ಮಂಗಳೂರು: 5 ಜೀವ ಬಲಿ ಪಡೆದ ಸರಣಿ ಅಪಘಾತ
ಮಂಗಳೂರು, ಜೂ.10: ಮಂಗಳೂರು ಹೊರವಲಯದ ವಳಚ್ಚಿಲ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಓರ್ವ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಂಟೈನರ್ ಲಾರಿಯೊಂದು ರಿಕ್ಷಾ ಮತ್ತು ಮಾರುತಿ 800 ಕಾರಿಗೆ ಢಿಕ್ಕಿ ಹೊಡೆದಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯು ವಳಚ್ಚಿಲ್ ಸಮೀಪದ ಯಶಸ್ವಿ ಹಾಲ್ ಬಳಿ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ನ ಮೇಲೇರಿ ವಿರುದ್ಧ ಬದಿಯ ರಸ್ತೆಯ ಮೂಲಕ ಆಗಮಿಸುತ್ತಿದ್ದ ಮಾರುತಿ 800 ಮತ್ತು ಆಟೊರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. [ದಕ್ಷಿಣ ಕನ್ನಡದಿಂದ ಹೊರ ಜಿಲ್ಲೆಗೆ ಮರಳು ಸಾಗಿಸುವಂತಿಲ್ಲ]
ಅಪಘಾತದ ತೀವ್ರತೆಗೆ ರಿಕ್ಷಾ ಕಂಟೈನರ್ನಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ. ರಿಕ್ಷಾದಲ್ಲಿ ಬಂಟ್ವಾಳ ಸಮೀಪದ ನಂದಾವರದ 6 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ವಳಚ್ಚಿಲ್ನ ಮುಹಮ್ಮದ್ ನಝೀರ್(21), ಅಹ್ಮದ್ ಹುಸೈನ್( 50), ಮುಹಮ್ಮದ್ ಹನೀಫ್ (21), ಮುಹಮ್ಮದ್ ಸಿನಾಝ್ (22) ಎಂದು ಗುರುತಿಸಲಾಗಿದೆ. ರಿಕ್ಷಾದಲ್ಲಿದ್ದ ಇನ್ನೋರ್ವ ಸಹಿತ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.[ಮಂಗಳೂರಲ್ಲಿ ತರಕಾರಿ, ಮಾಂಸ ಎರಡೂ ದುಬಾರಿ]
ಘಟನೆಗೆ ಕಂಟೈನರ್ ಚಾಲಕನ ನಿರ್ಲಕ್ಷವೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶಿತ ಜನರು ಕಂಟೈನರ್ ಲಾರಿಗೆ ಬೆಂಕಿ ಹಚ್ಚಲು ಮುಂದಾಗಿದ್ದು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸ್ಥಳದಲ್ಲಿ ಬಂಟ್ವಾಳ, ಮಂಗಳೂರು ಗ್ರಾಮಾಂತರ ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಬೀಡು ಬಿಟ್ಟಿದ್ದು, ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.