ದಾವಣಗೆರೆ ಮೂಲದ ವೈದ್ಯಕೀಯ ವಿದ್ಯಾರ್ಥಿ ಮಂಗಳೂರಲ್ಲಿ ಆತ್ಮಹತ್ಯೆ
ಮಂಗಳೂರು, ಆಗಸ್ಟ್ 1: ಮಂಗಳೂರಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣದ ಗಲಾಟೆಯೇ ಇನ್ನೂ ಆರದಿರುವಾಗ ಮತ್ತೊಂದು ಆತ್ಮಹತ್ಯೆ ಸುದ್ದಿ ಬೆಳಕಿಗೆ ಬಂದಿದೆ.
ಕಾವ್ಯ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆ ವರದಿ ಪರಿಶೀಲನೆ
ಇಲ್ಲಿನ ಫಾದರ್ ಮುಲ್ಲರ್ ಕಾಲೇಜಿನ ಅಂತಿಮ ವರ್ಷದ ಎಂಡಿ ವಿದ್ಯಾರ್ಥಿ ಎಚ್.ಕೆ.ಪ್ರಸಾದ್(28) ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಜುಲೈ 29, ಶನಿವಾರ ನಡೆದಿರಬಹುದೆಂದು ಶಂಕಿಸಲಾಗಿದೆ.
ಹಾಸ್ಟೆಲ್ ಕೊಠಡಿಯಲ್ಲಿ ಒಬ್ಬನೇ ವಾಸಿಸುತ್ತಿದ್ದ ದಾವಣಗೆರೆ ಮೂಲದ ಪ್ರಸಾದ್, ಜುಲೈ 29 ರ ರಾತ್ರಿ ಬ್ಲೇಡಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. ಜುಲೈ 30 ರ ಬೆಳಿಗ್ಗೆ ಆತನ ತಂದೆ-ತಾಯಿ ಹಲವು ಬಾರಿ ಫೋನ್ ಮಾಡಿದರೂ ಆತ ಫೋನ್ ರಿಸೀವ್ ಮಾಡದಿದ್ದಾಗ ಭಯಗೊಂಡ ತಂದೆ ತಾಯಿ ಕಾಲೇಜಿಗೇ ಫೋನ್ ಮಾಡಿ ವಿಚಾರಿಸಿದ್ದಾರೆ. ಕಾಲೇಜಿನ ಸಿಬ್ಬಂದಿ ಹಾಸ್ಟೇಲಿಗೆ ಹೋಗಿ ನೋಡಿದಾಗ ಆತ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಪ್ರಸಾದ್ ಇತ್ತೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳಿನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂದಿರುವ ಪಾಂಡೇಶ್ವರ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.