ನಳೀನ್ ಕುಮಾರ್ ಕಟೀಲ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?
ಮಂಗಳೂರು, ಮಾರ್ಚ್ 22 : ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆಯೇ?. ಹೌದು, ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯ ರೇಸ್ನಲ್ಲಿ ಕೇಳಿಬರುತ್ತಿರುವ ನಾಯಕರ ಹೆಸರಿನಲ್ಲಿ ದಕ್ಷಿಣ ಕನ್ನಡದ ಸಂಸದ ನಳಿನ್ಕುಮಾರ್ ಕಟೀಲ್ ಅವರ ಹೆಸರೂ ಇದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಅಧಿಕಾರಾವಧಿ ಮಾರ್ಚ್ 23ರ ಬುಧವಾರ ಮುಕ್ತಾಯಗೊಳ್ಳುತ್ತಿದೆ. ಇದರ ನಡುವೆಯೇ ಮುಂದಿನ ಅಧ್ಯಕ್ಷರು ಯಾರು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿದೆ. [ಕರ್ನಾಟಕ ಬಿಜೆಪಿಗೆ ನೂತನ ಸಾರಥಿ ಯಾರು?]
ಯಡಿಯೂರಪ್ಪ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವುದಕ್ಕೆ ಪಕ್ಷದಲ್ಲೇ ಕೆಲವು ನಾಯಕರ ವಿರೋಧವಿದೆ ಎನ್ನುವುದು ಪಕ್ಷದ ಮೂಲಗಳ ಮಾಹಿತಿ. ಪ್ರಹ್ಲಾದ್ ಜೋಶಿ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸುವುದು ಅಥವ ಅಜಾತ ಶತೃ ಎನಿಸುವ ಮತ್ತೊಬ್ಬ ನಾಯಕರನ್ನು ಆಯ್ಕೆ ಮಾಡುವುದು ಬಿಜೆಪಿ ನಾಯಕರ ಮುಂದಿರುವ ಆಯ್ಕೆ. [ನಳೀನ್ ಕುಮಾರ್ ಕಟೀಲ್ ದತ್ತು ಪಡೆದ ಬಳ್ಪ ಗ್ರಾಮದ ಪರಿಚಯ]
ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ಆರ್.ಅಶೋಕ್ ಅವರ ಹೆಸರುಗಳ ಜೊತೆಗೆ ನಳೀನ್ ಕುಮಾರ್ ಕಟೀಲ್ ಅವರ ಹೆಸರು ಕೇಳಿಬರುತ್ತಿದೆ. ಕಟೀಲ್ ಅವರಿಗೆ ಅಧ್ಯಕ್ಷ ಪಟ್ಟ ಸಿಗಲಿದೆಯೇ? ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ....[ಪಂಚ ರಾಜ್ಯಗಳ ಚುನಾವಣೆ, ರಾಜ್ಯಾಧ್ಯಕ್ಷರ ಆಯ್ಕೆ ಸದ್ಯಕ್ಕಿಲ್ಲ!]
ನಳೀನ್ ಕುಮಾರ್ ಹೆಸರು ಕೇಳಿಬರುತ್ತಿದೆ
ಮಾರ್ಚ್ 23ರಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದು, ಮುಂದಿನ ಅಧ್ಯಕ್ಷ ಯಾರು? ಎಂಬ ಪ್ರಶ್ನೆ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನ ಜೊತೆ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಅವರ ಹೆಸರು ಕೇಳಿಬರುತ್ತಿದೆ.
ಕೇರಳದ ಉಸ್ತುವಾರಿ ವಹಿಸಲಾಗಿದೆ
ನಳೀನ್ ಕುಮಾರ್ ಕಟೀಲ್ ಅವರು ವರಿಷ್ಠರಿಗೆ ಪ್ರಿಯರಾಗಿದ್ದಾರೆ ಎಂಬುದು ಅವರು ಕೇರಳ ವಸ್ತುವಾರಿಯಾಗಿ ನೇಮಕವಾದಾಗಲೇ ಸಾಬೀತಾಗಿದೆ. ಕೇರಳ ರಾಜ್ಯ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನು ನಳೀನ್ ಕುಮಾರ್ ಕಟೀಲ್ ಅವರಿಗೆ ವಹಿಸಲಾಗಿದೆ.
ಅಭ್ಯರ್ಥಿಗಳು ಗೆದ್ದರೆ ಕಟೀಲ್ಗೆ ಕ್ರೆಡಿಟ್
ಕೇರಳದಲ್ಲಿ ಬಿಜೆಪಿ ಪ್ರಭಾವಿತವಾಗುತ್ತಿದ್ದರೂ ಒಬ್ಬರು ಶಾಸಕರಿಲ್ಲ. ಈಗ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಒಂದೆರಡು ಸ್ಥಾನಗಳಲ್ಲಿ ಬಿಜೆಪಿ ಗೆದ್ದರೂ ಅದರ ಕ್ರೆಡಿಟ್ ನಳೀನ್ ಕುಮಾರ್ ಕಟೀಲ್ ಅವರಿಗೆ ಹೋಗುತ್ತದೆ. ಇಂತಹದ್ದೊಂದು ಜಾದೂ ನಡೆದರೆ ಕಟೀಲ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ.
ರಾಜ್ಯದಲ್ಲಿ ಸಿಗಲಿದೆ ಹುದ್ದೆ?
ಭಾಷೆಯ ಕಾರಣದಿಂದಾಗಿ ನಳೀನ್ ಕುಮಾರ್ ಕಟೀಲ್ ಅವರು ರಾಷ್ಟ್ರ ಮಟ್ಟದ ಹುದ್ದೆಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಅಲ್ಲಿ ಕಳೆದುಕೊಳ್ಳುವಂತಹದ್ದನ್ನು ರಾಜ್ಯದಲ್ಲಿ ಪಡೆಯುವ ಸಾಧ್ಯತೆಯ ಚರ್ಚೆಗಳು ಈಗ ಬಿಜೆಪಿ ವಲಯದಲ್ಲಿ ನಡೆಯುತ್ತಿವೆ.
2018ರ ಚುನಾವಣೆ ನಾಯಕತ್ವ
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಆಡಳಿತ ವಿರೋಧಿ ಅಲೆಯ ಕಾರಣದಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 2018ರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದೆ. ಆಗಲೂ ಆಡಳಿತ ವಿರೋಧಿ ಅಲೆಯೇ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ಬಿಜೆಪಿ ಅಧ್ಯಕ್ಷರಾಗುವವರ ಮೇಲಿರುತ್ತದೆ. ಇದನ್ನು ನಳೀನ್ ನಿಭಾಯಿಸಬಲ್ಲರೇ? ಎಂಬ ಪ್ರಶ್ನೆಯೂ ಇದೆ.