ ಅಚ್ಚರಿಮೂಡಿಸಿತ್ತು.[ಅಂಧರ ಭವಿಷ್ಯ ಕಟ್ಟುತ್ತಿರುವ 'ಅಮೃತ ಬಿಂದು']
ಒಂದು ಕ್ಷಣವೂ ಪುರುಸೊತ್ತಿಲ್ಲದ ಸ್ಥಿತಿ ಪಡೀಲ್ ಅವರದ್ದಾಗಿತ್ತು. ಆದರೆ ಅಲ್ಲಿನವರ ಪ್ರೀತಿಗೆ ಸಂಪೂರ್ಣ ಕರಗಿ ಹೋಗಿರುವ ಪಡೀಲ್ ಅವರು ಸಾಧ್ಯವಾದಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮಾಡದಿರಲು ಪಣ ತೊಟ್ಟಿದ್ದಾರೆ.
'ನಾನು ಇಂಥದ್ದೊಂದು ಬೆಳವಣಿಗೆಯನ್ನು ನಿರೀಕ್ಷೆ ಮಾಡಿರಲೇ ಇಲ್ಲ. ಏನೋ ಒಂದೆರಡು ಸಂಘಟನೆಯವರು ಕರೆದಿದ್ದಾರೆ, ಅವರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬರುತ್ತೇನೆ ಎಂದು ಆಸ್ಟ್ರೇಲಿಯಾದ ವಿಮಾನ ಹತ್ತಿದ್ದೆ. ಆದರೆ ನನಗೆ ಅಲ್ಲೋ ಇಷ್ಟು ಅಭಿಮಾನಿಗಳಿದ್ದಾರೆ ಎಂಬುದು ಈಗಷ್ಟೇ ತಿಳಿದುಬಂತು. ನಾನು ಅವರ ಪ್ರೀತಿ , ಅಭಿಮಾನಕ್ಕೆ ಉತ್ತರಿಸಲಾಗದೆ ಮೂಕನಾಗಿಬಿಟ್ಟೆ' ಎನ್ನುತ್ತಾರೆ ನವೀನ್.
ಇನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ತುಳುವರು, ಕನ್ನಡಿಗರು ನೆರೆದಿದ್ದರು ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ಪಡೀಲ್ ಅವರ ಅಭಿನಯ, ಪಾತ್ರಗಳು ಎಲ್ಲರಿಗೂ ಚಿರಪರಿಚಿತ. ಆದರೆ ವೇದಿಕೆಯಲ್ಲಿ ಅವರು ಗಿಟ್ಟಿಸಿಕೊಳ್ಳುವ ಚಪ್ಪಾಳೆ ಸದ್ದಿನ ಹಿಂದೆ ಅವರು ಪಟ್ಟ ಕಷ್ಟ - ನಷ್ಟಗಳು ಅಡಗಿ ಕುಳಿತಿವೆ. ಮಲೇರಿಯಾ ಥರಗುಟ್ಟುವ ಜ್ವರದ ನಡುವೆಯೇ ವೇದಿಕೆಗೆ ಬಂದು ಅಭಿನಯಿಸಿದ, ಸುಡುತ್ತಿರುವ ಜ್ವರದ ನಡುವೆ ಹಣೆಗೆ ಐಸ್ ಹಾಕಿ ವೇದಿಕೆಗೆ ಬಂದು ನಗಿಸಿದ ಕುಡ್ಲದ ಮಗ ನವೀನ್ ಪಡೀಲ್.
ಆಸ್ಟ್ರೆಲಿಯಾದ ಯುನೈಟೆಡ್ ಕನ್ನಡ ಸಂಘ ಮತ್ತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಮೆಲ್ಬರ್ನ್ನ ಕಿಂಗ್ಸ್ಟನ್ ಆರ್ಟ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು, ಈ ಸಮ್ಮೇಳನದಲ್ಲಿ ಮಂಡ್ಯ ರಮೇಶ್ ಮತ್ತು ನವೀನ್ ಡಿ ಪಡೀಲ್ ಅವರಿಂದ ನಗೆ ಹೊನಲು ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.