ಮಂಗಳೂರು ಜೈಲಿನಲ್ಲಿ ಸಿಕ್ಕಿದ್ದು ಗಾಂಜಾ, ಮೊಬೈಲ್, ಚೂರಿ, ರಾಡ್
ಮಂಗಳೂರು, ಸೆಪ್ಟೆಂಬರ್ 6: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ 29 ಮೊಬೈಲ್, 9 ಸಿಮ್, 100 ಗ್ರಾಂ ಗಾಂಜಾ, ಮೊಬೈಲ್ ಚಾರ್ಜರ್, ಚೂರಿ ಹಾಗೂ ರಾಡ್ ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ತಡರಾತ್ರಿ 12 ಗಂಟೆ ವರೆಗೆ ಕಾರ್ಯಾಚರಣೆ ನಡೆದಿದೆ. ಈ ವೇಳೆ ಖೈದಿಗಳು ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಾಗೃಹದ ಕೋಣೆ, ಶೌಚಾಲಯ ಮುಂತಾದ ಕಡೆ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಜೈಲಿನ ಒಳಗಡೆ ಮೊಬೈಲ್ ಬಳಸುತ್ತಿದ್ದರಲ್ಲದೆ, ಹೊರಗಿನ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಸಾಧಿಸುತ್ತಿದ್ದರು.[ಸಂತ ಅಲೋಶಿಯಸ್ ಕಾಲೇಜು ವಿವಾದ, ಕಿಡಿಗೇಡಿಗಳ ಕೃತ್ಯವೇ?]
ಗಾಂಜಾದಂಥ ಮಾದಕ ವಸ್ತುಗಳ ಬಳಸುತ್ತಿದ್ದರು. ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಿಷನರ್ ಎಂ.ಚಂದ್ರಶೇಖರ್ ಆದೇಶದ ಮೇರೆಗೆ ಡಿಸಿಪಿ ಸಂಜೀವ ಪಾಟೀಲ್, ಕಾನೂನು ಮತ್ತು ಸುವ್ಯವಸ್ಥೆಯ ಶಾಂತರಾಜು, ಸಿಸಿಬಿ, ಬರ್ಕೆ ಪೊಲೀಸರು, ಜೈಲಾಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಈ ದಾಳಿ ನಡೆಸಲಾಗಿದೆ.[ನಮೋ ಬ್ರಿಗೇಡ್ ನರೇಶ್ ಶೆಣೈಗೆ ಮಂಪರು ಪರೀಕ್ಷೆ?]
ರೇಡ್ ನಡೆದದ್ದು ಯಾಕೆ?: ಕಳೆದ ವಾರ ಜೈಲಿನಲ್ಲಿದ್ದ ದರೋಡೆ ಪ್ರಕರಣದ ಆರೋಪಿ ಕಸಬಾ ಬೆಂಗರೆಯ ನೌಶದ್ ಮೇಲೆ ಸಹ ಖೈದಿಗಳ ತಂಡ ದಾಳಿ ನಡೆಸಿತ್ತು. ಸಹಖೈದಿ ಸರ್ಫ್ ರಾಜ್ ಹಾಗೂ ಆತನ ತಂಡದವರು ನೌಶದ್ ಮೇಲೆ ಹಲ್ಲೆ ನಡೆಸಿದ್ದರು, ಆತ ಗಂಭೀರವಾಗಿ ಗಾಯಗೊಂಡಿದ್ದ. ಈತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಗಲಾಟೆ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಕಳೆದ ವರ್ಷ ಜೈಲಿನಲ್ಲಿ ಮಾಡೂರು ಇಸಬು ಹಾಗೂ ಗಣೇಶ್ ಎಂಬಿಬ್ಬರನ್ನು ಸಹ ಖೈದಿಗಳೇ ಥಳಿಸಿ ಕೊಂದಿದ್ದರು. ಇದಾದ ಬಳಿಕ ಜೈಲ್ ಮೇಲೆ ಎರಡು ಬಾರಿ ದಾಳಿ ನಡೆದಿದೆ. ಇದು ಮೂರನೆಯದ್ದಾಗಿದೆ. ಮೂರು ದಾಳಿ ವೇಳೆಯೂ ಗಾಂಜಾ, ಮೊಬೈಲ್ ಪತ್ತೆಯಾಗಿದೆ.