ಮಾಸ್ತಿಗುಡಿ ದುರಂತ: ಶವ ಹುಡುಕಿಕೊಟ್ಟ ಮಂಗಳೂರು ಈಜುತಜ್ಞರು
ಮಂಗಳೂರು, ನವೆಂಬರ್ 10 : ನಟ ದುನಿಯಾ ವಿಜಿ ಆಭಿನಯದ ಕ್ಲೈಮ್ಯಾಕ್ಸ್ ವೇಳೆ ಖಳ ನಟರಾದ ಅನಿಲ್ ಮತ್ತು ಉದಯ್ ಕೆರೆ ಹಾರಿ ಮೃತರಾದ ನಟರನ್ನು ಪತ್ತೆ ಹಚ್ಚುವಲ್ಲಿ ಮಂಗಳೂರಿನ ಮೀನುಗಾರರು ಸಾಹಸ ಮೆರೆದು ಯಶಸ್ವಿಯಾಗಿದ್ದಾರೆ.
ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಖಳನಟರಾದ ಅನಿಲ್, ಉದಯ್ ಅವರ ಶವ ಪತ್ತೆ ಹಚ್ಚಲು ಕಳೆದ ಮೂರು ದಿನಗಳಿಂದ ಜಲಾಶಯದಲ್ಲಿ ಬೋಟ್ಗಳು, ನುರಿತ ಈಜುಗಾರರು ಮೃತದೇಹಗಳಿಗಾಗಿ ಶೋಧ ನಡೆಸುತ್ತಲೇ ಇದ್ದರು. ತಜ್ಞ ಈಜುಗಾರರಾಗಿದ್ದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಆದರೆ ಮಂಗಳೂರಿನ ಮೀನುಗಾರರು ಇಬ್ಬರ ಮೃತದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.[ಮಾಸ್ತಿಗುಡಿ ದುರಂತ: ಇಬ್ಬರು ನಟರ ಶವಕ್ಕಾಗಿ ತೀವ್ರ ಶೋಧ]
ಆಪತ್ಬಾಂಧವರು: ಮಂಗಳೂರಿನ ಜಾವೇದ್, ಝಾಕೀರ್, ಅರ್ಮಾನ್, ವಸಿಮ್, ಸಾಧಿಕ್ ಈ ಐದು ಮಂದಿ ಸ್ವಇಚ್ಛೆಯಿಂದ ತಿಪ್ಪನಗೊಂಡಹಳ್ಳಿಗೆ ತೆರಳಿ ಮೃತದೇಹ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಈ ಐದು ಮಂದಿ ಮೂಲತಃ ಮೀನುಗಾರರಾಗಿದ್ದು, ತಮ್ಮ ವೃತ್ತಿಯ ಜತೆಗೆ ಸಾಹಸ ಮೆರೆದು ಅನೇಕ ಮಂದಿಯ ಪ್ರಾಣ ರಕ್ಷಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ. ಇವರು ಈ ವರೆಗೆ ನೂರಕ್ಕಿಂತಲೂ ಅಧಿಕ ಶವವನ್ನು ಶೋಧ ಕಾರ್ಯ ನಡೆಸಿ ಹೊರತೆಗೆದಿದ್ದಾರೆ. ತಮ್ಮ ಪ್ರಾಣ ಲೆಕ್ಕಿಸದೆ ಇತರರ ಒಳಿತಿಗಾಗಿ ಸಾಹಸ ಮೆರದ ಈ ಮಂಗಳೂರಿನ ಶೂರರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕಾರವೂ ಲಭಿಸಿದೆ.[ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಬಂಧನ]
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲೂ ಈ ಐವರ ಪಾತ್ರ ಹಿರಿದು. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ನದಿಗೆ ಎಸೆದ ಮೂಳೆಗಳನ್ನು ಜಾವೇದ್ ಸೇರಿದಂತೆ ಐವರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ತಮ್ಮದೇ ಆದ ಸಮವಸ್ತ್ರಗಳು ಹಾಗೂ ಶೋಧಕಾರ್ಯಕ್ಕಾಗಿ ಸೌಕರ್ಯಗಳಿವೆ. ಇವರು ಮೂಲತಃ ಮೂಲ್ಕಿಯ ಕಮಾಂಡರ್ ಗ್ರೂಪ್ನ ಗೃಹರಕ್ಷಕ ದಳದವರಾಗಿದ್ದಾರೆ. ಇವರು ತಣ್ಣೀರುಬಾವಿಯ ಹೆಮ್ಮೆಯ ಮುಳುಗುತಜ್ಞರು ಹೌದು.
ಮುರಳಿ ಮೋಹನ್ ಮಾರ್ಗದರ್ಶನ: ದ.ಕ ಜಿಲ್ಲೆಯ ಹೋಮಾಗಾರ್ಡ್ ಕಮಾಂಡೆಂಟ್ ಡಾ. ಮುರಳಿ ಮೋಹನ್ ವನ್ ಇಂಡಿಯಾ ಜತೆ ಮಾತನಾಡಿ, ಜಾವೇದ್, ಝಾಕೀರ್, ಅರ್ಮಾನ್, ವಸಿಮ್, ಸಾಧಿಕ್ ಈ ಐವರು ಮೃತದೇಹ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮುಕ್ತ ಕಂಟದಿಂದ ಶ್ಲಾಘಿಸಿದರು. ಈ ಐವರು ತಮ್ಮ ಸ್ವಂತ ಇಚ್ಛೆಯಿಂದ ಅಲ್ಲಿಗೆ ತೆರಳಿ ಶೋಧಕಾರ್ಯದಲ್ಲಿ ಭಾಗಿಯಾಗಿ ಮೃತದೇಹ ಪತ್ತೆಹೆಚ್ಚಿದ್ದಾರೆ ಎಂದರು. ಇವರು ತುಂಗಭದ್ರಾ ನದಿ, ಭದ್ರಾವತಿ, ನೇತ್ರಾವತಿ ಮುಂತಾದ ನದಿಗಳಲ್ಲಿ ತಮ್ಮ ಸಾಹಸ ಮೆರೆದಿದ್ದಾರೆ ಎಂದಿದ್ದಾರೆ.
ಶೋಧಕಾರ್ಯ ಹಿನ್ನೆಲೆ: ಮುರಳಿ ಮೋಹನ್ ರವರು ಎಸ್ಪಿ ಗುಲಾಬ್ ರಾವ್ ಬೋರಸೆಗೆ ಕರೆ ಮಾಡಿ ಈ ಐವರ ಸಾಧನೆಯ ವಿವರಣೆ ನೀಡಿದ್ದಾರೆ. ಆದರೆ ಬೊರಸೆಯವರು ನಾನು ಡಿಜಿಪಿ ವಿಷಯ ತಿಳಿಸುತ್ತೇನೆ ಅವರು ಒಪ್ಪಿಗೆ ಕೊಟ್ಟರೆ ಅಭ್ಯಂತರವಿಲ್ಲ ಎಂದಿದ್ದಾರೆ. ಆದರೆ ಅವರು ಒಪ್ಪಿಗೆ ಕೊಡುವ ಮುನ್ನವೇ ಈ ಐವರು ತಮ್ಮ ಸ್ವಇಚ್ಛೆಯಿಂದಲೇ ಹೋಗುವುದಾಗಿ ತಿಳಿಸಿ ತಾವೇ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಐವರು ಖಳನಟರ ಮೃತದೇಹದ ಪತ್ತೆಗಾಗಿ ತಮ್ಮ ಶೋಧ ಕಾರ್ಯ ನಡೆಸಲು ಮುಂದಾಗಿ, ನಿನ್ನೆ ಉದಯ್ ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಿಗ್ಗೆ ಸುಮಾರು 5.30ಕ್ಕೆ ಅನಿಲ್ ಮೃತದೇಹ ಕೂಡ ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ನಮ್ಮ ಮಂಗಳೂರಿನ ಐವರು ಜಯಶಾಲಿಗಳಾಗಿದ್ದಾರೆ.