ಅಮೆರಿಕಾ ಸೆನೆಟ್ ಸದಸ್ಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ
ಮಂಗಳೂರು, ಆಗಸ್ಟ್ 8: ನಾಗಾರಾಧನೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಮೆರಿಕಾದ ಸೆನೆಟ್ ಸದಸ್ಯ ರಾಜಾ ಕೃಷ್ಣಮೂರ್ತಿ ನಿನ್ನೆ ಸಂಜೆ ಭೇಟಿ ನೀಡಿದರು.
ಅಮೆರಿಕಾದ ಸೆನೆಟ್ ಗೆ ಇತ್ತೀಚೆಗೆ ನಡೆದ ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಸಂಕಲ್ಪವನ್ನು ರಾಜಾಕೃಷ್ಣಮೂರ್ತಿ ಮಾಡಿದ್ದರು. ಚಿಕಾಗೋದ ಹಿಂದು ದೇವಾಲಯದ ಅರ್ಚಕರಾಗಿರುವ ನಾಗೇಂದ್ರ ರಾವ್ ಅವರ ಸಲಹೆ ಮೇರೆಗೆ ಚುನಾವಣೆಗೂ ಮೊದಲು ಕುಕ್ಕೆ ಸುಬ್ರಹ್ಮಣ್ಯನಲ್ಲಿ ಜಯಕ್ಕೆ ಪ್ರಾರ್ಥಿಸಿದ್ದರು. ಅಲ್ಲದೆ ಚುನಾವಣೆಯಲ್ಲಿ ಗೆದ್ದರೆ ದೇವರಿಗೆ ನಾಗಪ್ರತಿಷ್ಠೆ ಮತ್ತು ಪಂಚಾಮೃತ ಮಹಾಭಿಷೇಕ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು.
ಇದೀಗ ಪಾರ್ಥನೆ ಫಲಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಮ್ಮ ತಾಯಿ ವಿಜಯ ಕೃಷ್ಣಮೂರ್ತಿ ಅವರೊಂದಿಗೆ ಆಗಮಿಸಿ ಕ್ಷೇತ್ರದಲ್ಲಿ ಸೇವೆ ಪೂರೈಸಿದ್ದಾರೆ.
ಕಳೆದ 40 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿರುವ ರಾಜಾ ಕೃಷ್ಣಮೂರ್ತಿ ಈ ಹಿಂದೆ ಸೆನೆಟ್ ಗೆ ಸ್ಪರ್ಧಿಸಿ ಸೋತಿದ್ದರು. ಸೆನೆಟ್ ಗೆ ಮೂರನೇ ಬಾರಿ ಸ್ಪರ್ಧಿಸಿ ಈ ಬಾರಿ ಜಯ ಸಾಧಿಸಿದ್ದಾರೆ.
ಇದೇ ವೇಳೆ ಅವರು ಮುಂಬರುವ ದಿನಗಳಲ್ಲಿ ಅಮೆರಿಕಾದ ಕಾಂಗ್ರೆಸ್ ಸದಸ್ಯನಾಗಿ ಆಯ್ಕೆ ಯಾಗಬೇಕೆಂದು ಕುಕ್ಕೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಾಲಯದ ಶಿಷ್ಟಾಚಾರ ಅಧಿಕಾರಿ ಕೆ.ಎಂ. ಗೋಪಿನಾಥ್ ನಂಬೀಶ ಸ್ವಾಗತಿಸಿದರು.
ತುಳು ಅಕಾಡೆಮಿ ಅಧ್ಯಕ್ಷರಾಗಿ ಎ.ಸಿ ಭಂಡಾರಿ ಆಯ್ಕೆ
ಕಳೆದ 5 ದಶಕಗಳಿಂದ ತುಳು ಭಾಷೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಎ.ಸಿ ಭಂಡಾರಿ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಅಂಬಡೆ ಬೈಲು ನಿವಾಸಿ 74 ವರ್ಷದ ಚಂದ್ರಶೇಖರ್ ಭಂಡಾರಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ. 1970ರಲ್ಲಿ ಎ.ಸಿ ಭಂಡಾರಿ ಅವರು ಎಸ್.ಆರ್ ಹೆಗ್ಡೆ, ರತ್ನ ಕುಮಾರ್ ಅವರೊಂದಿಗೆ ಸೇರಿ ಮಂಗಳೂರಿನಲ್ಲಿ ತುಳು ಕೂಟವನ್ನು ಸ್ಥಾಪಿಸಿ ತುಳು ಭಾಷಾ ಅಭಿವೃದ್ಧಿಗೆ ವೇದಿಕೆ ಸಿದ್ಧಪಡಿಸಿದ್ದರು.
ತುಳು ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಭಂಡಾರಿಯವರ ಹೆಸರು ಕಳೆದ ಬಾರಿ ಕೂಡ ತುಳು ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತಾದರೂ ಕೊನೆಯ ಹಂತದಲ್ಲಿ ಅಧ್ಯಕ್ಷ ಸ್ಥಾನ ಕೈತಪ್ಪಿತ್ತು. ಎ.ಸಿ ಭಂಡಾರಿ ರಾಜಕಾರಣಿಯೂ ಆಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ.
ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನ ದೊರೆತಿರುವ ಕುರಿತು 'ಒನ್ಇಂಡಿಯಾ'ಕ್ಕೆ ಪ್ರತಿಕ್ರಿಯಿಸಿರುವ ಎ.ಸಿ ಭಂಡಾರಿ ಸಂತಸ ವ್ಯಕ್ತಪಡಿಸಿದ್ದಾರೆ. "ತುಳು ಭಾಷೆಯಲ್ಲಿ ಹೆಚ್ಚು ಸಾಹಿತ್ಯ ಕೃತಿಗಳು ಸೃಷ್ಟಿಯಾಗಬೇಕು .ಈ ನಿಟ್ಟಿನಲ್ಲಿ ಪ್ರೋತ್ಸಾಹ ದೊರೆಯಬೇಕು," ಎಂದವರು ತಿಳಿಸಿದ್ದಾರೆ.
"ಶಾಲೆಗಳಲ್ಲಿ ತುಳು ಭಾಷೆ ತೃತೀಯ ಭಾಷೆಯಾಗಿ ಕಲಿಯ್ಪಡುತ್ತಿದೆ. ಇದು ಇನ್ನಷ್ಟು ವಿಸ್ತಾರ ಗೊಳ್ಳಬೇಕು," ಎಂದು ಅವರು ಅಭಿಪ್ರಾಯಪಟ್ಟರು.