ಯೋಧ ಏಕನಾಥ ಶೆಟ್ಟಿ ಬಗ್ಗೆ ಸಿಗುತ್ತಿಲ್ಲ ಮಾಹಿತಿ
ಮಂಗಳೂರು, ಜುಲೈ 26 : ಚೆನ್ನೈಯಿಂದ ಅಂಡಮಾನ್ನ ಪೋರ್ಟ್ ಬ್ಲೇರ್ ಹೋಗುತ್ತಿದ್ದ ವಾಯುಪಡೆಯ ಎಎನ್ -32 ವಿಮಾನದಲ್ಲಿದ್ದ ಗುರುವಾಯನಕೆರೆಯ ಯೋಧ ಏಕನಾಥ ಶೆಟ್ಟಿ ಅವರ ಬಗ್ಗೆ ಕುಟುಂಬದವರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ.
ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸೋಮವಾರ ಏಕನಾಥ ಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರಿಗೆ ಧೈರ್ಯ ತುಂಬಿದರು. ಜುಲೈ 22ರಂದು ಸೇನೆಯಿಂದ ಕರೆ ಬಂದ ಬಳಿಕ ಜಯಂತಿ ಅವರು ಅಧೀರರಾಗಿದ್ದಾರೆ.[29 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ]
ಸ್ವತಃ ಸೇನೆಯಲ್ಲಿ ಸೇವೆ ಸಲ್ಲಿಸಿದ ಕಾರ್ಣಿಕ್ ಅವರು ಸೇನೆಯ ಬಗ್ಗೆ, ದೇಶ ಸೇವೆಯ ಬಗ್ಗೆ, ಶೆಟ್ಟರು ನಿರ್ವಹಿಸಿದ ಸೇವೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದರ ಬಳಿಕ ಜಯಂತಿ ಅವರಿಗೆ ಸ್ವಲ್ಪ ಭರವಸೆ ಬಂದಿದೆ ಎಂದು ಮನೆಯವರು ಹೇಳುತ್ತಾರೆ.[ತಾಂತ್ರಿಕ ದೋಷಗಳಿದ್ದರೂ ವಿಮಾನ ಟೇಕಾಫ್ ಆಗಿತ್ತೆ?]
ಕೇಂದ್ರ ಹಾಗೂ ಸೇನೆಯ ಸಂಪರ್ಕದ ಕೊಂಡಿಯಾಗಿ ಕಾರ್ಣಿಕ್ ಕೆಲಸ ಮಾಡುತ್ತಿದ್ದಾರೆ. ಮನೆಯವರಿಗೆ ದಿನದಲ್ಲಿ 2 ಬಾರಿ ಸೇನೆಯಿಂದ ಕರೆಗಳು ಬರುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಮಾಹಿತಿ ನೀಡುತ್ತಿದ್ದಾರೆ. ಇಲಾಖೆ ನಿತ್ಯ ಸಂಪರ್ಕದಲ್ಲಿರುವಂತೆ ವ್ಯವಸ್ಥೆ ಮಾಡಲಾಗಿದೆ.....[ವಿಮಾನದಲ್ಲಿದ್ದರು ಮಂಗಳೂರ ಯೋಧ]
1985ರಲ್ಲಿ ಸೇನೆ ಸೇರಿದ್ದರು
ಏಕನಾಥ ಶೆಟ್ಟಿ ಅವರು 1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಯಾಗಿ 2009ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಬಳಿಕ ಅವರಿಗೆ ಮಂಗಳೂರಿನಲ್ಲಿ ಕಾರ್ಪೊರೇಷನ್ ಬ್ಯಾಂಕ್ನಿಂದ ಹಾಗೂ ಬೆಂಗಳೂರಿನ ಎಲ್ಎನ್ ಟಿಯಿಂದ ಕೆಲಸದ ಕರೆ ಬಂದಿತ್ತು.
ದೇಶ ಸೇವೆಯ ತುಡಿತವಿತ್ತು
'ಏಕನಾಥ ಶೆಟ್ಟಿ ಅವರಲ್ಲಿ ದೇಶ ಸೇವೆಯ ತುಡಿತವಿತ್ತು. ನಿವೃತ್ತರಾದ ಬಳಿಕ ಅವರು ಆರು ತಿಂಗಳು ಬೆಳ್ತಂಗಡಿಯಲ್ಲಿದ್ದರು. ನಿವೃತ್ತರಾದ ಬಳಿಕವೂ ಅವರ ಮನಸ್ಸು ಮಾತ್ರ ಸೇನೆಯತ್ತಲೇ ತುಡಿಯುತ್ತಿತ್ತು. ಮತ್ತೆ ಅವರು ವಾಯುಸೇನೆಯ ಡಿಫೆನ್ಸ್ ಸೆಕ್ಯುರಿಟಿ ಫೋರ್ಸ್ಗೆ ಸೇರಿಕೊಂಡರು' ಎಂದು ಗಣೇಶ್ ಕಾರ್ಣಿಕ್ ಅವರಿಗೆ ಕುಟುಂಬದವರು ವಿವರಿಸಿದರು. [ಚಿತ್ರ : ಗಣೇಶ್ ಕಾರ್ಣಿಕ್]
ದಕ್ಷಿಣ ಕನ್ನಡ ಎಸ್ಪಿ ಭೇಟಿ
ದಕ್ಷಿಣ ಕನ್ನಡ ಎಸ್ಪಿ ಭೂಷಣ್ ಬೋರಸೆ ಅವರು ಏಕನಾಥ ಶೆಟ್ಟಿ ಅವರ ಮನೆಗೆ ಭೇಟಿ ಧೈರ್ಯ ತುಂಬಿದ್ದಾರೆ. 'ರಜೆಗೆ ಬಂದಿದ್ದ ಪತಿ ಶುಕ್ರವಾರ ಅಂಡಮಾನಿಗೆ ಹೋಗುವುದಿಲ್ಲ ಅಂತ ಕರೆ ಮಾಡಿ ತಿಳಿಸಿದ್ದರು. ಆದರೆ ಅದೇ ವಿಮಾನದಲ್ಲಿ ಪ್ರಯಾಣಿಸಿದ್ದಾಗಿ ಸೇನೆಯಿಂದ ಕರೆ ಬಂದಾಗಲೇ ನಮಗೆ ಗೊತ್ತಾಗಿದ್ದು' ಎಂದು ಜಯಂತಿ ಅವರು ಬೋರಸೆ ಅವರಿಗೆ ತಿಳಿಸಿದ್ದಾರೆ.
ವಿಮಾನ ನಾಪತ್ತೆಯಾಗಿದೆ
ಚೆನ್ನೈನ ತಾಂಬರಮ್ ನಿಂದ ಅಂಡಮಾನ್ ಕಡೆ ಹೊರಟಿದ್ದ ಭಾರತದ ವಾಯುಸೇನೆಯ ಎಎನ್ -32 ವಿಮಾನ ಜುಲೈ 22ರಂದು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದೆದೆ.
ಆರ್. ಜಿ. ಹೆಗ್ಡೆ ಭೇಟಿ
ಮೈಸೂರಿನಿಂದ ಏರ್ಫೋರ್ಸ್ ವಿಂಗ್ ಕಮಾಂಡರ್ ಆರ್. ಜಿ. ಹೆಗ್ಡೆ ಅವರು ಸೇನೆಯ ಪರವಾಗಿ ಭೇಟಿ ನೀಡಿ ಜಯಂತಿ ಅವರಿಗೆ ಧೈರ್ಯ ತುಂಬಿದ್ದಾರೆ. ಸೇನೆ ನಿಮ್ಮ ಕುಟುಂಬದ ಜೊತೆ ಸಂಪರ್ಕದಲ್ಲಿ ಇರುತ್ತೇದೆ. ಸೇನೆಯ ವಿಮಾನ ನಾವು ಪ್ರಯಾಣಿಸುವ ವಿಮಾನಕ್ಕಿಂತ ಭಿನ್ನವಾಗಿದೆ. ತರಬೇತಿ ಹೊಂದಿದ ಯೋಧರೂ ಇರುವುದರಿಂದ ಧೈರ್ಯವಾಗಿರಿ ಎಂದು ಹೇಳಿದ್ದಾರೆ.