ನೋಟು ನಿಷೇಧದ ಎಫೆಕ್ಟು: ಮಂಗಳೂರು ದಡದಲ್ಲಿ ಶೇ 90ರಷ್ಟು ಬೋಟು
ಮಂಗಳೂರು, ಜನವರಿ 1: ಮಂಗಳೂರಿನಲ್ಲಿ ಮೀನುಗಾರಿಕೆ ಸಂಪೂರ್ಣ ನೆಲಕಚ್ಚಿದೆ. ಹೌದು, ನೋಟು ನಿಷೇಧದ ಪರಿಣಾಮ ಮೀನುಗಾರಿಕೆ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದ್ದು ಶೇ 80ರಷ್ಟು ಬೋಟುಗಳನ್ನು ದಡಕ್ಕೆ ನಿಲ್ಲಿಸಲಾಗಿದೆ. ಮಂಗಳೂರು ಬಂದರಿನಲ್ಲಿ ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕೇರಳ ರಾಜ್ಯಗಳ ಸುಮಾರು 5 ಸಾವಿರ ಮಂದಿ ಕೊಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಆದರೆ, ಮೀನುಗಾರಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೊಲಿ ಕಾರ್ಮಿಕರು ಊರಿಗೆ ಮರಳಿದ್ದಾರೆ. ಇನ್ನು ದಕ್ಕೆಯ ಪರಿಸರದಲ್ಲಿ ಶೇ 50ರಷ್ಟು ಅಂಗಡಿ, ಕ್ಯಾಂಟೀನ್ ಗಳು ಮೊದಲಾದ ಹತ್ತಾರು ವ್ಯವಹಾರ ನಡೆಯುತ್ತವೆ. ಮಧ್ಯಾಹ್ನ ತನಕ ಜಾತ್ರೆಯಂತೆ ವ್ಯವಹಾರ ನಡೆಯುವಲ್ಲಿ ಜನರು ಕಡಿಮೆಯಾಗಿ, ವ್ಯವಹಾರ ಕುಂಠಿತಗೊಂಡಿದೆ.[ನೋಟು ನಿಷೇಧದ 50ದಿನ: ಸಮೀಕ್ಷೆಯಲ್ಲಿ ಮತ್ತೆ ಮೋದಿಗೆ ಉಘೇ..ಉಘೇ..]
500 ಮತ್ತು 1000 ರುಪಾಯಿ ನೋಟು ನಿಷೇಧ ಹಾಗೂ ಬ್ಯಾಂಕ್ ನಲ್ಲಿ ನಿಗದಿತ ಪ್ರಮಾಣದ ನಗದು ಸಿಗದ ಹಿನ್ನೆಲೆಯಲ್ಲಿ ದೋಣಿಯಿಂದ ಬರುವ ಮೀನು ಖರೀದಿ ಕಡಿಮೆಯಾಗಿದೆ. ಮೀನಿನ ದರ ಕಡಿಮೆಯಾಗಿ ಮಾಲೀಕರಿಗೆ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ಮೀನುಗಾರಿಕೆ ಸ್ಥಗಿತ ಮಾಡಲಾಗಿದೆ ಎಂದು ಹೇಳುತ್ತಾರೆ ಮೀನುಗಾರರ ಸಂಘದ ಸದಸ್ಯ ಭಾಸ್ಕರ ಬೆಂಗ್ರೆ.
ಆಳಸಮುದ್ರ ಮೀನುಗಾರಿಕೆಗೆ ತೆರಳುವ ಸುಮಾರು 250ರಷ್ಟು ಬೋಟುಗಳು ನಿತ್ಯ ದಕ್ಕೆಗೆ ಬಂದು ಮೀನು ಖಾಲಿ ಮಾಡುತ್ತಿದ್ದರೆ, ಆದರೆ ಈಗ ಅವುಗಳ ಸಂಖ್ಯೆ ವಿಪರೀತ ಕಡಿಮೆಯಾಗಿದೆ. ನಿತ್ಯ ಮೀನುಗಾರಿಕೆಗೆ ತೆರಳುವ ಶೇ 90ರಷ್ಟು ಸಣ್ಣ ದೋಣಿಗಳು ದಡ ಸೇರಿವೆ.