ಕರ್ನಾಟಕ ಕರಾವಳಿಯಲ್ಲಿ ಶೀಘ್ರವೇ ಹೊಸ ಚಾನಲ್
ಮಂಗಳೂರು, ಡಿಸೆಂಬರ್ 17 : ಕರಾವಳಿ ಕರ್ನಾಟಕದಲ್ಲಿ 'ಮುಕ್ತ ಟಿವಿ' ಎಂಬ ಹೊಸ ವಾಹಿನಿ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. 2017ರ ಜನವರಿ 29ರಂದು ಮಲ್ಪೆ ಕಡಲ ತೀರದಲ್ಲಿ ಸುದ್ದಿ ವಾಹಿನಿಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಕಳೆದ ಎರಡು ತಿಂಗಳಿನಿಂದ ಪ್ರಾಯೋಗಿಕ ಪ್ರಸಾರವನ್ನು ನಡೆಸುತ್ತಿರುವ ಈ ವಾಹಿನಿಯು ಜನವರಿ 29ರಂದು ಲೋಕಾರ್ಪಣೆಗೊಂಡು ಅವಳಿ ಜಿಲ್ಲೆಯ ಮೂಲೆ- ಮೂಲೆಗಳನ್ನು ತಲುಪಲಿದೆ.
ಮುಕ್ತ ಟೆಲಿವಿಷನ್ ಸಂಸ್ಥೆಯ ಆಡಳಿತ ನಿರ್ದೇಶಕ ವಿವೇಕ್ ಸುವರ್ಣ, ಮುಕ್ತ ವಾಹಿನಿ ಸುದ್ದಿ ಮತ್ತು ಮನರಂಜನೆಗೆ ಸಮಾನ ಅವಕಾಶವನ್ನು ನೀಡುವ ಮಾಧ್ಯಮವಾಗಿದೆ. ಕರಾವಳಿ ಕರ್ನಾಟಕದ ನೆಲ, ಜಲ, ಭಾಷೆ, ಸಂಸ್ಕೃತಿ, ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಜೊತೆಗೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಪೂರಕವಾಗಿ ಕಾರ್ಯಾಚರಿಸಲಿದ್ದೇವೆ ಎಂದು ವಿವರಿಸಿದರು.[ವೇಷ ಕಟ್ಟಿ ಕುಣಿಯಲಿದ್ದಾರೆ ಮಂಗಳೂರು ಸುದ್ದಿಮನೆ ಶೂರರು]
ಕಾರವಾರದಿಂದ ಕಾಸರಗೋಡಿನವರೆಗೆ ನಮ್ಮ ಸಂಪರ್ಕ ಜಾಲವನ್ನು ವಿಸ್ತರಿಸುವ ಯೋಜನೆ ಇದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಕ್ಕಾಲು ಭಾಗದ ವೀಕ್ಷಕರನ್ನು ಮುಕ್ತ ಟಿವಿ ತಲುಪಲಿದೆ ಎಂದು ವಿವೇಕ್ ಸುವರ್ಣ ಮಾಹಿತಿ ನೀಡಿದರು.
ಇದೇ ವೇಳೆ ತಮ್ಮ ಹೊಸ ಸಾಹಸದ ಬಗ್ಗೆ ಮಾತನಾಡಿದ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಅಶ್ವತ್ ಕಾಂಚನ್, ಮುಕ್ತ ವಾಹಿನಿ ಲೋಕಾರ್ಪಣೆಗೊಳ್ಳಲಿರುವ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ತುಳು ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ ಎಂದರು.[ಡಿಸೆಂಬರ್ 23ರಿಂದ ಕರಾವಳಿ ಉತ್ಸವದ ಸಡಗರ]
ಚಲನಚಿತ್ರ ಲೋಕದ ದಿಗ್ಗಜರ ತೀರ್ಪು ಮತ್ತು ಕಲಾಭಿಮಾನಿಗಳ ಅಭಿಪ್ರಾಯ ಸಂಗ್ರಹದ ಮೂಲಕ ಈ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ತಯಾರಿಸಿದ್ದೇವೆ. ಉತ್ತಮ ನಟ, ನಟಿ ಮತ್ತು ಉತ್ತಮ ಹಾಸ್ಯನಟರ ಆಯ್ಕೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿ ಮಾಡಲಾಗುವುದು ಎಂದು ವಿವರಿಸಿದರು.
ಜೊತೆಗೆ "ಮುಕ್ತ ಫಿಲ್ಮ್ ಅವಾರ್ಡ್" ಪುರಸ್ಕಾರವನ್ನು ಪ್ರತಿವರ್ಷವೂ ಆಯೋಜಿಸುವ ಚಿಂತನೆಯನ್ನು ಸಂಸ್ಥೆಯು ನಡೆಸಿದ್ದು, ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನುರಿತ ಆಯೋಜಕರ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.