ಅಮ್ಮಾ ಜೈಲಿಗೆ ಕಳುಹಿಸಿದ ಕುಡ್ಲದ ನ್ಯಾ.ಕುನ್ಹಾ
ಮಂಗಳೂರಿನ ಗುರುಪುರ ಕೈಕಂಬದ ಕೃಷಿಕ ಕುಟುಂಬದಲ್ಲಿ ಜನಿಸಿದ ಮೈಕೆಲ್ ಡಿ ಕುನ್ಹಾ ಅವರ ತಾಯಿ ಈಗಲೂ ಅಲ್ಲಿ ನೆಲೆಸಿದ್ದಾರೆ. ಹಬ್ಬದ ಸಮಯದಲ್ಲಿ ಮನೆಗೆ ಆಗಮಿಸುವ ಕುನ್ಹಾ ಅವರು, ತಾಯಿಯ ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗುತ್ತಿರುತ್ತಾರೆ. 1985 ರಲ್ಲಿ ವಕೀಲಿ ವೃತ್ತಿ ಆರಂಭಿಸಿದ ಕುನ್ಹಾ ಅವರು, 2002ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡರು. [ಜಯಾ ಪ್ರಕರಣದ ನ್ಯಾಯಾಧೀಶರ ಬಗ್ಗೆ ಓದಿ]
ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿರುವ ಪ್ರಕರಣದ ವಿಚಾರಣೆಯನ್ನು ನಡೆಸಿರುವ ಕೀರ್ತಿ ಕುನ್ಹಾ ಅವರ ಹೆಸರಿನಲ್ಲಿದೆ. ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕುನ್ಹಾ ಅವರು, 1984ರಲ್ಲಿ ಪದವಿ ಪೂರೈಸಿದ ನಂತರ ಮಂಗಳೂರಿನಲ್ಲಿ ಎ.ಜಿ.ಮಥಾಯ್ ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿದರು. [ಅಕ್ರಮ ಆಸ್ತಿ ಪ್ರಕರಣ, 'ಜಯಾ'ಗೆ ಅಪಜಯ]
ಜನಪರ ಕಾಳಜಿ ಅಪಾರ : ನ್ಯಾ.ಕುನ್ಹಾ ಅವರು ಅಪಾರ ಜನಪರ ಕಾಳಜಿ ಹೊಂದಿದ್ದಾರೆ. ಸಾಮಾನ್ಯ ಜನರಿಗೂ ಸುಲಭವಾಗಿ ನ್ಯಾಯ ದೊರೆಯಬೇಕೆಂಬುದು ಕುನ್ಹಾ ಅವರ ಕನಸಾಗಿತ್ತು. 1994ರಲ್ಲಿ ನಾಲ್ವರು ವಕೀಲರು ಸೇರಿ ಮಂಗಳೂರಿನಲ್ಲಿ 'ಮನು ಅಸೋಸಿಯೇಟ್ಸ್' ಸ್ಥಾಪಿಸಿದ್ದರು. ಈ ತಂಡದಲ್ಲಿ ಕುನ್ಹಾ ಅವರಿದ್ದರು. 1997ರ ತನಕ ಕುನ್ಹಾ ಅವರು ಈ ತಂಡದಲ್ಲಿದ್ದು ನಂತರ ಬೆಂಗಳೂರಿಗೆ ತೆರಳಿ ವೃತ್ತಿ ಮುಂದುವರೆಸಿದರು. [ಜಯಲಲಿತಾ ವಿರುದ್ಧ ನ್ಯಾಯಾಂಗ ನಿಂದನೆ ದೂರು]
ಬಳ್ಳಾರಿ ಮತ್ತು ಧಾರವಾಡದಲ್ಲಿ ಜಿಲ್ಲಾ ನ್ಯಾಯಧೀಶರಾಗಿ ಸೇವೆ ಸಲ್ಲಿಸಿರುವ ಕುನ್ಹಾ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವಾಗ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು. ಪ್ರಕರಣದ ವಿಚಾರಣೆ ನಡೆಸಿದ ಅವರು ಜಯಲಲಿತಾ ಅವರನ್ನು ಜೈಲಿಗೆ ಕಳುಹಿಸಿದ್ದಾರೆ.
ಉಮಾ ಭಾರತಿ ಪ್ರಕರಣದ ಸಂಕ್ಷಿಪ್ತ ವಿವರ : 1994ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ಹೋರಾಟದ ವೇಳೆ ಸಂಭವಿಸಿದ್ದ ಗೋಲಿಬಾರ್ನಲ್ಲಿ ಆರು ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಉಮಾಭಾರತಿ ಸೇರಿದಂತೆ 60 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಗಲಭೆಯ ಕುರಿತು 10 ಪ್ರಕರಣ ದಾಖಲಾಗಿತ್ತು. ಅವುಗಳಲ್ಲಿ ಕರ್ನಾಟಕ ಸರ್ಕಾರ ಉಮಾಭಾರತಿವ ವಿರುದ್ಧದ 8 ಪ್ರಕರಣಗಳನ್ನು ವಾಪಸ್ ಪಡೆದಿತ್ತು. ಉಳಿದ 2 ಪ್ರಕರಣ ಕೈ ಬಿಡುವಂತೆ ಉಮಾ ಭಾರತಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕುನ್ಹಾ ಅವರು ವಿಚಾರಣೆ ನಡೆಸಿ, ಮನವಿಯನ್ನು ತಳ್ಳಿ ಹಾಕಿದ್ದರು.
ಆಗ ಮದ್ಯಪಪ್ರದೇಶ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿ ಅವರು ಹುಬ್ಬಳ್ಳಿಗೆ ಆಗಮಿಸಿ ನ್ಯಾಯಾಧೀಶರಾದ ಕುನ್ಹಾ ಅವರ ಮುಂದೆ ಹಾಜರಾಗಿದ್ದರು. ಪ್ರಕರಣದಕ್ಕೆ ಸಂಬಂಧಿಸಿದಂತೆ ಅವರು ಕೆಲವು ಕಾಲ ಜೈಲು ವಾಸವನ್ನು ಅನುಭವಿಸಿದ್ದರು. ಬಳಿಕ ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಡಲಾಯಿತು.