ಹಿಂಬದಿ ಸವಾರರಿಗೂ ಹೆಲ್ಮೆಟ್, ಮಂಗ್ಳೂರಿಗರು ಏನು ಹೇಳಿದ್ರು?
ಮಂಗಳೂರು, ಜನವರಿ,07: ಬೈಕಿನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ನೀತಿಯನ್ನು ರಾಜ್ಯ ಸರ್ಕಾರ ಜನವರಿ 20ರೊಳಗೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೊಸ ಹೆಲ್ಮೆಟ್ ನೀತಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರ ಸಹಿತ ಇಬ್ಬರು ಪ್ರಯಾಣಿಸುವುದು ಸಾಮಾನ್ಯ. ಇಬ್ಬರಿಗೂ ಹೆಲ್ಮೆಟ್ ಕೊಂಡೊಯ್ಯುವುದು ಗಲಿಬಿಲಿಗೆ ಕಾರಣವಾಗುತ್ತದೆ. ಟ್ರಾಫಿಕ್ ಜಾಂ ಮತ್ತು ಬೇಸಿಗೆ ಕಾಲ ಪ್ರಯಾಣಿಕರಿಗೆ ಹಿಂಸೆ ತಂದೊಡ್ಡುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.[ಶಿರಸ್ತ್ರಾಣ ಕಡ್ಡಾಯ: ಗ್ರಾಹಕರಿಗೆ ಹೆಲ್ಮೆಟ್ ದರ ಏರಿಕೆ ಭಾಗ್ಯ!]
ದ್ವಿಚಕ್ರ ವಾಹನದಲ್ಲಿ ಒಂದು ಹೆಲ್ಮೆಟ್ ಇಟ್ಟುಕೊಳ್ಳಲು ಜಾಗವಿದೆ. ಆದರೆ ಇನ್ನೊಂದು ಹೆಲ್ಮೆಟ್ ಗೆ ಜಾಗವಿರುವುದಿಲ್ಲ. ಅಂತಹವರು ಇನ್ನೊಂದು ಹೆಲ್ಮೆಟ್ ವಾಹನಕ್ಕೆ ತೂಗುಹಾಕಬೇಕಾಗುತ್ತದೆ. ಆಗ ಪಾರ್ಕ್ ಮಾಡಲಾದ ಜಾಗದಿಂದ ಹೆಲ್ಮೆಟ್ ಕಳೆದುಹೋಗುವ ಸಾಧ್ಯತೆ ಇರುತ್ತದೆ. ಹೀಗೆ ಹಲವಾರು ಅಭಿಪ್ರಾಯಗಳಿವೆ.
ಹೊಸ ಹೆಲ್ಮೆಟ್ ನೀತಿ ಕುರಿತು ಸಾರ್ವಜನಿಕರ ಅಭಿಪ್ರಾಯ:
* ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಗೆ 1000 ರೂ. ನಿಂದ 5000 ರೂ. ವರೆಗೆ ಬೆಲೆ ಇದೆ. ಇಂತಹ ಹೆಲ್ಮೆಟ್ ಕಳುವಾದರೆ ಮತ್ತೊಂದು ಹೆಲ್ಮೆಟ್ ಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಹೆಲ್ಮೆಟ್ ಬೆಲೆ ದುಬಾರಿಯಾಗಿರುವುದೇ ಇದಕ್ಕೆ ಕಾರಣ ಎಂದು ಹಲವಾರು ಮಂದಿ ಹೇಳಿದ್ದಾರೆ.[ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ: ಬೇಕಾ? ಬೇಡ್ವಾ?]
* ಕೆಲವು ಹೆಲ್ಮೆಟ್ ಗಳಲ್ಲಿ ಮೊಬೈಲ್ಗೆ ಬ್ಲೂಟೂತ್ ಸಂಪರ್ಕದ ವ್ಯವಸ್ಥೆ ಹಾಗೂ ಇತರ ಪ್ರಯೋಜನವಿರುವ ಹೆಲ್ಮೆಟ್ ಗಳಿರುತ್ತವೆ. ಇಂತಹ ಬೆಲೆಬಾಳುವ ಹೆಲ್ಮೆಟ್ ಗಳನ್ನು ದ್ವಿಚಕ್ರ ವಾಹನದಲ್ಲಿ ತೂಗುಹಾಕಿ ಹೋಗಲು ಸಾಧ್ಯವಿದೆಯೇ ಎಂಬುದು ಬಳಕೆದಾರರ ಪ್ರಶ್ನೆಯಾಗಿದೆ.
* ಸೂಪರ್ ಕಂಪ್ಯೂಟರ್ ಎಂಬ ಮೆದುಳಿಗೆ ರಕ್ಷಣೆ ನೀಡಲೇಬೇಕು. ಆದ್ದರಿಂದ ದ್ವಿಚಕ್ರ ವಾಹನಿಗರು, ಹಿಂಬದಿ ಪ್ರಯಾಣಿಕರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಬೇಕು ಎಂಬುದು ಹಲವರ ಮಾತಾಗಿದೆ.[ಹುಬ್ಬಳ್ಳಿ ಬೈಕ್ ಸವಾರರಿಗೆ ಪೊಲೀಸರ ಭಯ]
* ಹೆಲ್ಮೆಟ್ ರಕ್ಷಣೆ ಒದಗಿಸುತ್ತದೆ ಎಂಬುದು ನಿಜವಾಗಿದ್ದರೂ ಟ್ರಾಫಿಕ್ ಜಾಂ, ಬೇಸಿಗೆಯಲ್ಲಿ ಸವಾರಿಗೆ ಸಮಸ್ಯೆ ತಂದೊಡ್ಡುತ್ತದೆ. ಬಳ್ಳಾರಿ , ಕಲಬುರ್ಗಿ , ರಾಯಚೂರು, ಚಿತ್ರದುರ್ಗ ಮತ್ತು ಕರಾವಳಿ ಪ್ರಾಂತ್ಯದಲ್ಲಿ ಉಷ್ಣಾಂಶ ಹೆಚ್ಚು ಇರುವುದರಿಂದ ಹೆಲ್ಮೆಟ್ ಕಡ್ಡಾಯ ನೀತಿಯಲ್ಲಿ ಒಂದಷ್ಟು ಸಡಿಲಿಕೆ ಅಗತ್ಯವೆಂಬುದು ಈ ಭಾಗದ ಮಂದಿಯ ಅಭಿಪ್ರಾಯವಾಗಿದೆ.