ಮಂಗಳೂರು ಮುಸ್ಲಿಂ ಮಹಿಳಾ ಸಮಾವೇಶದಲ್ಲಿ ಮೋದಿ ವಿರುದ್ಧ ಆಕ್ರೋಶ
ಮಂಗಳೂರು, ಡಿಸೆಂಬರ್, 20 : ಶರಿಯತ್ ಕಾನೂನು ನಿನ್ನೆ ಮೊನ್ನೆ ಬಂದ ಕಾನೂನಲ್ಲ. ಇದಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಇಸ್ಲಾಂ ನಮ್ಮ ಧರ್ಮ. ಅದನ್ನು ತಿದ್ದುಪಡಿ ಮಾಡುವ ಅಧಿಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಗಿಲ್ಲ ಎಂದು ಯುನಿವೆಫ್ ವುಮೆನ್ ವಿಂಗ್ ನ ಯು.ಸುನೈನಾ ಆಸೀಫ್ ಹೇಳಿದರು.
ಮಂಗಳವಾರ ಮಂಗಳೂರಿನ ಪುರಭವನದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ದಕ್ಷಿಣ ಕನ್ನಡ, ಉಡುಪಿಯ ವಿವಿಧ ಮುಸ್ಲಿಂ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬೃಹತ್ ಶರಿಯತ್ ಸಂರಕ್ಷಣಾ ಮಹಿಳಾ ಸಮಾವೇಶದಲ್ಲಿ 'ಭಾರತದಲ್ಲಿ ಮುಸ್ಲಿಂ ಮಹಿಳೆಯರ ಸ್ಥಿತಿಗತಿ' ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು,
'ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ನಲ್ಲಿರುವ ಆದೇಶಗಳನ್ನ ಬದಲಾಯಿಸುವ ಹಕ್ಕು ಕೇವಲ ಅಲ್ಲಾಹನಿಗಿದೆ ಹೊರೆತು ಬೇರೆ ಯಾರಿಗೂ ಈ ಅಧಿಕಾರ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೊಹರಾ ಅಬ್ಬಾಸ್ ವಹಿಸಿದ್ದರು. ನಸ್ರೀಯಾ ಬೆಳ್ಳಾರೆ, ಹಫೀಜಾ ಪ್ರಾಸ್ತಾವಿಕ ಮಾತನ್ನಾಡಿದರು. ಹುದಾ ಅಬ್ದುಲ್ ರಹ್ಮಾನ್ ಕಿರಾಅತ್ ಪಠಿಸಿದರು.
'ತಲಾಖ್ ಕಾನೂನು' ವಿಷಯದಲ್ಲಿ ಸಲಫಿ ಗರ್ಲ್ಸ್ ಆಂಡ್ ವುಮೆನ್ಸ್ ಮೂವ್ ಮೆಂಟ್ ನ ಮುಮ್ತಾಜ್ ಬಿಂತ್ ಶಂಸುದ್ದೀನ್ , 'ಯೂನಿಫರ್ಮ್ ಸಿವಿಲ್ ಕೋಡ್' ವಿಷಯದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ವುಮೆನ್ಸ್ ವಿಂಗ್ ನ ಸಬೀಹಾ ಫಾತಿಮಾ,
'ಫ್ಯಾಮಿಲಿ ಲೈಫ್ ಇನ್ ಇಸ್ಲಾಂ' ಎಂಬ ವಿಷಯದಲ್ಲಿ ಮರಿಯಂ ಶಫೀನಾ, 'ಇಸ್ಲಾಂ ಆಂಡ್ ವುಮೆನ್ ವಿಷಯದಲ್ಲಿ ಅಲ್ ಹಕ್ ಫೌಂಡೇಶನ್ ನ ವುಮೆನ್ಸ್ ವಿಂಗ್ ನ ಮಸೀರಾ ಅಬ್ದುಲ್ ಲತೀಫ್ ಭಾಷಣ ಮಾಡಿದರೆ, 'ತಲಾಖ್ ಇನ್ ಇಸ್ಲಾಂ ' ಎಂಬ ವಿಷಯದಲ್ಲಿ ಎಚ್ ಐಎಫ್ ವುಮೆನ್ ವಿಂಗ್ ನ ರೈಹಾನ ಬಿಂತ್ ಹಕೀಂ ವಿಚಾರ ಮಂಡಿಸಿದರು.
ಹಾಗೆಯೇ 'ದಿ ಸೆಕ್ಯುಲರ್ ಇಂಡಿಯಾ ಆಂಡ್ ವುಮೆನ್ 'ಎಂಬ ವಿಷಯದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ನ ಶಾಹೀದಾ ಅಸ್ಲಾಂ ಹಾಗೂ ಹಿದಾಯ ಅರೇಬಿಕ್ ಟೀಚರ್ಸ್ ಟ್ರೈನಿಂಗ್ ಸೆಂಟರ್ ನ ಶಹನಾಝ್ ಅಹ್ಮದ್ 'ಸ್ಟೇಟಸ್ ಆಫ್ ವುಮೆನ್ ಇನ್ ಇಸ್ಲಾಂ' ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.
ಮುಮ್ತಾಜ್ ಉಳ್ಳಾಲ ಧನ್ಯವಾದ ಸಲ್ಲಿಸಿದರು. ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು. ಅಲ್ಲದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.