'ಹಿಂದೂಗಳು ಆತ್ಮ ರಕ್ಷಣೆಗೆ ಶಸ್ತ್ರ ಹಿಡಿಯಬೇಕಾದೀತು'
ಮಂಗಳೂರು, ಅಕ್ಟೋಬರ್ 27 : 'ಐಎಸ್ಐಎಸ್ ಉಗ್ರರಿಂದ ಪ್ರಭಾವಿತರಾಗಿ ಕೆಲವರು ದಾರಿ ತಪ್ಪುತ್ತಿದ್ದು, ಅಂಥವರನ್ನು ಕರೆದು ಮುಸ್ಲಿಂ ಧಾರ್ಮಿಕ ಮುಖಂಡರು ಬುದ್ಧಿ ಹೇಳಬೇಕು. ಇಲ್ಲವಾದಲ್ಲಿ ಹಿಂದೂಗಳು ಆತ್ಮ ರಕ್ಷಣೆಗೆ ಶಸ್ತ್ರ ಹಿಡಿದು ಓಡಾಡುವುದು ಅನಿವಾರ್ಯವಾದೀತು' ಎಂದು ಸೂರ್ಯನಾರಾಯಣ ಹೇಳಿದ್ದಾರೆ.
ಭಜರಂಗದಳದ ಕರ್ನಾಟಕ, ಆಂಧ್ರ, ತೆಲಂಗಾಣ ಪ್ರದೇಶದ ಕ್ಷೇತ್ರೀಯ ಸಂಚಾಲಕ ಸೂರ್ಯ ನಾರಾಯಣ ಅವರು ಸೋಮವಾರ ಮೂಡಬಿದಿರೆಯಲ್ಲಿ ಕೊಲೆಯಾದ ಪ್ರಶಾಂತ್ ಪೂಜಾರಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. [ಪ್ರಶಾಂತ್ ಪೂಜಾರಿ ಹತ್ಯೆಗೆ ಕಾರಣವೇನು?]
'ಪ್ರಶಾಂತ್ ಪೂಜಾರಿ ಕೊಲೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ ಆರೋಪಿಗಳು ಮುಸ್ಲಿಂಮರು. ಇಂತಹ ಸಮಯದಲ್ಲಿ ಮುಸ್ಲಿಂ ಮುಖಂಡರು ಮೌನವಹಿಸಿರುವುದೇಕೆ?, ಧಾರ್ಮಿಕ ಮುಖಂಡರು ಪರೋಕ್ಷವಾಗಿ ಇಂತಹ ಘಟನೆಗಳನ್ನು ಬೆಂಬಲಿಸುತ್ತಿದ್ದಾರೆಯೇ?' ಎಂದು ಅವರು ಪ್ರಶ್ನಿಸಿದರು. [ಮೂಡಬಿದಿರೆ : ಪ್ರಶಾಂತ್ ಪೂಜಾರಿ ಹತ್ಯೆ]
ತುಷ್ಟೀಕರಣ ನೀತಿ ಕಾರಣ : 'ಪ್ರಶಾಂತ್ ಪೂಜಾರಿ ಓರ್ವ ಸಾಮಾನ್ಯ ಕಾರ್ಯಕರ್ತ. ಅವರು ಹಿಂದೂ ಎಂಬ ಕಾರಣಕ್ಕಾಗಿ ಮತ್ತು ಕೇಸರಿ ಪಂಚೆ ಹಾಗೂ ಶಾಲು ಧರಿಸಿದ್ದಕ್ಕಾಗಿ ಕೊಲೆ ಸಂಭವಿಸಿದೆ. ಕಾಂಗ್ರೆಸ್ ಸರ್ಕಾರದ ಅತಿಯಾದ ಮುಸ್ಲಿಂ ತುಷ್ಟೀಕರಣ ನೀತಿಯೇ ಇದಕ್ಕೆ ಕಾರಣ' ಎಂದು ಸೂರ್ಯನಾರಾಯಣ ಅವರು ದೂರಿದರು. [ಪ್ರಶಾಂತ್ ಹತ್ಯೆ : ನಾಲ್ವರ ಬಂಧನ]
25 ಲಕ್ಷ ಪರಿಹಾರಕ್ಕೆ ಒತ್ತಾಯ : ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಬಿಜೆಪಿ, ಸ್ವಾಮೀಜಿಗಳು, ಹಿಂದೂ ಬಾಂಧವರು ಸಾಂತ್ವನ ಹೇಳಿ ಆರ್ಥಿಕ ನೆರವು ಒದಗಿಸಿದ್ದಾರೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ಪ್ರಶಾಂತ್ ಪೂಜಾರಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.