ಕಾಂಗ್ರೆಸ್ ನಾಯಕರ ಮೇಲೆ ಸಿಟ್ಟಿಗೆದ್ದ ನಳಿನ್ ಕುಮಾರ್ ಕಟೀಲ್
ಮಂಗಳೂರು,ಮಾರ್ಚ್,೨೮: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದರೂ ಕಾಂಗ್ರೆಸ್ ನಾಯಕರು ವಿರೋಧಾಭಾಸದ ಹೇಳಿಕೆ ನೀಡಿ ಬಹುಸಂಖ್ಯಾತರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ಧಾರ್ಮಿಕ ನಂಬಿಕೆಗೆ ಒತ್ತು ನೀಡಬೇಕಾದ ಸರ್ಕಾರವೇ ಕಾನೂನು ಉಲ್ಲಂಘನಾ ಅಧಿಕಾರಿಗಳ ಬೆಂಬಲಕ್ಕೆ ನಿಂತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ದೇವಾಲಯದ ಅಧಿಕಾರಿಗಳು ಹಿರಿಯ ಅಧಿಕಾರಿಗಳನ್ನು ಓಲೈಸಲು ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನೇ ಗಾಳಿಗೆ ತೂರಿ ಆಮಂತ್ರಣ ಪತ್ರ ಮುದ್ರಿಸಿದ್ದಾರೆ. ಹಿಂದೂ ದೇವಾಲಯಗಳ ಆಡಳಿತದಲ್ಲಿ ಅನ್ಯ ಧರ್ಮದವರಿಗೆ ಅವಕಾಶವಿಲ್ಲ ಎಂದು ನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇದರಲ್ಲಿ ಶಿಷ್ಟಾಚಾರದ ಪ್ರಶ್ನೆಯೇ ಬರುವುದಿಲ್ಲ, ಸರ್ಕಾರ ರೂಪಿಸಿದ ಕಾನೂನು ಪಾಲಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದ್ದಾರೆ.[ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ವಿವಾದ ಎಲ್ಲಿಗೆ ಬಂತು?]
ಪುತ್ತೂರು ದೇವಸ್ಥಾನದ ಆಮಂತ್ರಣದಲ್ಲಿ ಅಧಿಕಾರಿಗಳೇ ಕಾನೂನು ನಿಯಮಗಳನ್ನು ಪಾಲಿಸಿಲ್ಲ. ರಾಜ್ಯ ಸರ್ಕಾರ ಕೂಡಾ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕರಣದಲ್ಲಿ ತಿಳಿಸಿದ್ದಾರೆ.[ಜಾತ್ರೋತ್ಸವಕ್ಕೂ ಮುನ್ನ ಪುತ್ತೂರಿನಲ್ಲಿ ಎದ್ದ ಚಪ್ಪರ ವಿವಾದ]
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ರಾಜಕೀಯ ಪಕ್ಷದ ಏಜೆಂಟ್ ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸಚಿವರನ್ನು ಮೆಚ್ಚಿಸಲು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಸಹಿಷ್ಣುತೆಯ ವಿಚಾರವನ್ನು ಅಧಿಕಾರಿಗಳು ಕಲಿಸಬೇಕಾದ ಅವಶ್ಯಕತೆಯಿಲ್ಲ.
ಹಿಂದೂ ಪರ ಸಂಘಟನೆಯ ನಾಯಕರು ಆಮಂತ್ರಣ ಪತ್ರಿಕೆಯಲ್ಲಿ ಸರ್ಕಾರದ ನಿಯಮ ಪಾಲಿಸಬೇಕು ಎಂದಷ್ಟೇ ಆಗ್ರಹಿಸಿದ್ದಾರೆ. ಆದರೆ ಸರ್ಕಾರ ಮತ್ತು ಅಧಿಕಾರಿಗಳು ತಮ್ಮ ನಿಲುವು ಸರಿ ಎಂದು ವಾದಿಸಿದ್ದು ಪರಿಸ್ಥಿತಿ ಉಲ್ಬಣವಾಗಲು ಕಾರಣವಾಗಿದೆ.[ಮುಸ್ಲಿಂ ಡಿಸಿ ಹೆಸರು ಮತ್ತು ಪುತ್ತೂರು ದೇವಾಲಯದ ವಿವಾದ]
ಭಕ್ತರು ಪ್ರತಿಭಟನೆಯ ಹಂತಕ್ಕೆ ಇಳಿಯಲು ಸರ್ಕಾರವೇ ನೇರ ಹೊಣೆ. ಸರ್ಕಾರ ಆಗಿರುವ ಪ್ರಮಾದವನ್ನು ತಕ್ಷಣವೇ ಸರಿಪಡಿಸಿ ಹಿಂದೂಗಳ ಭಾವನೆ ಗೌರವಿಸಬೇಕು ಎಂದು ನಳಿನ್ ಕುಮಾರ್ ಆಗ್ರಹಿಸಿದ್ದಾರೆ.