ಉಳ್ಳಾಲ ನಗರಸಭಾ ಉಪಚುನಾವಣೆ: ಮತದಾರರ ಹೆಸರುಗಳು ಮಾಯ
ಮಂಗಳೂರು, ಫೆಬ್ರವರಿ. 10 : ಉಳ್ಳಾಲ ನಗರಸಭೆಯ 24 ಮತ್ತು 26ನೇ ವಾರ್ಡ್ ಗಳಿಗೆ ಫೆಬ್ರವರಿ 12ರಂದು ಉಪಚುನಾವಣೆಗೆ ನಾಮಪತ್ರಗಳ ಪರಿಷ್ಕರಣೆಯ ನಂತರ ಗುರವಾರದಂದು ಮತದಾರರ ಪಟ್ಟಿಯಲ್ಲಿನ ಸುಮಾರು 150ಕ್ಕೂ ಹೆಚ್ಚು ಮತದಾರರ ಹೆಸರುಗಳು ಮಾಯವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಿಜೆಪಿ ಪಕ್ಕಾ ಮತಗಳೆಂದು ತಿಳಿದು ಉದ್ದೇಶ ಪೂರ್ವಕವಾಗಿ 24 ಮತ್ತು 26ನೇ ವಾರ್ಡಿನ ನೂರೈವತ್ತಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಿತ್ತು ಹಾಕಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ..[ಉಳ್ಳಾಲ ಪೌರಾಯುಕ್ತರೇ ಏನಿದು ಕಚೇರಿಯಲ್ಲೇ ಬರ್ತ್ ಡೇ ಪಾರ್ಟಿ!]
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕಿತ್ತು ಹಾಕಿರುವುದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕತರು ಕಂದಾಯ ಅಧಿಕಾರಿ ರಾಮಯ್ಯಗೌಡರ ಕಚೇರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಹಿರಿಯ ಚುನಾವಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಆಗ್ರಹಿಸಿ ಅವರನ್ನು ಕಚೇರಿಯಲ್ಲೇ ದಿಗ್ಬಂದನಕ್ಕೆ ಒಳಪಡಿಸಿದ್ದಾರೆ.
ಅಭ್ಯರ್ಥಿಯ ಸೂಚಕ ಹೆಸರೇ ಡಿಲೀಟ್ : 26ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಚಂದ್ರಹಾಸ್ ಪಂಡಿತ್ ಹೌಸ್ ಅವರ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಹೆಸರು ಸೂಚಿಸಿದ ಮಂಜುಳ ಎಂಬವರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ನಾಮಪತ್ರಗಳ ಪರಿಷ್ಕರಣೆಯ ನಂತರವೂ ಸೂಚಕರ ಹೆಸರನ್ನು ಯಾವ ಮಾನದಂಡದಡಿಯಲ್ಲಿ ಅಳಿಸಲು ಸಾಧ್ಯ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅವರು ಕಂದಾಯಾಧಿಕಾರಿಯಲ್ಲಿ ಪ್ರಶ್ನಿಸಿದ್ದಾರೆ.
ಸಂತೋಷ್ ಬೋಳಿಯಾರ್,ಡಾ.ಕೆ.ಎ ಮುನೀರ್ ಬಾವಾ,ಮೋಹನ್ ರಾಜ್,ಚಂದ್ರಹಾಸ್ ಉಳ್ಳಾಲ್ ಮತ್ತಿತರರು ಲೋಪವೆಸಗಿದ ಕಂದಾಯಧಿಕಾರಿ ರಾಮಯ್ಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.