ಭಿಕ್ಷೆ ಬೇಡಿದ ಶೋಭಾ ಕರಂದ್ಲಾಜೆಗೆ ರಮಾನಾಥ ರೈ ಟಾಂಗ್
ಮಂಗಳೂರು, ಆಗಸ್ಟ್ 17: "ಕಲ್ಲಡ್ಕದ ಶಾಲೆಯ ಮಕ್ಕಳಿಗಾಗಿ ಸಂಸದೆ ಶೋಭಾ ಕರಂದ್ಲಾಜೆ ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ. ಶೋಭಾ ಅವರಿಗೆ ಮಡಿಕೇರಿಯಲ್ಲಿರುವ ಆಸ್ತಿಯ ಒಂದಂಶ ಕೊಟ್ಟರೂ ಕಲ್ಲಡ್ಕ ಶಾಲೆಯ ಮಕ್ಕಳಿಗೆ ಜೀವನ ಪರ್ಯಂತ ಊಟಕ್ಕೆ ಸಾಕಾಗುತ್ತದೆ," ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಟಾಂಗ್ ನೀಡಿದ್ದಾರೆ .
Recommended Video
ಶೋಭಾ ಕರಂದ್ಲಾಜೆಯವರಿಂದ ಕಲ್ಲಡ್ಕ ಶಾಲೆಗೆ ಅಕ್ಕಿ ಭಿಕ್ಷೆ ಅಭಿಯಾನ
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಮಾನಾಥ ರೈ ಶೋಭಾ ಕರಂದ್ಲಾಜೆ ವಿರುದ್ಧ ಏಕವಚನ ಪ್ರಯೋಗಿಸಿ ವಾಗ್ದಾಳಿ ನಡೆಸಿದರು .
"ಕಲ್ಲಡ್ಕದ ಶಾಲೆ ವಿಚಾರದಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡುತ್ತಿದ್ದಾರೆ. ಗತಿ ಗೋತ್ರ ಇಲ್ಲದ ಶೋಭಾ ಬಳಿ ಈಗ ಎಷ್ಟು ಕೋಟಿ ಆಸ್ತಿಯಿದೆ ಎಂಬುದು ಸ್ಪಷ್ಟವಾಗಬೇಕು," ಎಂದು ಕಿಡಿಕಾರಿದರು .
"ತನ್ನ ಅಪ್ಪನ ಹತ್ತಿರ ಬೇಕಾದಷ್ಟು ಆಸ್ತಿ ಇತ್ತು. ಆದ್ರೆ ಶೋಭಾ ಅವರ ತಂದೆಯ ಬಳಿ ಏನು ಇರಲಿಲ್ಲ. ಆದರೂ ಈಗ ಶ್ರೀಮಂತರಾಗಿರುವ ಹಿಂದಿರುವ ಮರ್ಮವಾದರೂ ಏನು?" ಎಂದು ಪ್ರಶ್ನಿಸಿದರು .
ನನ್ನ ಬಳಿ ಎಷ್ಟು ಆಸ್ತಿ ಇದೆ ? ಶೋಭಾ ಬಳಿ ಎಷ್ಟು ಆಸ್ತಿ ಇದೆ ? ಎಂಬುದರ ಬಗ್ಗೆ ಚರ್ಚೆ ಆಗಲಿ ಎಂದು ಅವರು ಸವಾಲು ಹಾಕಿದರು .
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಗೃಹ ಖಾತೆ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಹೇಳಿದ ಅವರು ಈ ಬಗ್ಗೆ ಇನ್ನೂ ಫೈನಲ್ ಆಗಿಲ್ಲ ಎಂದು ಸ್ಪಷ್ಟಪಡಿಸಿದರು .