ಮಂಗಳೂರು: ಖುರೇಶಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ - ಕೋರ್ಟ್
ಕಳೆದ ಹಲವು ದಿನಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಸಂಘರ್ಷದ ಕೇಂದ್ರ ಬಿಂದು, ಬಂಧಿತ ಆರೋಪಿ ಅಹ್ಮದ್ ಖುರೇಶಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಆದೇಶ ನೀಡಿದೆ.
ಮಂಗಳೂರು, ಏಪ್ರಿಲ್ 6: ಕಳೆದ ಹಲವು ದಿನಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಸಂಘರ್ಷದ ಕೇಂದ್ರ ಬಿಂದು, ಬಂಧಿತ ಆರೋಪಿ ಅಹ್ಮದ್ ಖುರೇಶಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಆದೇಶ ನೀಡಿದೆ.
ಅಹ್ಮದ್ ಖುರೇಶಿ ಜಿಲ್ಲಾ ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಿಸಿಬಿ ಪೊಲೀಸರ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಇದೀಗ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಇಲ್ಲಿನ ಎರಡನೆ ಜೆಎಂಎಫ್ಸಿ ನ್ಯಾಯಾಲಯ ಗುರುವಾರ ಬೆಳಗ್ಗೆ ಆದೇಶ ನೀಡಿದೆ.[ಮಂಗಳೂರು: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್, 100 ಜನ ವಶಕ್ಕೆ]
ಘಟನೆ ಹಿನ್ನಲೆ :
ವರ್ಷಕ್ಕೂ ಹಿಂದಿನ ಹಿಂದೂ ನಾಯಕನ ಕೊಲೆ ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರು ಮಾರ್ಚ್ 21 ರಂದು ಅಹ್ಮದ್ ಖುರೇಶಿಯನ್ನು ಬಂಧಿಸಿದ್ದರು. ನಂತರ ಈತನ ಮೇಲೆ ದೌರ್ಜನ್ಯ ಎಸಗಿದ್ದರ ಪರಿಣಾಮ ಕಿಡ್ನಿ ವೈಫಲ್ಯಗೊಂಡು ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ.
ಸದ್ಯ ಖುರೇಷಿಯ ಆರೋಗ್ಯ ಸ್ಥಿತಿಗೆ ನಗರದ ವೆನ್ಲಾಕ್ನಲ್ಲಿ ಸೌಲಭ್ಯಗಳು ಹಾಗೂ ವೈದ್ಯರು ಅಲಭ್ಯರಾಗಿರುವುದರಿಂದ ಖಾಸಗಿ ಆಸ್ಪತ್ರೆಗೆ ಸೇರಿಸಲು ಅನುವು ಮಾಡಿಕೊಂಡಬೇಕೆಂದು ಖುರೇಶಿ ಪರ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.['ಅನುಮತಿ ಇಲ್ಲದೇ ಪ್ರತಿಭಟಿಸಿದ್ದಕ್ಕೆ ಲಾಠಿಚಾರ್ಜ್' - ಪೊಲೀಸ್ ಆಯುಕ್ತರ ಸ್ಪಷ್ಟನೆ]
ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಕುಂದರ್ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಪ್ರಕರಣದ ತನಿಖಾಧಿಕಾರಿಯವರು ಖುರೇಶಿಯ ಭದ್ರತೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು, ಖುರೇಶಿಯವರ ಆರೋಗ್ಯದ ಬಗ್ಗೆ ನ್ಯಾಯಾಲಯಕ್ಕೆ ಆಗಾಗ್ಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಅಹ್ಮದ್ ಖುರೇಶಿ ಮೇಲೆ ಸಿಸಿಬಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಂಗಳವಾರ ಮಂಗಳೂರು ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದರು. ಇದರಲ್ಲಿ 11 ಪೊಲೀಸರು, 65ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದರು. 98 ಕಾರ್ಯಕರ್ತರನ್ನು ಬಂಧಿಸಲಾಗಿತ್ತು.