ಸುಗಮ ಸಂಚಾರಕ್ಕೆ ಮಂಗಳೂರಿನಲ್ಲಿ ಬಸ್ ಬೇ ನಿರ್ಮಾಣ
ಬಸ್ ಬೇ ಎಂದರೆ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಲು ಪ್ರತ್ಯೇಕವಾಗಿ ನಿಗದಿಪಡಿಸಿಟ್ಟ ಜಾಗ. ರಸ್ತೆಯನ್ನು ಅರ್ಧವೃತ್ತಾಕಾರದಲ್ಲಿ ವಿಸ್ತರಿಸಲಾಗುತ್ತದೆ. ಇದರಲ್ಲಿ ಬಸ್ ನಿಲ್ಲಿಸಿದರೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ
ಮಂಗಳೂರು, ಏಪ್ರಿಲ್ 21: ಮಂಗಳೂರು ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ವಾಹನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ನಗರದಾದ್ಯಂತ 11 ಕಡೆಗಳಲ್ಲಿ ಸುಸಜ್ಜಿತ ಬಸ್ ಬೇ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಈ ಹಿನ್ನಲೆಯಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ನೇತೃತ್ವದಲ್ಲಿ ಶಾಸಕ ಜೆ.ಆರ್.ಲೋಬೋ, ಉಪಮೇಯರ್ ರಜನೀಶ್, ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಆಯುಕ್ತ ಮೊಹಮ್ಮದ್ ನಝೀರ್ ಅವರು ಇತ್ತೀಚೆಗೆ ಸ್ಥಳ ಸಮೀಕ್ಷೆ ಕೂಡಾ ನಡೆಸಿದ್ದಾರೆ. ನಗರದ ಪ್ರಮುಖ 11 ಸ್ಥಳಗಳಲ್ಲಿ ಬಸ್ ಬೇ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.[ಮಂಗಳೂರಿನಲ್ಲಿ ಮಗಳ ಮದುವೆ ಸಂಭ್ರಮದಲ್ಲಿ ಸಾವನ್ನಪ್ಪಿದ ತಾಯಿ]
ಏನಿದು ಬಸ್ ಬೇ ?
ಬಸ್ ಬೇ ನಿರ್ಮಾಣ ಎಂದರೆ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸುವ ಸಲುವಾಗಿ ಪ್ರತ್ಯೇಕವಾಗಿ ನಿಗದಿಪಡಿಸಿಟ್ಟ ಜಾಗ. ರಸ್ತೆಯನ್ನು ಅರ್ಧವೃತ್ತಾಕಾರದಲ್ಲಿ ವಿಸ್ತರಿಸಲಾಗುತ್ತದೆ. ಇದರಲ್ಲಿ ಬಸ್ ನಿಲ್ಲಿಸಿದರೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದು. ಬಸ್ ಬೇ ಆಗುವ ಜಾಗಕ್ಕೆ ಕಾಂಕ್ರೀಟು ಹಾಸುವುದರ ಜತೆಗೆ ಅಲ್ಲಿಯೇ ಸುಸಜ್ಜಿತ ಬಸ್ ಶೆಲ್ಟರ್ ನಿರ್ಮಿಸಲಾಗುತ್ತದೆ.
ಹಾಗಾದರೆ ಬಸ್ ಬೇ ಗೆ ಸೂಚಿಸಿದ ಸ್ಥಳ ಯಾವುದು ?
ಬಸ್ ಬೇ ನಿರ್ಮಿಸಲೆಂದು ಈಗಾಗಲೇ ಮಂಗಳೂರು ಮೇಯರ್ ನೇತೃತ್ವದಲ್ಲಿ ಸ್ಥಳ ಸಮೀಕ್ಷೆ ಕೆಲಸ ನಡೆದಿದ್ದು, ಈ ಸಮೀಕ್ಷೆಯಲ್ಲಿ ಬಲ್ಲಾಳ್ಬಾಗ್, ಕೆನರಾ ಕಾಲೇಜು ಹತ್ತಿರ, ಪಿವಿಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ, ಬಲ್ಮಠ, ಬೆಂದೂರ್ವೆಲ್, ಕಂಕನಾಡಿ, ಆ್ಯಗ್ನೆಸ್, ಶಿವ ಬಾಗ್, ನಂತೂರು ಬಳಿ ಸ್ಥಳ ಸೂಚಿಸಲಾಗಿದೆ.[ಗುದನಾಳದೊಳಗೆ ಚಿನ್ನವಿಟ್ಟುಕೊಂಡು ಸಾಗಿಸುತ್ತಿದ್ದವನ ಬಂಧನ]
ಈ ಬಸ್ ಬೇ ನಿರ್ಮಿಸುವ ಜಾಗದಲ್ಲಿ ಖಾಸಗಿ ಭೂಮಿ ಇದ್ದರೆ ಸಂಬಂಧಪಟ್ಟವರ ಜತೆ ಪಾಲಿಕೆ ವತಿಯಿಂದ ಮಾತುಕತೆ ನಡೆಸಲಾಗುತ್ತದೆ. ಇಕ್ಕಟ್ಟಾಗುವ ಸ್ಥಳದಲ್ಲಿ ಅಗತ್ಯಕ್ಕೆ ತಕ್ಕಂತೆ ಬಸ್ ಬೇ ನಿರ್ಮಿಸಲಾಗುತ್ತದೆ.
ಬಲ್ಲಾಳ್ಬಾಗ್ ಬಳಿಯ ಚಿನ್ನದ ಅಂಗಡಿಯ ಮುಂಭಾಗದ ಮರವನ್ನು ಉಳಿಸಿ ಹೊರಗಿನಿಂದ ಬಸ್ಬೇ ನಿರ್ಮಾಣ, ಪಿವಿಎಸ್ನಿಂದ ಬಂಟ್ಸ್ಹಾಸ್ಟೆಲ್ನಲ್ಲಿ ಹೋಗುವ ಸ್ಥಳದಲ್ಲಿರುವ ಬಸ್ ನಿಲ್ದಾಣವನ್ನು ರಿಕ್ಷಾ ಪಾರ್ಕ್ ಬಳಿ ತರುವುದು, ಬಂಟ್ಸ್ ಹಾಸ್ಟೆಲ್ ಈಗಿನ ನಿಲ್ದಾಣಕ್ಕಿಂತ ಮೊದಲು ಹೊಸ ಬಸ್ ಬೇ ನಿರ್ಮಿಸುವುದು ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೂಲಗಳು ತಿಳಿಸಿವೆ.
ಅಂದುಕೊಂಡಂತೆ 11 ಸ್ಥಳಗಳಲ್ಲಿ ಬಸ್ ಬೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಬಸ್ ಬೇ ಕಾಮಗಾರಿ ಆರಂಭಿಸಿ ಬಸ್ ಶೆಲ್ಟರ್ ನಿರ್ಮಿಸಲಾಗುವುದು ಎಂದು ಮನಪಾ ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.