ಮಂಗ್ಳೂರು: ಬಸ್ ಚಾಲಕನ ಕಿಸೆಯಲ್ಲೇ ಮೊಬೈಲ್ ಸ್ಫೋಟ!
ಮಂಗಳೂರು, ಮಾರ್ಚ್. 14 : ಬಸ್ ಚಲಾಯುಸುತ್ತಿದ್ದ ಚಾಲಕನ ಶರ್ಟ್ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ನಡೆದಿದೆ.
ಮಡಂತ್ಯಾರ್ ನಿಂದ ಉಪ್ಪಿನಂಗಡಿಗೆ ಹೋಗುತ್ತಿದ್ದ ಶಿವಕೃಪ ಎಂಬ ಖಾಸಗಿ ಬಸ್ವೊಂದರಲ್ಲಿ ಈ ಅವಘಡ ಸಂಭವಿಸಿದೆ. ಮಂಗಳವಾರ ಬೆಳಗಿನ ಜಾವ ಪ್ರಯಾಣಿಕರಿಂದ ತುಂಬಿದ್ದ ಬಸ್ಸನ್ನು ಜಾಗರೂಕತೆಯಿಂದ ಚಲಾಯಿಸುತ್ತಿದ್ದ ಈ ಸಂದರ್ಭದಲ್ಲಿ ಚಾಲಕನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.
ಇದರಿಂದ ಚಾಲಕ ಮಾತ್ರವಲ್ಲದೇ ಅವರ ಪಕ್ಕದಲ್ಲಿದ್ದ ಪ್ರಯಾಣಿಕರೂ ಒಮ್ಮೆ ಕಕ್ಕಾಬಿಕ್ಕಿಯಾಗಿದ್ದಾರೆ. ಇಂಟೆಕ್ಸ್ ಕಂಪೆನಿಗೆ ಸೇರಿದ ಈ ಮೊಬೈಲ್ ಸ್ಫೋಟಗೊಂಡಿದ್ದರಿಂದ ಒಂದು ಕ್ಷಣ ಆ ಬಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಚಾಲಕನ ಜಾಗರೂಕತೆಯಿಂದ ಭಾರೀ ಅಪಾಯವೊಂದು ತಪ್ಪಿದರೂ, ಚಾಲಕ ಸಂದೇಶ್ ಬಂದಾರು ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಾತ್ರವಲ್ಲದೆ ಅವರ ಶರ್ಟ್ ಭಾಗಶಃ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.