2008ರ ಉಗ್ರ ಚಟುವಟಿಕೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ
2008ರಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ಪೈಕಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮಂಗಳೂರು, ಎಪ್ರಿಲ್ 12 : 2008ರಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ಮೂರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸೈಯದ್ ನೌಶದ್, ಮಹಮ್ಮದ್ ಬಾವಾ ಅಬೂಬಕ್ಕರ್, ಫಕೀರ್ ಅಹ್ಮದ್ ಎನ್ನುವ ಆರೀಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. 2008ರಲ್ಲಿ ಮುಂಬೈ ಎಟಿಎಸ್ ಮತ್ತು ಮಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಏಳು ಜನರನ್ನು ಬಂಧಿಸಲಾಗಿತ್ತು. ಏಳು ಜನರ ಪೈಕಿ ಮೂವರಿಗೆ ಶಿಕ್ಷೆ ಪ್ರಮಾಣ ಘೋಷಣೆಯಾಗಿದೆ.[ಉಳ್ಳಾಲದಲ್ಲಿ ಶಂಕಿತ ಉಗ್ರ ಚಟುವಟಿಕೆ ಪ್ರಕರಣದ ತೀರ್ಪು ಪ್ರಕಟ]
ಇದರಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶೆ ಪುಷ್ಪಾಂಜಲಿ ನಾಲ್ವರನ್ನ ದೋಷಮುಕ್ತರೆಂದು ಘೋಷಿಸಿದ್ದರು. ಮುಹಮ್ಮದ್ ಅಲಿ, ಅವರ ಪುತ್ರ ಜಾವೆದ್ ಅಲಿ, ಶಬೀರ್ ಹಾಗೂ ರಫೀಕ್ ಎಂಬುವವರು ದೋಷ ಮುಕ್ತರಾದವರು.
ಇವರನ್ನ ಶಂಕಿತ ಭಯೋತ್ಪಾದನೆ ಚಟುವಟಿಕೆ ಆರೋಪದಲ್ಲಿ 2008ರಲ್ಲಿ ಮಂಗಳೂರಿನ ವಿವಿಧೆಡೆ ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 62 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು.
ಬಂಧಿತರ ವಿರುದ್ಧ ದೇಶದ್ರೋಹದ ಪಿತೂರಿ, ವಿಧ್ವಂಸಕ ಕೃತ್ಯಕ್ಕೆ ಸಂಚು ಮತ್ತಿತರ ಕೇಸ್ ದಾಖಲಿಸಲಾಗಿತ್ತು.