ಮೃತ ಪ್ರಾಣಿಗಳ ಆತ್ಮಕ್ಕೆ ಮುಕ್ತಿ ಕಾಣಿಸುವ ಬಂಧುವೇ ಉದಯಗಟ್ಟಿ
ಮನುಷ್ಯರು ಸತ್ತರೇನೇ ತಿರುಗಿ ನೋಡದೆ ಏನೆನೋ ಹಲುಬುತ್ತಾ ಹೋಗುವ ಮಂದಿಯೇ ಹೆಚ್ಚು ಈ ಜಗತ್ತಿನಲ್ಲಿ. ಇನ್ನೂ ಸತ್ತ ಪ್ರಾಣಿಗಳ ಕಡೆಗೆ ನೋಡ್ತಾರಾ? ಪ್ರಾಣಿಗಳು ಸತ್ತಿದ್ದಲ್ಲಿ ಮೂಗು ಮುಚ್ಚಿಕೊಂಡು, ಗಬ್ಬು ವಾಸನೆ ಎಂದು ಮುನಿಸಿಪಾಲಿಟಿಯವರು ಕತ್ತೆ ಕಾಯುತ್ತಿದ್ದಾರಾ ಎಂದು ಅಲ್ಲಿನ ಕೆಲಸಗಾರರನ್ನು ಬೈಯುತ್ತಾ ಹೋಗ್ತಾರೆಯೇ ವಿನಃ ಅದನ್ನು ಎತ್ತಿ ಸಂಸ್ಕಾರ ಮಾಡೋಣ ಎನ್ನುವ ಯೋಚನೆಯನ್ನು ಯಾರು ಮಾಡುವುದಿಲ್ಲ. ಆದರೆ ಇಲ್ಲೊಬ್ಬರು ಈ ಪ್ರವೃತ್ತಿಯಿಂದ ದೂರ ನಿಂತಿದ್ದಾರೆ.
ಕಳೆದ ಮೂವತ್ತು ವರುಷಗಳಿಂದ ಸಮಾಜಕ್ಕೆ ತನ್ನದೇ ಆದ ವಿಶಿಷ್ಟ ಸೇವೆಯನ್ನು ನೀಡುತ್ತಾ ಬಂದಿರುವ ಉದಯಗಟ್ಟಿ ಅವರು ಪ್ರಾಣಿಪ್ರಿಯರು, ಪರಿಸರದ ಬಗ್ಗೆ ಅಪಾರ ಕಾಳಜಿ ಭರಿತ ವ್ಯಕ್ತಿ. ಇವರು ಮಂಗಳೂರಿನ ಸೋಮೇಶ್ವರ ಗ್ರಾಮದ ಪಿಲಾರಿನಲ್ಲಿ ವಾಸವಾಗಿದ್ದಾರೆ. ಆರ್ಥಿಕವಾಗಿ ಅಷ್ಟೊಂದು ಅನುಕೂಲಸ್ಥರಲ್ಲದಿದ್ದರೂ ಪರಿಸರ ಕಾಳಜಿ ವಿಷಯದಲ್ಲಿ ಶ್ರೀಮಂತಿಕೆ ಮೆರೆದಿದ್ದಾರೆ.
ಮೂಕ ಪ್ರಾಣಿಗಳ ಬದುಕಿನ ಜೊತೆಗೆ ಪರಿಸರ ಕಾಳಜಿ ಮೆರೆದ ಉದಯಗಟ್ಟಿ ಅವರು ಪರಿಸರಕ್ಕೆ ನೀಡುತ್ತಿರುವ ಕೊಡುಗೆಯೇನು? ಪರಿಸರವೇ ಬದುಕು ಎಂದು ತಿಳಿದಿರುವ ಅವರ ಮನದಾಳದ ಮಾತುಗಳೇನು ಎಂದು ತಿಳಿಯೋಣ. ಅವರ ಸಮಾಜ ಸೇವೆಯನ್ನು ನಾವು ಮೈಗೂಡಿಸಿಕೊಳ್ಳೋಣ. ಏನಂತಿರಾ?[ಮೂಕ ಜೀವಗಳಿಗೆ ನೀರುಣಿಸುವ ಮೈಸೂರು ಭಗೀರಥರು...]
ಉದಯಗಟ್ಟಿ ಮಾಡುವ ಸಮಾಜ ಸೇವೆ ಏನು
ಮೂಕ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ ಉದಯ್ ಅವರು ಹೆದ್ದಾರಿಗಳಲ್ಲಿ ರಸ್ತೆ ಅಪಘಾತದಿಂದಲೋ, ಯಾವುದೋ ರೋಗಕ್ಕೆ ತುತ್ತಾಗಿಯೋ ಸಾವನ್ನಪ್ಪುವ ಶ್ವಾನಗಳನ್ನು ಯಾವುದೇ ಫಲಾಪೇಕ್ಷೆ ಬಯಸದೆ, ಸತ್ತ ಪ್ರಾಣಿಗಳ ಮೇಲೂ ನಿರ್ಲಕ್ಷ್ಯ ಭಾವ ತಾಳದೆ ಅಂತ್ಯ ಸಂಸ್ಕಾರ ಮಾಡಿ ಪರಿಸರ ಕಾಳಜಿ ಮೆರೆದಿದ್ದಾರೆ.
ಪ್ರಾಣಿಗಳ ಪಾಲಿಗೆ ನಲ್ಮೆಯ ವೈದ್ಯರೂ ಕೂಡ
ರಸ್ತೆಯಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ನಾಯಿ ಇನ್ನಿತರ ಪ್ರಾಣಿಗಳು ಸತ್ತು ಹೋದ ಬಗ್ಗೆ ತಿಳಿದಾಕ್ಷಣವೇ ಸ್ಥಳಕ್ಕೆ ತೆರಳಿ ಪ್ರಾಣಿಗಳ ಕೊಳೆತ ಕಳೇಬರಗಳನ್ನು ಮಣ್ಣು ಮಾಡುತ್ತಾರೆ. ಅಕಸ್ಮಾತ್ ಅಪಘಾತಕ್ಕೀಡಾಗಿ ಭಾರೀ ಗಾಯಗಳಾಗಿದ್ದರೆ ಅದಕ್ಕೆ ಚಿಕಿತ್ಸೆ ನೀಡಿ ಮತ್ತೆ ಚಟುವಟುಟಿಕೆಯಿಂದ ಓಡಾಡುವಂತೆ ಮಾಡಿ ಪ್ರಾಣಿಗಳ ಪಾಲಿಗೆ ನಲ್ಮೆಯ ವೈದ್ಯರಾಗಿದ್ದಾರೆ.
ಉದಯಗಟ್ಟಿಯವರ ಮನದ ಇಂಗಿತವೇನು?
ಪರಿಸರ ಸ್ವಚ್ಚತೆಯ ಬಗ್ಗೆ ಬುದ್ಧಿ ತಿಳಿದಾಗಿನಿಂದಲೂ ಕಾಳಜಿ ಹುಟ್ಟಿತ್ತು ಅದು ಇಂದಿಗೂ ಬೆಳೆದು ಬಂದಿದೆ. ನನ್ನ ಮನದಾಳದಲ್ಲಿ ಬೇರು ಬಿಟ್ಟಿದ್ದ ಸ್ವಚ್ಚತಾ ಭಾವನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಸ್ವಚ್ಚ ಭಾರತ ಅಭಿಯಾನವನ್ನಾಗಿ ಮಾರ್ಪಡಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಬದುಕಿನ ಅವಧಿಯಲ್ಲೊಮ್ಮೆ ಪ್ರದಾನಿಯನ್ನು ಭೇಟಿಯಾಗಿ ತನ್ನ ಮನಸ್ಸಿನಲ್ಲಿರುವ ಸ್ವಚ್ಚತಾ ಅಭಿಯಾನದ ಇಂಗಿತವನ್ನು ತಿಳಿಸುವ ಮಹದಾಸೆ ಇದೆ ಎಂದು ಗಟ್ಟಿ ಅವರು ಹೇಳುತ್ತಾರೆ.
ಉದಯಗಟ್ಟಿಯವರನ್ನು ಯಾವ ಯಾವ ಸಂಸ್ಥೆಗಳು ಸನ್ಮಾನಿಸಿವೆ?
ಉದಯ ಗಟ್ಟಿ ಅವರ ವಿಶೇಷ ಪರಿಸರ ಕಾಳಜಿಯನ್ನು ಗಮನಿಸಿದ ರೋಟರಿ ಕ್ಲಬ್,ಎಲ್ಐಸಿ ವಿಮಾ ಕಂಪನಿ ,ಕುಂಪಲ ಬಾಲಕೃಷ್ಣ ಮಂದಿರ ,ನಾಗರಿಕ ಹಿತ ರಕ್ಷಣಾ ವೇದಿಕೆ ಅಂಬಿಕಾರೋಡ್ ,ವಿಜಯಾಗೇಮ್ಸ್ ಟೀಮ್ ಪಂಡಿತ್ ಹೌಸ್ ,ಶಿರಡಿ ಸಾಯಿ ಬಾಬಾ ಮಂದಿರ ಮಾಡೂರು ,ಶ್ರೀಕೃಷ್ಣ ಸಮರ್ಪಣಾ ಸಮಿತಿ ತೊಕ್ಕೋಟು ,ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೀರಿ ಕೋಟೆಕಾರು ,ಇನ್ನಿತರ ಸಂಘ ಸಂಸ್ಥೆಗಳು ಗೌರವಿಸಿವೆ,
ಉದಯಗಟ್ಟಿಯವರ ರಾಜಕೀಯ ಯಾನ?
ತನ್ನ ಊರಾದ ಪಿಲಾರಿನಲ್ಲಿ ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಥಳೀಯ ಜನರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿ ಸೋಮೇಶ್ವರ ಪಂಚಾಯತನ್ನು ಪ್ರವೇಶಿಸಿದ್ದರು. ಉದಯ್ ಅವರಿಗೆ ಸೂಕ್ತ ಬೆಂಬಲ ದೊರಕಿದ್ದಲ್ಲಿ ಪರಿಸರ ಕಾಳಜಿ ಇನ್ನಷ್ಟು ಚುರುಕುಗೊಳಿಸಿ ಜಿಲ್ಲೆಯಾದ್ಯಂತ ಸ್ವಚ್ಚತೆ ಬಗ್ಗೆ ವಿನೂತನ ಯೋಜನೆಗಳನ್ನು ರೂಪಿಸುವ ಗುರಿಯಿಟ್ಟಿದ್ದಾರೆ.
ಮಂಗಳೂರು ಕನ್ನಡ ಕಟ್ಟೆಯೂ ಹೇಳಿದ್ದೇನು?
ಕಳೆದ ಕನ್ನಡ ರಾಜ್ಯೋತ್ಸವದಂದು ಡಾ.ಅಣ್ಣಯ್ಯ ಕುಲಾಲ್ ನೇತೃತ್ವದ ಮಂಗಳೂರಿನ ಕನ್ನಡ ಕಟ್ಟೆಯು ಉದಯ್ ಅವರಿಗೆ "ನಾಡನಾಯಕ "ಪ್ರಶಸ್ತಿ ಪ್ರದಾನಿಸಿ ಒಂದು ವರುಷದ ವರೆಗೆ ಗಟ್ಟಿ ಅವರ ಸಮಾಜ ಸೇವೆಗೆ ಸಾಥ್ ನೀಡುವುದಾಗಿ ಹೇಳಿದೆ. ಉದಯ ಅವರ ಸಾಧನೆಯನ್ನು ಅವರು ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಮುಖಂಡರು ಗುರುತಿಸುವ ಕಾರ್ಯವೂ ನಡೆಯಬೇಕಿದೆ.