ಶಾಲೆಗೆ ಬೀಗ ಹಾಕಿ ಧಿಕ್ಕಾರ ಕೂಗಿದ ಮಂಗಳೂರಿನ ಮಕ್ಕಳು
ಮಂಗಳೂರು, ಆಗಸ್ಟ್ 13: ರಾಜ್ಯ ಸರಕಾರವು ಹೆಚ್ಚುವರಿ ಶಿಕ್ಷಕರ ಮರು ಯೋಜನೆ ಹೆಸರಿನಲ್ಲಿ ಶಿಕ್ಷಕರ ಸಂಖ್ಯೆ ಕಡಿತಗೊಳಿಸುವ ಆದೇಶ ಜಾರಿಗೊಳಿಸಿದ್ದನ್ನು ವಿರೋಧಿಸಿ ಶುಕ್ರವಾರ ಜಿಲ್ಲೆಯ ವಿವಿಧೆಡೆ ಪ್ರಾಥಮಿಕ ಸರಕಾರಿ ಶಾಲೆಗಳನ್ನು ಬಂದ್ ಮಾಡಿ, ಪ್ರತಿಭಟಿಸಲಾಯಿತು.
ಮರಕಡದಲ್ಲಿ 300ಕ್ಕೂ ಹೆಚ್ಚು ಮಕ್ಕಳು ಶಾಲೆಯ ಗೇಟ್ ಗೆ ಬೀಗ ಹಾಕಿ ಪ್ರತಿಭಟಿಸಿದರು. ಬೈಕಂಪಾಡಿ ಶಾಲೆಯ ಮಕ್ಕಳು ಶಾಸಕ ಮೊಯ್ದೀನ್ ಬಾವ ಕಾರಿಗೆ ಮುತ್ತಿಗೆ ಹಾಕಿ, ವರ್ಗಾವಣೆ ಮಾಡಿರುವ ಶಿಕ್ಷಕರನ್ನು ಮರು ನಿಯೋಜನೆ ಮಾಡುವಂತೆ ಆಗ್ರಹಿಸಿದರು. ಕುತ್ತಾರು ಪ್ರದೇಶದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಬಂದ್ ನಡೆಸಿ, ಶಾಲೆಗೆ ಬೀಗ ಜಡಿದರು. [ಮಂಗಳೂರು ಪೊಲೀಸರಿಗೆ ತುಳು ಜೊತೆ ಬ್ಯಾರಿ ಭಾಷೆಯೂ ಗೊತ್ತು]
ಮೂಡುಶೆಡ್ಡೆಯಲ್ಲಿ ಪೋಷಕರೇ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆಗೆ ಸಹಕಾರ ನೀಡಿದರು. ಆಮ್ಲಮೊಗರು ಸರಕಾರಿ ಶಾಲೆ ವಿದ್ಯಾರ್ಥಿಗಳು ಬಂದ್ ನಡೆಸಿದರು. ಹರೇಕಳ ಹಾಜಬ್ಬರ ನ್ಯೂ ಪಡ್ಪು ಸರಕಾರಿ ಶಾಲೆ, ಎಲ್ಯಾರ್ ಪದವು, ಕಲ್ಕಟ್ಟಾ, ಬೆಂಗ್ರೆ, ಅಡ್ಡೂರು, ಮಂಜನಾಡಿ, ಉರುಮನೆ, ಉಲೈಬೆಟ್ಟು, ಪಿಲಾರ್, ಕುಂಪಲ, ಕಣ್ಣೂರು, ಬಜಾಲ್ ಹಾಗೂ ಇತರ ಅನೇಕ ಶಾಲೆಗಳ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. [ಕುಮಾರಧಾರಾ ನದಿಗೆ ಬಿದ್ದ ಟ್ಯಾಂಕರ್, ಪರದಾಡಿದ ಪ್ರಯಾಣಿಕರು]
ಶಿಕ್ಷಕರ ಸಂಖ್ಯೆಯನ್ನು ಕಡಿತ ಮಾಡಿ, ವರ್ಗಾವಣೆ ಮಾಡುವ ರಾಜ್ಯ ಸರಕಾರಕ್ಕೆ ಧಿಕ್ಕಾರ ಎಂದು ಕೂಗಿದ ವಿದ್ಯಾರ್ಥಿಗಳು, ಎಲ್ಲ ವಿಷಯಗಳಿಗೆ ಕನಿಷ್ಠ ಒಬ್ಬೊಬ್ಬ ಶಿಕ್ಷಕರನ್ನಾದರೂ ನೇಮಿಸಬೇಕು. ಮಕ್ಕಳ ಶಿಕ್ಷಣದ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಸಮಾನ ಮನಸ್ಕ ಸಂಘಟನೆ ಹಾಗೂ ಶಾಲೆಯ ಎಸ್ ಡಿಎಂಸಿ ಸದಸ್ಯರು, ಪೋಷಕರು ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್ ನೀಡಿದರು.