ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವತಿಗೆ ರಕ್ಷಣೆ ನೀಡಿದ ತಾ.ಪಂ. ಅಧ್ಯಕ್ಷ, ಪತ್ರಕರ್ತರು
ಮಂಗಳೂರು, ಜನವರಿ. 17 : ಬಿಸಿಲ ಧಗೆಗೆ ಬಳಲಿ ತಲೆ ತಿರುಗಿ ಬಿದ್ದು ರಸ್ತೆ ಬದಿ ಒದ್ದಾಡುತ್ತಿದ್ದ ಯುವತಿಯೋರ್ವೆಯನ್ನು ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮತ್ತು ಪತ್ರಕರ್ತರು ರಕ್ಷಿಸಿ ಮನೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ಕೊಣಾಜೆಯ ಅಸೈಗೋಳಿ ಸಮೀಪದ ಗಣೇಶ್ ಮಹಲ್ ಬಳಿ 28 ವರ್ಷದ ಯುವತಿಯು ನಡೆದುಕೊಂಡು ಹೋಗುತ್ತಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕಾನೂನು ಅಡ್ಡಿಯಾಗುವುದೆಂಬ ಭಯದಿಂದ ವಾಹನ ಸವಾರರಾಗಲಿ, ಪಾದಚಾರಿಗಳಾಗಲಿ ಆಕೆಯನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಲಿಲ್ಲ.
ಇನ್ನೊಂದೆಡೆ ಯುವತಿ ಸಮುದಾಯದವರು ಅಡ್ಡಿಯಾಗುವುದೆಂಬ ಭೀತಿಯಿಂದ ಹಲವರು ಒಂದು ಕ್ಷಣ ವಾಹನ ನಿಲ್ಲಿಸಿದರೂ ಮತ್ತೆ ಆಕೆಯನ್ನು ನೋಡಿ ಸ್ಥಳದಿಂದ ಕಾಲ್ಕಿತ್ತಿದ್ದರು.[ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಆಪತ್ಬಾಂಧವರಾದ ಸಚಿವ ಖಾದರ್]
ಈ ನಡುವೆ ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಅವರು ತಮ್ಮ ಸರಕಾರಿ ವಾಹನದಲ್ಲಿ ಇದೇ ರಸ್ತೆಯಲ್ಲಿ ಬರುತ್ತಿದ್ದರು.
ರಸ್ತೆಯಲ್ಲಿ ಬಿದಿದ್ದ ಯುವತಿಯನ್ನು ಕಂಡ ಅವರು ವಾಹನವನ್ನು ನಿಲ್ಲಿಸಿ ಯುವತಿಯ ಮಾಹಿತಿ ಕೇಳಿದರೂ ಆಕೆ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ.
ಇದರಿಂದ ಸಮೀಪದ ಬಸ್ಸು ನಿಲ್ದಾಣಕ್ಕೆ ತಾಪಂ ಅಧ್ಯಕ್ಷರು ಸಹಿತ ಇತರರು ಕರೆತಂದು ನೀರು ಕುಡಿಸಿದರು. ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದರು.
ತಕ್ಷಣ ಸ್ಥಳಕ್ಕೆ ಓರ್ವ ಪೊಲೀಸ್ ಪೇದೆ ಆಗಮಿಸಿದ್ದರಿಂದಾಗಿ ಯುವತಿಯನ್ನು ಮನೆಗೆ ಸೇರಿಸಲು ಅಸಾಧ್ಯವಾಗಿತ್ತು. ಅದರಂತೆ ಪೊಲೀಸ್ ಪೇದೆಯನ್ನು ತಮ್ಮ ವಾಹನದ ಜತೆಗೆ ಬರುವಂತೆ ತಿಳಿಸಿ ಯುವತಿಯನ್ನು ಅಸೈಗೋಳಿ ಸಮೀಪದ ಮನೆಗೆ ತಲುಪಿಸಿ ಮಾನವೀಯತೆ ಮೆರೆದರು.
ತಾ.ಪಂ. ಅಧ್ಯಕ್ಷರ ಜೊತೆ ಪತ್ರಕರ್ತರೂ ಸಹ ಯುವತಿಯನ್ನು ಮನೆ ಸೇರಿಸುವಲ್ಲಿ ಸಹಕರಿಸಿದರು.