ರಾಜ್ಯದ ಮೊದಲ ಪೊಲೀಸ್ ಜಾಗೃತಿ ವಾಹನ ಮಂಗಳೂರಲ್ಲಿ ಕೆಲಸ ಶುರು
ಮಂಗಳೂರು, ಜನವರಿ 7: ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ಜನ ಜಾಗೃತಿ ಪರಿಣಾಮಕಾರಿ ಕ್ರಮ ಎಂಬ ಕಾರಣಕ್ಕೆ ಮಂಗಳೂರು ಪೊಲೀಸ್ ಕಮಿಷನರೇಟ್, ಸೀಮಿತ ವ್ಯಾಪ್ತಿಯಲ್ಲಿ ಜಾಗೃತಿ ವಾಹನ ಕಾರ್ಯಾಚರಣೆ ಆಯೋಜಿಸಿದೆ. ಜಾಗೃತಿ ವಾಹನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ ಮಾತನಾಡಿ, ಅಪರಾಧಗಳನ್ನು ತಡೆಯುವಲ್ಲಿ ಜನರ ಪಾತ್ರ ಮಹತ್ತರವಾಗಿದೆ. ಯಾರೋ ಫೋನ್ ಮಾಡಿ, ಬ್ಯಾಂಕ್ ಖಾತೆ ವಿವರ ಕೇಳಿದಾಕ್ಷಣ ಕೊಟ್ಟು ಬಿಡುವುದಲ್ಲ. ನೇರ ಬ್ಯಾಂಕ್ ಗೆ ಹೋಗಿ ಪರಿಶೀಲಿಸಬೇಕು. ನಕಲಿ ಕರೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಬೇಕು. ಒಂದು ತಿಂಗಳು ಸುತ್ತಾಡಲಿರುವ ಈ ವಾಹನ ಜನರಲ್ಲಿ ಜಾಗೃತಿ ಮೂಡಿಸುವ ವಿಶ್ವಾಸವಿದೆ ಎಂದರು.[ಹರಿದ್ವಾರ: ಸುಧೀಂದ್ರ ತೀರ್ಥರ ವೈಭವದ ಆರಾಧನಾ ಮಹೋತ್ಸವ]
ಕಾರ್ಪೋರೇಷನ್ ಬ್ಯಾಂಕ್ ಡಿಜಿಎಂ ವಿಠಲ ಶೆಣೈ, ಅಧಿಕಾರಿ ಕೆ.ಎಸ್.ನೇಗಿ, ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ ಪಾಟೀಲ ಉಪಸ್ಥಿತರಿದ್ದರು. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ಸಂಚರಿಸುವ ಈ ವಾಹನ ಆಯ್ದ ಸ್ಥಳಗಳಲ್ಲಿ ನಿಂತು ಜನತೆಯಲ್ಲಿ ಜಾಗೃತಿ ಮೂಡಿಸಲಿದೆ.
ಈ ವಾಹನದಲ್ಲಿ ದೊಡ್ಡದಾದ ಪ್ರೊಜೆಕ್ಟರ್ ಅಳವಡಿಸಲಾಗಿದ್ದು, ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ ಪ್ರಮುಖ ಸಂದೇಶಗಳು ಬಿತ್ತರವಾಗಲಿದೆ. ಪ್ರತಿ ದಿನ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ (ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ವಿರಾಮ) ಈ ವಾಹನ ಕರ್ತವ್ಯ ನಿರ್ವಹಿಸಲಿದೆ.['ಎತ್ತಿನಹೊಳೆ ಬಗ್ಗೆ ಹಾಸನ ಜಿಲ್ಲಾ ಅರಣ್ಯಾಧಿಕಾರಿಗಳಿಂದ ಸುಳ್ಳು ಮಾಹಿತಿ']
ಮಹಿಳೆಯರ ಸರ ಸೆಳೆದು ಪರಾರಿಯಾಗುವುದು, ಎಟಿಎಂ ನಂಬರ್ ಕೇಳಿ ವಂಚಿಸುವುದು, ಕಿಸೆಗಳ್ಳತನ, ಗಮನ ಬೇರೆಡೆ ಸೆಳೆದು ಬೆಲೆ ಬಾಳುವ ವಸ್ತುಗಳನ್ನು ದೋಚುವುದು ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ಪ್ರಮುಖ ಅಪರಾಧಗಳತ್ತ ಬೆಳಕು ಚೆಲ್ಲುವಲ್ಲಿ ಜಾಗೃತರಾಗಿರುವಂತೆ ಎಚ್ಚರಿಕೆ ಸಂದೇಶವನ್ನು ಈ ವಾಹನ ತನ್ನ ಪ್ರೊಜೆಕ್ಟರ್ ಮೂಲಕ ನೀಡಲಿದೆ.