ವಿಶಿಷ್ಟ ರುಚಿಯ ಮಟ್ಟುಗುಳ್ಳ ತರಕಾರಿಗೆ 'ಕಾಂಡ ಕೊರಕ ರೋಗ'
ಮಂಗಳೂರು, ಡಿಸೆಂಬರ್, 03: ಕರಾವಳಿಯಲ್ಲಿ ಬೆಳೆಯುವ ತರಕಾರಿಗೂ, ಇತರ ಪ್ರದೇಶಗಳ ತರಕಾರಿಗೂ ಇರುವ ಭೌತಿಕ ವ್ಯತ್ಯಾಸಗಳು (ಬಣ್ಣ, ಆಕಾರ ಇತ್ಯಾದಿ) ಹಲವು. ಇವು ನೋಡುಗರಿಗೆ ಕುತೂಹಲವನ್ನು ಹುಟ್ಟು ಹಾಕುತ್ತದೆ. ರುಚಿಯಲ್ಲಿ ಸಾಮ್ಯತೆ ತೋರುವ ಕೆಲವು ತರಕಾರಿಯ ಭೌತಿಕ ವ್ಯತ್ಯಾಸಗಳು ಅಚ್ಚರಿಯ ಲೋಕವನ್ನೇ ತೆರೆದಿಡುತ್ತವೆ.
ಉದಾಹರಣೆಗೆ ಕುಂಬಳ ಕಾಯಿ, ಬದನೆ ಕಾಯಿ, ಸೌತೆಕಾಯಿ, ಇಬ್ಬುಳ್ಳೆ, ಕಲ್ಲಂಗಡಿ ಹಣ್ಣು ಇತ್ಯಾದಿ. ಇನ್ನು ಊರಿನ ತೊಂಡೆ, ಅಲಸಂದೆ, ಪಡವಲ, ಹೀರೆ, ಮಟ್ಟು ಗುಳ್ಳ, ಸೊಪ್ಪುಗಳ ರುಚಿಯನ್ನು ಉಂಡವನೇ ಬಲ್ಲ. ಈ ವ್ಯತ್ಯಾಸಗಳಿಗೆ ಮಣ್ಣಿನ ಗುಣ ಕಾರಣ ಎಂದಾದರೆ, ಈ ಮಣ್ಣಿನ ಗುಣವೇ ಇಲ್ಲಿನ ಜನರನ್ನು ಇತರರಿಂದ ಬೇರೆಯಾಗಿಸಿದೆ ಅನ್ನಬಹುದೇ?
ಮಟ್ಟು ಈ ಹೆಸರು ಕೇಳಿದ್ರೆ ನೆನಪಾಗುವುದೇ ಬಂಗಾರದಂತಹ ಬೆಳೆ 'ಮಟ್ಟುಗುಳ್ಳ'. ತನ್ನ ಆಕರ್ಷಣೀಯ ಬಣ್ಣ, ವಿಶಿಷ್ಟ ರುಚಿಯಿಂದ ಮನೆಮಾತಾಗಿರುವ ಮಟ್ಟುಗುಳ್ಳಕ್ಕೆ ಇತ್ತೀಚೆಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿ.ಐ) ಪ್ರಮಾಣಪತ್ರವೂ ಲಭಿಸಿತ್ತು. ಮಟ್ಟುವಿನ ಹೆಸರೇ ಖ್ಯಾತಿಗೊಳಿಸಿದ ಮಟ್ಟುಗುಳ್ಳ ಬೆಳೆಗೆ ಕಾಂಡಕೊರಕ ಮತ್ತು ಹುಳಭಾದೆ ರೋಗ ಕಾಣಿಸಿಕೊಂಡಿದ್ದು, ಈ ಬಾರಿ ಗುಳ್ಳ ಬೆಳೆಯ ಎರಡನೇ ಇಳುವರಿಯ ಕುಸಿತದಿಂದಾಗಿ ಉಡುಪಿ ಪರ್ಯಾಯಕ್ಕೆ ಗುಳ್ಳಕೊರತೆಯ ಅಭಾವ ಕಂಡು ಬರುವ ಸಾಧ್ಯತೆ ಹೆಚ್ಚಾಗಿದೆ.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]
ಉಡುಪಿ ಸೋದೆ ಮಠದ ಶ್ರೀ ವಾದಿರಾಜ ಯತಿಗಳಿಂದ ಅನುಗ್ರಹಿಸಲ್ಪಟ್ಟ ಮಟ್ಟುಗುಳ್ಳ ತನ್ನ ವಿಶಿಷ್ಟ ರುಚಿಯ ಮೂಲಕ ದೇಶ ವಿದೇಶದಲ್ಲಿ ಪ್ರಸಿದ್ಧಿಯಾಗಿದೆ. ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆಯಾಗಿ ಟನ್ ಗಟ್ಟಲೆ ಮಟ್ಟುಗುಳ್ಳ ತರಕಾರಿಯನ್ನು ಕಳುಹಿಸಿಕೊಡುವ ಸಂಪ್ರದಾಯವಿದೆ.
ವಾಡಿಕೆಗಿಂತ ಒಂದು ತಿಂಗಳ ಮೊದಲೇ ಗುಳ್ಳ ಬೆಳೆಯನ್ನು ಆರಂಭಿಸಿದ್ದರು. ಮೊದಲ ಫಸಲು ಉತ್ತಮ ಲಾಭವನ್ನೇ ತಂದುಕೊಟ್ಟಿತು. ದ್ವಿತೀಯ ಇಳುವರಿಯ ಆರಂಭಿಕ ಹಂತದಲ್ಲೇ ಗುಳ್ಳ ಗದ್ದೆಯಲ್ಲಿ ಗಿಡಗಳಿಗೆ ಕಾಂಡ ಕೊರಕ ರೋಗ ಬಂದಿದ್ದು, ಗುಳ್ಳ ಗಿಡಗಳ ಕಾಂಡ ಕಡಿದು ಬೀಳಲಾರಂಭಿಸಿದೆ.[ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್']
ಈ ಹಿನ್ನೆಲೆಯಲ್ಲಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಬಹುತೇಕ ಗಿಡಗಳು ಕಾಂಡ ಕೊರಕ ರೋಗ ಬಾಧೆಗೆ ತುತ್ತಾಗಿದ್ದರೆ, ಸ್ವಲ್ಪ ತಡವಾಗಿ ನಾಟಿ ಮಾಡಿದ್ದ ಗಿಡಗಳಲ್ಲಿನ ಫಸಲುಗಳಿಗೆ ಹುಳ ಬಾಧೆಯೂ ಆವರಿಸಿ ಗುಳ್ಳ ಇಳುವರಿಗೆ ಈ ಹಿಂದಿಗಿಂತ ಹೆಚ್ಚಿನ ಹಿನ್ನಡೆ ಕಂಡು ಬಂದಿದೆ.
ಮಟ್ಟುಗುಳ್ಳ ಬೆಳೆಗಾರರು ಈ ಬಾರಿ ತರಿಕೆರೆಯಿಂದ ಕೊಕೊಫೀಟ್ ತಂದು ಗುಳ್ಳ ಬೀಜ ಬಿತ್ತನೆ ಮಾಡಿದ್ದರು. ತರಿಕೆರೆಯಲ್ಲಿ ಕೊಕೊಪೀಟ್ ಗೆ ಸುಫಲ ರಾಸಾಯನಿಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಣ ಮಾಡಿದ್ದರಿಂದ ಇದರಲ್ಲಿ ಸಿಹಿ ಅಂಶ ಹೆಚ್ಚಾಗಿದೆ.
ಗುಳ್ಳ ಗಿಡಗಳು ಮೆಲ್ನೋಟಕ್ಕೆ ಮಾತ್ರ ಬಹಳ ಆರೋಗ್ಯಯುತವಾಗಿ ಕಾಣಿಸುತ್ತಿದೆ. ಗುಳ್ಳ ಕಟಾವಿನ ಸಂದರ್ಭ ಕಾಂಡ ಮುರಿದು ಬಿದ್ದು ಸಂಪೂರ್ಣ ಗಿಡವೇ ಹಾಳಾಗುತ್ತಿವೆ. ಇತ್ತೀಚೆಗಿನ ಮಳೆ ಮತ್ತು ವಾತಾವರಣದಲ್ಲಿನ ಹವಾಮಾನ ವೈಪರೀತ್ಯ ಕೂಡಾ ಇನ್ನೊಂದು ಕಾರಣ ಎಂದು ಗುಳ್ಳ ಬೆಳೆಗಾರರು ಅಭಿಪ್ರಾಯ ಪಟ್ಟಿದ್ದಾರೆ.[ಮೀನು ಕೃಷಿಗೆ ಗಾಳ ಹಾಕಿದ ಕಲಬುರಗಿ ರೈತ ಮಹಿಳೆ]
ಸದ್ಯ ಮಟ್ಟುಗುಳ್ಳಕ್ಕೆ ಮಾರುಕಟ್ಟೆಯಲ್ಲಿ ಕೆ.ಜಿ ಗೆ 90-100 ರೂ ಇದ್ದರೆ ರೈತರಿಗೆ ಪ್ರತೀ ಕೆ.ಜಿ ಗೆ 60 ರೂ ಸಿಗುತ್ತಿದೆ. ಇದು ಉತ್ತಮ ಬೆಲೆ ಧಾರಣೆಯಾಗಿದ್ದರೂ ಕಾಂಡಕೊರಕ ಮತ್ತು ಹುಳ ಬಾಧೆಯಿಂದ ಇಳುವರಿ ಕುಸಿತಗೊಂಡಿದ್ದು ಬೆಲೆ ಇದ್ದರೂ ಬೆಳೆ ಇಲ್ಲದಂತಾಗಿದೆ. ಒಟ್ಟಿನಲ್ಲಿ ಹೀಗೆ ಸಮಸ್ಯೆ ಮುಂದುವರಿದರೆ ಈ ಬಾರಿ ಇಳುವರಿ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ.