ಮಂಗಳೂರಿನ ಈ ಮುಸ್ತಫಾರಿಗೆ ಹಸುಗಳೇ ಮಕ್ಕಳು..!
ದಕ್ಷಿಣ ಕನ್ನಡ ಜಿಲ್ಲೆ ಹಲವು ಗೋ ಸಂಬಂಧಿತ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದಿದೆ. ಇದೇ ನೆಲದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಗೋಳ್ತಮಜಲಿನ ನಿವಾಸಿ ಅಹಮ್ಮದ್ ಮುಸ್ತಾಫಾ ಹಸು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದು ಗಮನ ಸೆಳೆಯುತ್ತಾರೆ.
ಮಂಗಳೂರು, ಮಾರ್ಚ್ 30: ನಮ್ಮ ಅಜ್ಜ- ಅಜ್ಜಿಯ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಹಸುಗಳಿರುತ್ತಿತ್ತು. ಕೊಟ್ಟಿಗೆ ಇತ್ತು. ಹಾಲು, ಗೊಬ್ಬರಕ್ಕಾಗಿ ಹಸುಗಳನ್ನ ಸಾಕುತ್ತಿದ್ದರೂ ಈ ಹಸುಗಳನ್ನ ತಮ್ಮ ಮಕ್ಕಳಂತೆ ಆರೈಕೆ ಮಾಡುತ್ತಿದ್ದರು. ಆದರೆ ಕಾಲ ಸರಿದಂತೆ ಹಸುಗಳನ್ನ ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆ ಹಲವು ಗೋ ಸಂಬಂಧಿತ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದಿದೆ. ಇದೇ ನೆಲದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಗೋಳ್ತಮಜಲಿನ ನಿವಾಸಿ ಅಹಮ್ಮದ್ ಮುಸ್ತಾಫಾ ಹಸು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದು ಗಮನ ಸೆಳೆಯುತ್ತಾರೆ.
ಮುಸ್ಲಿಂ ಧರ್ಮಕ್ಕೆ ಸೇರಿದ ಇವರು ತಮ್ಮ ಮನೆಯಲ್ಲಿ 35ಕ್ಕೂ ಹೆಚ್ಚು ಹಸುಗಳನ್ನ ಸಾಕುವ ಮೂಲಕ ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ.[ಮಂಗಳೂರಿನಲ್ಲಿ ನೀರಿಗೆ ಸಮಸ್ಯೆ, ಟ್ಯಾಂಕರ್ ಗಳಿಗೆ ಹೆಚ್ಚಿದ ಬೇಡಿಕೆ]
ಬಂಟ್ವಾಳ ತಾಲೂಕಿನ ಕಲ್ಲಡ್ಕದಿಂದ ವಿಟ್ಲ ಕಡೆಗೆ ತೆರಳುವ ರಸ್ತೆಯಲ್ಲಿ ಸಿಗುವ ಊರೇ ಗೋಳ್ತಮಜಲು. ಇಲ್ಲಿ ತನ್ನ ಎರಡು ಎಕರೆ ಜಾಗದಲ್ಲಿ ಮುಸ್ತಾಫಾ ಹಸುಗಳನ್ನು ತನ್ನ ಮಕ್ಕಳಂತೆ ಸಾಕಿ ಹೈನುಗಾರಿಕೆಯಲ್ಲಿ ಯಶ ಸಾಧಿಸಿದ್ದಾರೆ. ಇವರು ಗೋವುಗಳ ಮೇಲಿಟ್ಟಿರುವ ಪ್ರೀತಿ, ವಾತ್ಸಲ್ಯ ನೋಡಿದರೆ ಅಚ್ಚರಿಯಾಗುತ್ತೆ.
12 ವರ್ಷಗಳ ಪರಿಶ್ರಮ
ಅದು 2004. ಅಂದರೆ 12 ವರ್ಷಗಳ ಹಿಂದಿನ ಕಥೆ. ಮುಸ್ತಾಫಾಜಿ ತಮ್ಮ ಮನೆಯ ಪಕ್ಕದಲ್ಲೇ ಹಟ್ಟಿ ಕಟ್ಟಿದ್ದರು. ಆಗ ಇವರ ಬಳಿ ಒಂದು ಜೆರ್ಸಿ ದನ ಇತ್ತು. ಈಗ ಈ ಹಟ್ಟಿಗಳಲ್ಲಿ 35 ವಿವಿಧ ತಳಿಯ ದನಗಳಿವೆ. ಇದರಲ್ಲಿ 6 ಕರುಗಳಿವೆ, ಏಳು ಹಸುಗಳು ಕರು ಹಾಕಲು ಸಿದ್ಧವಾಗಿವೆ. ಇದರಿಂದ ಪ್ರತಿನಿತ್ಯ 240ಲೀಟರ್ ಹಾಲು ಸಂಗ್ರಹ ಮಾಡುತ್ತಿದ್ದಾರೆ. ಹಾಲು ಕರೆಯಲು ಮೆಷಿನ್ಗಳ ವ್ಯವಸ್ಥೆಯೂ ಇವರ ಬಳಿಯಲ್ಲಿದೆ.
ಹಟ್ಟಿಯಲ್ಲಿ ಮತ್ತೇನಿದೆ..?
ಮುಸ್ತಫಾ ಅವರ ಹಟ್ಟಿಯಲ್ಲಿ ಅಸ್ಟ್ರೇಲಿಯನ್ ತಳಿಯ ಎಚ್.ಎಫ್ ಹಸುವಿದೆ. ಇದು ದಿನಕ್ಕೆ 10ರಿಂದ 23 ಲೀಟರ್ ಹಾಲು ನೀಡಿದರೆ, ಜೆರ್ಸಿ ದನ 8 ರಿಂದ 15 ಲೀಟರ್ ಹಾಲು ನೀಡುತ್ತದೆ. ಅದಲ್ಲದೆ ಸಾಯಿವಾಲ್ ಹಾಗೂ ಥಾರ್ ಪಾರ್ಕರ್ ತಳಿಗಳು ಕೂಡಾ ಇದೆ. ಇನ್ನು ಗುಜರಾತಿನ ಗಿರ್ ತಳಿ ಕೂಡಾ ಇವರ ಹಟ್ಟಿಯಲ್ಲಿದೆ.['ಅಬಲೆಯಲ್ಲ ಸಬಲೆ' ಮೊಗವೀರ ಮಹಿಳೆಯರ ಸ್ವಾಭಿಮಾನದ ಯಶೋಗಾಥೆ]
ಲಾಭಕ್ಕಿಂತ ನಷ್ಟವೇ ಜಾಸ್ತಿ
ಕಳೆದ 12 ವರ್ಷಗಳಿಂದ ಹೈನು ಕೃಷಿಗಾಗಿ ಲಕ್ಷ ಲಕ್ಷ ಹಣ ಹೂಡಿದವರು ಮುಸ್ತಫಾ. ಆದರೆ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿತ್ತು. ಕೆಲ ತಿಂಗಳಿನಿಂದ ಮುಸ್ತಾಫಜಿ ಲಾಭ ಗಳಿಸುತ್ತಿದ್ದಾರೆ. ಕೆಎಂಎಫ್ ಡೈರಿಗೆ ನೀಡುವ ಹಾಲು ಮಾರಾಟದಲ್ಲಿ ಸಿಗುವ ಸಬ್ಸಿಡಿಯಿಂದಾಗಿ ಚಿಲ್ಲರೆ ಹಣ ಸೇವ್ ಆಗುತ್ತಿದೆ. ಹವ್ಯಾಸ ಮತ್ತು ಗೋವಿನ ಮೇಲಿರುವ ಪ್ರೇಮವಷ್ಟೇ ಹಸು ಸಾಕಣೆಗೆ ಕಾರಣ. ಲಾಭ ನನ್ನ ಉದ್ದೇಶವಲ್ಲ ಎನ್ನುತ್ತಾರೆ ಮುಸ್ತಫಾ.
ಹುಲುಸಾದ ಹುಲ್ಲು
ಗೊಬ್ಬರದ ನೀರಿನ ಅಂಶವನ್ನು ಹುಲ್ಲುಗಾವಲು ಪ್ರದೇಶಕ್ಕೆ ಬಿಟ್ಟು ಒಂದೂವರೆ ಎಕರೆ ಜಮೀನಿನಲ್ಲಿ ಹುಲುಸಾದ ಹೈಬ್ರಿಡ್ ಹುಲ್ಲನ್ನು ಮುಸ್ತಫಾ ಬೆಳೆಯುತ್ತಿದ್ದಾರೆ. ಮನೆ ಮುಂದೆ ತರಕಾರಿ ತೋಟ ಮಾಡಿದ್ದು, ವಿವಿಧ ಬಗೆಯ ತರಕಾರಿಗಳು ಬೆಳೆಯುತ್ತಿದ್ದಾರೆ. ಇದಕ್ಕೆ ಹಟ್ಟಿ ಗೊಬ್ಬರವೇ ಆಧಾರವಾಗಿದೆ.
ಅತ್ಯುತ್ತಮ ಹೈನುಗಾರ ಪ್ರಶಸ್ತಿ
ಹೈನುಗಾರಿಕೆಯ ಸಹಾಯಕ್ಕಾಗಿ ಮೂರು ಕುಟುಂಬಗಳಿವೆ. ಇವರಲ್ಲಿ ಎರಡು ಕುಟುಂಬಗಳಿಗೆ ತನ್ನದೇ ಜಾಗದಲ್ಲಿ ಉಚಿತವಾಗಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ. 2015-16 ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನ ಅತ್ಯುತ್ತಮ ಹೈನುಗಾರ ಪ್ರಶಸ್ತಿ ಇವರಿಗೆ ಲಭಿಸಿದೆ.
ದನದ ಸೆಗಣಿಯಲ್ಲಿ ಗೋಬರ್ ಗ್ಯಾಸ್, ಉತ್ಪಾದಿಸಿ ಕೆಲಸಗಾರರ ಮನೆಯ ಅಗತ್ಯಕ್ಕೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಇವರು ಮಾದರಿ ವ್ಯಕ್ತಿಯೇ ಸರಿ.